ಹಾಸನದಲ್ಲಿ ಜನತಾ ಜಲಧಾರೆ: ಎಚ್ಡಿಕೆ, ಗೌಡ್ರಿಗೆ ಕಸಿವಿಸಿ ತಂದ ಇಬ್ಬರ ಗೈರು!
ಹಾಸನ, ಏಪ್ರಿಲ್ 22: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆಯ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಹಾಸನದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರ ಜಿಲ್ಲೆಯಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ.
ಹಾಸನ ಮತ್ತು ಮಂಡ್ಯ ಜಿಲ್ಲೆಗಳು ಜೆಡಿಎಸ್ಸಿನ ಭದ್ರಕೋಟೆಗಳಲ್ಲಿ ಒಂದು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಹಾಸನ ನಗರ ಕ್ಷೇತ್ರವೊಂದನ್ನು ಬಿಟ್ಟು, ಮಿಕ್ಕೆಲ್ಲಾ ಕಡೆ ಜೆಡಿಎಸ್ ಜಯಭೇರಿ ಬಾರಿಸಿತ್ತು. ಆಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ವ್ಯತ್ಯಾಸವಿದೆ ಎನ್ನುವುದು ಇಬ್ಬರು ಶಾಸಕರ ಗೈರಿನಿಂದ ಸ್ಪಷ್ಟವಾಗುತ್ತಿದೆ.
ಹಾಸನ: ಜನತಾ ಜಲಧಾರೆಯಲ್ಲಿ ಎಚ್ಡಿಕೆ ಕಣ್ಣೀರಧಾರೆ
ಮುಂಬರುವ ಚುನಾವಣೆಯ ಹೊತ್ತಿನಲ್ಲಿ ಹಲವು ಜೆಡಿಎಸ್ ಶಾಸಕರು ಪಕ್ಷ ತೊರೆಯಲಿದ್ದಾರೆ ಎನ್ನುವುದು ಈಗಾಗಲೇ ಸ್ಪಷ್ಟವಾಗಿದೆ. ಈ ಪಟ್ಟಿಯಲ್ಲಿರುವ ಕೆಲವು ಹಾಲೀ ಶಾಸಕರು ಬಹಿರಂಗವಾಗಿಯೇ ಪಕ್ಷ ತೊರೆಯುವುದಾಗಿ ಹೇಳಿದ್ದಾಗಿದೆ.
ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಗೈರಾಗಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮಗುದೊಮ್ಮೆ ಬಹಿರಂಗವಾಗಿದೆ. ಗೈರಾದ ಇಬ್ಬರಲ್ಲಿ ಒಬ್ಬರ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ್ರು ಮತ್ತು ಎಚ್.ಡಿ.ಕುಮಾರಸ್ವಾಮಿ ತುಂಬಿದ ಸಭೆಯಲ್ಲೇ ವ್ಯಂಗ್ಯವಾಡಿದ್ದಾರೆ.
ದೇವೇಗೌಡ್ರು ಹೇಳಿದ ಆ ಮೂವರು ಬ್ರಾಹ್ಮಣರ ಕಥೆ: ಅವರ್ಯಾರು?
ಸಿದ್ದರಾಮಯ್ಯನವರನ್ನು ಹೊಗಳುವ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ
ಸದಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಗಳುವ ಮೂಲಕ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಜೆಡಿಎಸ್ ಪಕ್ಷಕ್ಕೆ ಇರಿಸುಮುರಿಸು ತಂದಿದ್ದರು. ಅಸೆಂಬ್ಲಿಯಲ್ಲಿ ಕುಮಾರಸ್ವಾಮಿ ಸಮ್ಮುಖದಲ್ಲೇ ಸಿದ್ದರಾಮಯ್ಯನವರನ್ನು ಶಿವಲಿಂಗೇಗೌಡ್ರು ಹೊಗಳಿದ ಉದಾಹರಣೆಗಳಿವೆ. ಈ ವಿಚಾರವನ್ನೂ ಜನತಾ ಜಲಧಾರೆ ಸಭೆಯಲ್ಲಿ ಪ್ರಸ್ತಾವಿಸಿದ ಕುಮಾರಸ್ವಾಮಿ, ವಿಧಾನಸೌಧದಲ್ಲಿ ಇವರ ಡ್ರಾಮಾ ನನಗೆ ಗೊತ್ತಿಲ್ಲವೇ ಎಂದಿದ್ದರು. ನಿರೀಕ್ಷೆಯಂತೆ ಜಲಧಾರೆ ಕಾರ್ಯಕ್ರಮದಲ್ಲಿ ಶಿವಲಿಂಗೇಗೌಡ ಗೈರಾಗಿದ್ದರು.
ಅರಕಲಗೂಡಿನ ಎ.ಟಿ.ರಾಮಸ್ವಾಮಿ ಕೂಡಾ ಜಲಧಾರೆ ಕಾರ್ಯಕ್ರಮದಿಂದ ದೂರ
ಇನ್ನೋರ್ವ ಶಾಸಕ, ಅರಕಲಗೂಡಿನ ಎ.ಟಿ.ರಾಮಸ್ವಾಮಿ ಕೂಡಾ ಜಲಧಾರೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರಿಗೆ ವರಿಷ್ಠರು ಮಣೆ ಹಾಕುತ್ತಿದ್ದಾರೆ ಎಂದು ರಾಮಸ್ವಾಮಿ ಕಳೆದ ವರ್ಷದ ಸೆಪ್ಟಂಬರ್ ನಲ್ಲಿ ಗೌಡ್ರು ಮತ್ತು ಕುಮಾರಸ್ವಾಮಿಯವರ ವಿರುದ್ದ ಅಸಮಾಧಾನವನ್ನು ಹೊರಹಾಕಿದ್ದರು. ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಹೊನ್ನವಳ್ಳಿ ಸತೀಶ್ ಅವರನ್ನು ವರಿಷ್ಠರು ಪುನರಾಯ್ಕೆ ಮಾಡಿದ್ದರು. "ಸತೀಶ್, ಕಳೆದ ಚುನಾವಣೆಯಲ್ಲಿ ಪಕ್ಷದ ವಿರುದ್ದ ಕೆಲಸ ಮಾಡಿದ್ದರು, ಆದಾಗ್ಯೂ, ನನ್ನ ಬಳಿ ಮಾತನಾಡದೇ ಅವರನ್ನೇ ಮತ್ತೆ ಆಯ್ಕೆ ಮಾಡಲಾಗಿದೆ" ಎಂದು ರಾಮಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದರು.
ಅರಸೀಕೆರೆ ಕ್ಷೇತ್ರದಲ್ಲಿ ನಾಟಕ ಮಾಡದೇ ರಾಜಕೀಯ ಮಾಡಲು ಸಾಧ್ಯವೇ?
ಎ.ಟಿ.ರಾಮಸ್ವಾಮಿ ಮತ್ತು ಶಿವಲಿಂಗೇಗೌಡ್ರು ಬಹುತೇಕ ಜೆಡಿಎಸ್ ಕಾರ್ಯಕ್ರಮದಿಂದ ದೂರ ಉಳಿಯುತ್ತಿದ್ದಾರೆ. ಅದರಲ್ಲೂ, ಶಿವಲಿಂಗೇಗೌಡ್ರು ಬಹಿರಂಗವಾಗಿಯೇ ಸಿದ್ದರಾಮಯ್ಯನವರನ್ನು ಹೊಗಳುವ ಮೂಲಕ, ಕಾಂಗ್ರೆಸ್ ಸೇರುವ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. "ಅರಸೀಕೆರೆ ಕ್ಷೇತ್ರದಲ್ಲಿ ನಾಟಕ ಮಾಡದೇ ರಾಜಕೀಯ ಮಾಡಲು ಸಾಧ್ಯವೇ? ಎಲ್ಲರ ಕಾಲಿಗೆ ಬೀಳದೇ ವೋಟ್ ಪಡೆಯಲು ಸಾಧ್ಯವೇ? ಒಂದು ಬಾರಿ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ದೇವೇಗೌಡರಿಗೆ ಹದಿಮೂರು ಸಾವಿರ ಮತಗಳು ಬಂದಿದ್ದವು" ಎಂದು ಶಿವಲಿಂಗೇಗೌಡ್ರು, ದಳಪತಿಗಳ ನಾಟಕದ ಹೇಳಿಕೆಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಹಾಸನದಲ್ಲಿ ನಡೆದ ಜನತಾ ಜಲಧಾರೆ ಯಾತ್ರೆ
ಹಾಸನದಲ್ಲಿ ನಡೆದ ಜನತಾ ಜಲಧಾರೆ ಯಾತ್ರೆ, ಸಮಾವೇಶದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಶಿವಲಿಂಗೇಗೌಡ ವಿರುದ್ಧ ಬಹಿರಂಗ ವೇದಿಕೆಯಲ್ಲೇ ವಾಗ್ದಾಳಿ ನಡೆಸಿದ್ದರು, ಈಗ, ಅವರ ಜೊತೆಗೆ ಕೆ.ಟಿ.ರಾಮಸ್ವಾಮಿ ಕೂಡಾ ಗೈರಾಗುವ ಮೂಲಕ, ಮತ್ತೊಂದು ವಿಕೆಟ್ ಜೆಡಿಎಸ್ನಿಂದ ಪತನಗೊಳ್ಳಲು ಸಜ್ಜಾಗುತ್ತಿದೆಯೇ ಎನ್ನುವ ಅನುಮಾನ ಹಾಸನದ ಜನರಲ್ಲಿ ಕಾಡಲಾರಂಭಿಸಿದೆ.