ಲಾರಿ ಚಾಲಕರಿಗೆ ಪಂಗನಾಮ ಹಾಕಿದ ಅಪರಿಚಿತ!
ಹಾಸನ: ಕಡಿಮೆ ದರದಲ್ಲಿ ಡಿಸೇಲ್ ಕೊಡಿಸುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಲಾರಿ ಚಾಲಕರಿಂದ ರು 33 ಸಾವಿರ ಪಡೆದು ವಂಚಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ನಗರದ ಡೈರಿ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಸೋಮವಾರ ರಾತ್ರಿ ಡಿಸೇಲ್ ಹಾಕಿಸಲು ಬಂದಿದ್ದ ಆರೇಳು ಲಾರಿ ಚಾಲಕರ ಬಳಿ ಮಹೇಶ್ ಎಂದು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್ ನನಗೆ ಟೆಂಡರ್ ಆಗಿದ್ದು ನಿಮಗೆ ಲೀಟರಿಗೆ ರು 42 ಗಳಿಗೆ ಡಿಸೇಲ್ ನೀಡುವುದಾಗಿ ಹೇಳಿ ನಂಬಿಸಿ ಲಾರಿ ಚಾಲಕರಿಂದ ರು 33 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದಾನೆ.[ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಮೂವರು ಸರಗಳ್ಳರು]
ನಂತರ ಎಲ್ಲ ಲಾರಿಗಳಿಗೂ ಡೀಸೆಲ್ ತುಂಬಿಸಿ ಟೀ ಕುಡಿದು ಬರುವುದಾಗಿ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೆಟ್ರೋಲ್ಬಂಕ್ ನವರು ಲಾರಿಗಳಿಗೆ ತುಂಬಿಸಿದ ಡೀಸೆಲ್ ಹಣ ನೀಡುವಂತೆ ಲಾರಿ ಚಾಲಕರನ್ನು ಕೇಳಿದ್ದಾರೆ. ಇದಕ್ಕೆ ಲಾರಿ ಚಾಲಕರು ಮಹೇಶ್ ಎಂಬುವರು ಹಣ ನೀಡುವುದಾಗಿ ಹೇಳಿದ್ದಾರೆ. ಆದರೆ ಪೆಟ್ರೋಲ್ ಬಂಕ್ ನವರು ಮಹೇಶ್ ಎಂಬಾತನಿಗೂ ತಮಗೂ ಯಾವುದೇ ಸಂಬಂಧವಿಲ್ಲ ಲಾರಿಗಳಿಗೆ ತುಂಬಿದ ಡೀಸೆಲ್ ಹಣ ನೀಡುವ ತನಕ ಲಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದಿದ್ದಾರೆ.
ಇದರಿಂದ ಕಂಗೆಟ್ಟ ಲಾರಿ ಚಾಲಕರು ಮಹೇಶ್ ಗಾಗಿ ಗಂಟೆಗಟ್ಟಲೇ ಕಾದರೂ ಆತ ಬಾರದೆ ಇದ್ದುದರಿಂದ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ನಂತರ ಪೆಟ್ರೋಲ್ ಬಂಕ್ ನವರು ಲಾರಿಗಳಿಗೆ ತುಂಬಿಸಿದ್ದ ಡೀಸೆಲ್ ನ್ನು ಹಿಂಪಡೆದಿದ್ದಾರೆ. ಇದರಿಂದ ಲಾರಿಗಳು ಡೀಸೆಲ್ ಇಲ್ಲದೆ ಪೆಟ್ರೋಲ್ ಬಂಕ್ ನಲ್ಲೇ ನಿಲ್ಲುವಂತಾಗಿದೆ.