ಹಸಿರುಭೂಮಿ ಪ್ರತಿಷ್ಠಾನದಿಂದ ಕಲ್ಯಾಣಿಗಳಿಗೆ ಮರುಜೀವ
ಹಾಸನ, ಮಾರ್ಚ್ 08: ಹಾಸನ ಜಿಲ್ಲೆಯಲ್ಲಿ ಹಳೆಯ ಕಾಲದ ಕಲ್ಯಾಣಿಗಳಿದ್ದು, ಇವುಗಳ ಪೈಕಿ ಬಹುತೇಕ ನಿರ್ವಹಣೆಯ ಕೊರತೆಯಿಂದಾಗಿ ಪಾಳುಬಿದ್ದಿವೆ. ಈ ಕಲ್ಯಾಣಿಗಳು ಹಿಂದಿನ ಕಾಲದಲ್ಲಿ ನೀರು ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು. ಅಲ್ಲದೆ ಆಗಿನ ಕಾಲದಲ್ಲಿ ಅಂತರ್ಜಲ ಹೆಚ್ಚಿನ ಪ್ರಮಾಣದಲ್ಲಿದ್ದುದರಿಂದ ಸದಾ ತುಂಬಿ ತುಳುಕುತ್ತಿದ್ದವು.
ಆದರೆ ಬದಲಾದ ಕಾಲಘಟ್ಟದಲ್ಲಿ ವಾತಾವರಣ ಬದಲಾಗಿದ್ದು, ಬಹಳಷ್ಟು ಕಲ್ಯಾಣಿಗಳು ನಿರ್ವಹಣೆಯಿಲ್ಲದೆ ಮುಚ್ಚಿಹೋಗಿದ್ದವು. ಇಂತಹ ಕಲ್ಯಾಣಿಗಳನ್ನು ಗುರುತಿಸಿ ಅವುಗಳನ್ನು ಪುನರುಜ್ಜೀವನ ಗೊಳಿಸುವ ಕಾರ್ಯದಲ್ಲಿ ಹಾಸನದ ಹಸಿರುಭೂಮಿ ಪ್ರತಿಷ್ಠಾನವು ಯಶಸ್ಸು ಕಂಡಿದೆ.
ಜೀವಜಲದ ಉಳಿವಿನ 'ಉನ್ನತ' ಕಾರ್ಯಕ್ಕೆ ನೃತ್ಯದ ಸಾಥ್!
ಈ ಟ್ರಸ್ಟ್ ಕಳೆದ ಹತ್ತು ತಿಂಗಳಿಂದ ಇಪ್ಪತ್ತಕ್ಕೂ ಹೆಚ್ಚು ಕಲ್ಯಾಣಿಗಳ ಪುನಶ್ಚೇತನಗೊಳಿಸುವ ಕಾರ್ಯವನ್ನು ಮಾಡಿದ್ದು, ಕೆಲವು ಕಲ್ಯಾಣಿಗಳಲ್ಲಿ ಅಂತರ್ಜಲ ಒಸರಿರುವುದು ಕಂಡು ಬಂದಿದೆ. ಮಳೆ ಸಮರ್ಪಕವಾಗಿ ಬಂದ ಕಡೆಗಳಲ್ಲಿ ಕಲ್ಯಾಣಿಗೆ ನೀರು ಬಂದಿದ್ದು ದನಕರುಗಳಿಗೆ ನೀರುಣಿಸುತ್ತಿದೆ. ಸುತ್ತಮುತ್ತಲ ಕೊಳವೆ ಬಾವಿಗಳು ಕೂಡ ತಾನಾಗಿಯೇ ಮರುಜೀವ ಪಡೆದಿವೆ. ಹೀಗಾಗಿ ಪ್ರತಿಷ್ಠಾನದ ಹಸಿರುಭೂಮಿ ಬಳಗದ ವತಿಯಿಂದ ಪ್ರತಿವಾರ ಒಂದು ಕಲ್ಯಾಣಿಯನ್ನು ಹೂಳು ತೆಗೆದು, ಸ್ವಚ್ಛ ಮಾಡಿ, ಬರಲಿರುವ ಮಳೆ ನೀರನ್ನು ಹಿಡಿದಿಡಲು ಸಿದ್ಧತೆ ಮಾಡಲಾಗುತ್ತಿದೆ.
ಹಾಸನ ತಾಲೂಕಿನ ನಿಟ್ಟೂರು ಬೂದೇಶ್ವರ ಮಠದ ಹೊಲದಲ್ಲಿ ಐವತ್ತು ವರ್ಷಗಳ ಹಿಂದೆ ನಿರ್ಮಿಸಿದ್ದ ದೊಡ್ಡ ಕಲ್ಯಾಣಿಯಿದ್ದು, ಅದನ್ನು ಉಪಯೋಗಿಸದೆ ಬಿಟ್ಟಿದ್ದರಿಂದ ಪಾಳು ಬಿದ್ದಿದ್ದು, ಪೊದೆ, ಗಿಡ, ಮುಳ್ಳುಗಂಟಿಯಿಂದ ಆವೃತವಾಗಿತ್ತು. ಇತ್ತೀಚೆಗೆ ಹಸಿರುಭೂಮಿ ಬಳಗದ ಮೂವತ್ತಕ್ಕೂ ಹೆಚ್ಚು ಸದಸ್ಯರು ಸ್ಥಳಕ್ಕೆ ಹೋಗಿ ಶ್ರಮದಾನದ ಮೂಲಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದ್ದಾರೆ.
ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ.ಎಚ್.ಎಲ್. ನಾಗರಾಜ್, ಸಂಚಾಲಕರಾದ ಡಾ.ಮಂಜುನಾಥ್, ಕಾರ್ಯದರ್ಶಿ ರೂಪ ಹಾಸನ, ಖಜಾಂಚಿಗಳಾದ ಟಿ.ಎಂ.ಶಿವಶಂಕರಪ್ಪ, ಸದಸ್ಯರಾದ ಪುಟ್ಟಯ್ಯ, ಅಪ್ಪಾಜಿಗೌಡ ಮತ್ತಿತರ ಸದಸ್ಯರು ತಂಡದಲ್ಲಿದ್ದು ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಸನದಿಂದ ಪ್ರತಿ ಭಾನುವಾರ ಶ್ರಮದಾನಕ್ಕೆ ಬಸ್ ಮೂಲಕ ತಂಡವು ತೆರಳಿ ಕಲ್ಯಾಣಿಗಳನ್ನು ಸ್ವಚ್ಛಗೊಳಿಸುತ್ತಿದೆ.
ಟ್ರಸ್ಟ್ ನ ಕಾರ್ಯದಿಂದಾಗಿ ಅವನತಿಯ ಹಾದಿಯಲ್ಲಿದ್ದ ಕಲ್ಯಾಣಿಗಳು ಪುನಶ್ಚೇತನಗೊಳ್ಳುತ್ತಿದ್ದು, ಇದರಿಂದ ಸಾರ್ವಜನಕರಿಗೆ ಅನುಕೂಲವಾಗುತ್ತಿದೆ. ಜತೆಗೆ ಅಂತರ್ಜಲ ಹೆಚ್ಚಳಕ್ಕೂ ಕಾರಣವಾಗುತ್ತಿದೆ.