ಹೇಮಾವತಿ ನದಿಯಿಂದ ತುಮಕೂರು ಜಿಲ್ಲೆಗೆ 2 ಟಿಎಂಸಿ ನೀರು
ಬೆಂಗಳೂರು/ಹಾಸನ, ಜನವರಿ 7: ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ಸುಮಾರು 2 ಟಿಎಂಸಿ ಅಡಿಗಳಷ್ಟು ನೀರನ್ನು ತುಮಕೂರು ಜಿಲ್ಲೆಯ ವಿವಿಧ ಭಾಗಗಳಿಗೆ ಹರಿಸಲು ನಿರ್ಧರಿಸಲಾಗಿದೆ. ಕುಡಿಯುವ ನೀರು ಮತ್ತು ಕೆರೆಗಳಿಗೆ ನೀರು ತುಂಬಿಸಲು ಹೇಮಾವತಿ ನದಿನೀರು ಬಳಕೆಯಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರು ಹಂಚಿಕೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹೇಮಾವತಿ ಜಲಾಶಯದಿಂದ ನೀರು ಹಂಚಿಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ತುಮಕೂರು ಜಿಲ್ಲೆಗೆ ನೀರಿನ ಕೊರತೆ ಆಗುತ್ತಿದೆ. ಅಲ್ಲದೆ, ಅಲ್ಲಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು ಕಂಡು ಬಂದಿದೆ. ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕಾನೂನು ಚೌಕಟ್ಟಿನಲ್ಲಿ ಹಂಚಿಕೆಯಾಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ. ತುಮಕೂರಿಗೆ 23 ಟಿಎಂಸಿ ನೀರು ಬಿಡಲಾಗಿದೆ ಎಂದು ಸಚಿವರು ಹೇಳಿದರು.
ನೀರಿನ ಲಭ್ಯತೆಗೆ ತಕ್ಕಂತೆ ಬೆಳೆ
15 ದಿನಗಳಲ್ಲಿ 2 ಟಿಎಂಸಿ ನೀರು ತುಮಕೂರಿಗೆ ಬಿಡಬೇಕಿದೆ. ನೀರು ಕಾಲುವೆಗಳಿಗೆ ಸೇರದೆ ಪೋಲಾಗುತ್ತಿದೆ. ಹಾಗಾಗಿ ನಾಲೆಗಳನ್ನು ಆಧುನೀಕರಣಗೊಳಿಸಬೇಕಿದೆ. ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆಯಬೇಕು. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.
23 ಟಿಎಂಸಿ ನೀರು ಹರಿಸಲಾಗಿದೆ
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ತುಮಕೂರು ಜಿಲ್ಲೆಯ ನಾಲೆಗಳಿಗೆ ಹೇಮಾವತಿ ಜಲಾಶಯದಿಂದ ನೀರು ಬಿಡುತ್ತಿಲ್ಲ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಮಾಡಿರುವ ಆರೋಪ ನಿರಾಧಾರ ಎಂದರು.
ನಾವು ಅಧಿಕಾರಕ್ಕೆ ಬಂದ ನಂತರ ಕಾನೂನು ಬದ್ಧವಾಗಿ ಇದುವರೆಗೆ 23 ಟಿಎಂಸಿ ನೀರು ಹರಿಸಲಾಗಿದೆ. ಬಾಕಿ ಇರುವ ಎರಡು ಟಿಎಂಸಿ ನೀರನ್ನೂ ಕೊಡುತ್ತೇವೆ. ಇನ್ನೆರಡು ತಿಂಗಳಲ್ಲಿ ಬೇಸಿಗೆ ಇದೆ, ಬಾಕಿ ನೀರನ್ನು ಈಗಲಾದರೂ ಪಡೆದುಕೊಳ್ಳಿ ಆನಂತರವಾದರೂ ಪಡೆದುಕೊಳ್ಳಲಿ, ನಮ್ಮದೇನು ಅಭ್ಯಂತರವಿಲ್ಲ ಎಂದರು.
ಸಂಸದ ಬಸವರಾಜು ವಿರುದ್ಧ ರೇವಣ್ಣ ಆಕ್ರೋಶ
ಅಗತ್ಯವಿದ್ದಲ್ಲಿ ಹೇಮಾವತಿ ಅಣೆಕಟ್ಟಿನ ಕೀಲಿ ಕೈಯನ್ನು ಸಂಸದ ಜಿಎಸ್ ಬಸವರಾಜು ಅವರೇ ಇಟ್ಟುಕೊಳ್ಳಲಿ. ಯಾವಾಗ ಬೇಕೋ ಆಗ ನೀರು ತೆಗೆದುಕೊಳ್ಳಲಿ. ನಂತರ, ಕುಡಿಯುವ ನೀರಿಗೆ ತೊಂದರೆ ಎದುರಾದರೇ ಅದಕ್ಕೆ ನಾವು ಜವಾಬ್ದಾರರಲ್ಲ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ನೀರಿನ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ತುಮಕೂರಿಗೆ ಹೇಮಾವತಿ ನದಿ ನೀರಿನ ಆಸರೆ
ಹೇಮಾವತಿ ಜಲಾಶಯದ ಗರಿಷ್ಟ ಎತ್ತರ 146 ಅಡಿಗಳು (ತಳಪಾಯದ ಮೇಲ್ಮಟ್ಟದಿಂದ). ಅಣೆಕಟ್ಟೆಯಲ್ಲಿ 37.103 ಟಿಎಂಸಿ ನೀರನ್ನು ಸಂಗ್ರಹಣೆ ಮಾಡಬಹುದಾಗಿದೆ.
ಹೇಮಾವತಿ ಜಲಾಶಯ ಹೇಮಾವತಿ ಎಡದಂಡೆ ನಾಲೆ, ನಾಗಮಂಗಲ ಶಾಖಾ ನಾಲೆ, ತುಮಕೂರು ಶಾಖಾ ನಾಲೆ, ಹೇಮಾವತಿ ಬಲದಂಡೆ ನಾಲೆ, ಹೇಮಾವತಿ ಬಲಮೇಲ್ದಂಡೆ ನಾಲೆ ಎಂಬ 5 ನಾಲೆಗಳನ್ನು ಹೊಂದಿದೆ.ಜಲಾಶಯ ಹಾಸನ ಜಿಲ್ಲೆ ಮಾತ್ರವಲ್ಲದೇ ಮಂಡ್ಯ, ಮೈಸೂರು ಜಿಲ್ಲೆಗಳ 6,720 ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ವಿವಿಧ ನೀರಾವರಿ ಯೋಜನೆ ಸೇರಿ ಜಲಾಶಯ 7 ಲಕ್ಷ ಎಕರೆ ಅಚ್ಚುಕಟ್ಟು ಹೊಂದಿದೆ.