ಪಿಎಸ್ಐ ಅಕ್ರಮದ ಹಿಂದಿನ ಕಿಂಗ್ ಪಿನ್ ಯಾರು: ಬಲ್ಲವರು ಇವರೊಬ್ಬರೇ!
ಹಾಸನ, ಮೇ 7: ಪಿಎಸ್ಐ ನೇಮಕಾತಿ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಆರೋಪ/ಪ್ರತ್ಯಾರೋಪದ ನಡುವೆ ಅರ್ಹ ಅಭ್ಯರ್ಥಿಗಳು ಎಂದಿನಂತೆ ದಿಕ್ಕಾಪಾಲಾಗುತ್ತಿದ್ದಾರೆ. ಇದರ ಯಾವ ಚಿಂತೆಯೂ ಇಲ್ಲದ ರಾಜಕಾರಣಿಗಳು ಎಂದಿನಂತೆ ಕೆಸೆರೆರೆಚಾಟದಲ್ಲಿ ತೊಡಗಿದ್ದಾರೆ.
ಈ ವಿಚಾರದಲ್ಲಿ ಚನ್ನಪಟ್ಟಣದಲ್ಲಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಬಿಜೆಪಿಯವರು ಅವಮಾನಿಸಿದ್ದಕ್ಕಾಗಿ, ಪೊಲೀಸರೇ ಮಾಹಿತಿಯನ್ನು ಲೀಕ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಕಳಚಿದ ಬಾಂಧವ್ಯದ ಕೊಂಡಿ: ರಾಜ್ಯದಲ್ಲಿ ಖಾಕಿ ವರ್ಸಸ್ ಖಾದಿ?
ರಾಜಕೀಯ ಕಾರಣಕ್ಕಾಗಿ ಈ ವಿಚಾರದಲ್ಲಿ ಸರಕಾರದ ತೇಜೋವಧೆ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರೆ, "ಸಚಿವ ಡಾ.ಅಶ್ವಥ್ ನಾರಾಯಣ ಭ್ರಷ್ಟಾಚಾರಕ್ಕೆ ವಿಶ್ವಮಾನವ, ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ಮತ್ತಷ್ಟು ಬಯಲು ಮಾಡುತ್ತೇವೆ"ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ.
ಇನ್ನು, ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಪಿಎಸ್ಐ ನೇಮಕಾತಿ ವಿಚಾರದಲ್ಲಿ ಅಸಲಿ ಕಿಂಗ್ ಪಿನ್ ಬೇರೆಯವರೊಬ್ಬರು ಇದ್ದಾರೆ ಎನ್ನುವ ಮೂಲಕ, ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ.
'ಸಚಿವ ಅಶ್ವಥ್ ನಾರಾಯಣ ಮಲ್ಲೇಶ್ವರಂನ ಗುಳುಂ ನಾರಾಯಣ'
ಮೂಲ ಕಿಂಗ್ ಪಿನ್ ನನ್ನು ಬಿಜೆಪಿ ಸರಕಾರಕ್ಕೆ ಟಚ್ ಮಾಡಲು ಸಾಧ್ಯವಿಲ್ಲ
"ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮೂಲ ಕಿಂಗ್ ಪಿನ್ ಹೆಸರು ಬಹಿರಂಗ ಪಡಿಸಲು ಈ ಸರಕಾರಕ್ಕೆ ಸಾಧ್ಯವಾ? ಹೆಸರು ಹೇಳಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ರಾಜ್ಯ ಬಿಜೆಪಿ ನಾಯಕರಿಗೆ ಇದೆಯಾ? ಅವರು ಹೆಸರು ಹೇಳಿದರೆ ಸರಕಾರ ಉರುಳಿ ಹೋಗುತ್ತದೆ. ಮೂಲ ಕಿಂಗ್ ಪಿನ್ ನನ್ನು ಬಿಜೆಪಿ ಸರಕಾರಕ್ಕೆ ಟಚ್ ಮಾಡಲು ಸಾಧ್ಯವಿಲ್ಲ. ಸರಕಾರ ನಡೆಸುತ್ತಿರುವವರಿಗೆ ಈ ವಿಚಾರ ಗೊತ್ತಿದೆಯೋ, ಇಲ್ಲವೋ ನನಗಂತೂ ಗೊತ್ತಿಲ್ಲ"ಎಂದು ಎಚ್.ಡಿ.ಕುಮಾರಸ್ವಾಮಿಯವರು ಹಾಸನದಲ್ಲಿ ಹೇಳುವ ಮೂಲಕ, ಬಿಜೆಪಿಗೆ ಇನ್ನಷ್ಟು ಮುಜುಗರವನ್ನು ತಂದೊಡ್ಡಿದ್ದಾರೆ.
ಅವರು ಯಾರೆಂದು ಆಮೇಲೆ ಹೇಳೋಣವಂತೆ, ಎಚ್.ಡಿ.ಕುಮಾರಸ್ವಾಮಿ
ಅವರು ಯಾರು ಎಂದೆನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "ಅವರು ಯಾರೆಂದು ಆಮೇಲೆ ಹೇಳೋಣವಂತೆ, ಪಾಪ ಬಹಳ ಪಾರದರ್ಶಕವಾಗಿ, ಕಠಿಣವಾದಂತಹ ತನಿಖೆ ನಡೆಸುತ್ತಿದ್ದಾರಲ್ಲವೇ, ಹಾಗಾಗಿ, ಅಂತಿಮವಾಗಿ ಯಾರ ಹೆಸರನ್ನೆಲ್ಲಾ ತರುತ್ತಾರೆ, ಕ್ಲೀನ್ ಚಿಟ್ ಕೊಡುತ್ತಾರೆ, ತಪ್ಪಿತಸ್ಥರನ್ನು ಆರಾಮವಾಗಿ ತಿರುಗಾಡಿಕೊಂಡು ಹೋಗಲು ಬಿಡುತ್ತಾರೆ ಎನ್ನುವುದನ್ನು ನೋಡೋಣವಂತೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಈ ಅಕ್ರಮದ ಹಿಂದಿನ ಕಿಂಗ್ ಪಿನ್ ನಮ್ಮ ರಾಜ್ಯದವರೇ
"ಈ ಅಕ್ರಮದ ಹಿಂದಿನ ಕಿಂಗ್ ಪಿನ್ ನಮ್ಮ ರಾಜ್ಯದವರೇ, ಹೊರಗಿನವರಲ್ಲ. ಅವರನ್ನು ಭವಿಷ್ಯದ ನಾಯಕರುಗಳು ಎಂದು ಬಿಂಬಿಸಲಾಗುತ್ತಿದೆ. ಉನ್ನತ ಶಿಕ್ಷಣದ್ದು ಬೇರೆ ವಿಚಾರ, ಇದೊಂದು ಇನ್ನೊಂದು ಬಹುದೊಡ್ಡ ಹಗರಣ. ಇಲ್ಲಂತೂ ಒಬ್ಬೊಬ್ಬರು ಒಂದೊಂದು ಇಲಾಖೆಯನ್ನು ಕೊಂಡು ಕೊಂಡು ಬಿಟ್ಟಿದ್ದಾರೆ. ಅಯ್ಯಯ್ಯೋ ಇದರ ಬಗ್ಗೆ ಹೇಳಲು ನನ್ನಲ್ಲಿ ಪದಗಳೇ ಇಲ್ಲ"ಎಂದು ಕುಮಾರಸ್ವಾಮಿ ವ್ಯಾಖ್ಯಾನಿಸಿದ್ದಾರೆ.
ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎನ್ನುವ ಸ್ಟ್ಯಾಂಡರ್ಡ್ ಹೇಳಿಕೆ
ಕುಮಾರಸ್ವಾಮಿಯವರ ಹೇಳಿಕೆಯನ್ನು ಅವಲೋಕಿಸಿದಾಗ ಎಂದಿನಂತೆ ಅಡ್ಡಗೋಡೆಯ ಮೇಲೆ ದೀಪವನ್ನು ಇಟ್ಟಂತೆ ಹೇಳಿಕೆಯನ್ನು ನೀಡಿದ್ದಾರೆ. ಯಾವುದೇ ಭ್ರಷ್ಟಾಚಾರ ವಿಚಾರವಿರಲಿ ಅದರ ಮೂಲದ ಬಗ್ಗೆ ಮಾತನಾಡುವ ಕುಮಾರಸ್ವಾಮಿ, ನಿಜವಾದ ಆರೋಪಿಗಳು ಇದ್ದಿದ್ದೇ ಆದಲ್ಲಿ ಅವರ ಹೆಸರನ್ನು ಇದುವರೆಗೂ ಬಹಿರಂಗ ಪಡಿಸಿದ ಉದಾಹರಣೆಗಳು ಕಮ್ಮಿ. ಎಲ್ಲಾ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎನ್ನುವ ಸ್ಟ್ಯಾಂಡರ್ಡ್ ಹೇಳಿಕೆ ಇವರಿಂದ ಹೊರಬರುತ್ತದೆಯೇ ವಿನಃ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಅವರ ಹೇಳಿಕೆಯನ್ನು ಕೂಲಂಕುಷವಾಗಿ ಗಮನಿಸುವುದಾದರೆ ಪಿಎಸ್ಐ ಅಕ್ರಮದ ಕಿಂಗ್ ಪಿನ್ ಯಾರೆನ್ನುವುದು ಅವರಿಗೆ ತಿಳಿದಿದೆ. ಅದನ್ನು ಬಹಿರಂಗ ಪಡಿಸಿ, ಅರ್ಹರಿಗೆ ನ್ಯಾಯ ಕೊಡಿಸುವುದರಲ್ಲಿ ತಪ್ಪೇನಿದೆ? ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ..
Recommended Video