ಯಗಚಿ ಡ್ಯಾಂನತ್ತ ಪ್ರವಾಸಿಗರ ದಂಡು; ಬೇಕಿದೆ ಮೂಲ ಸೌಲಭ್ಯ
ಹಾಸನ, ಅಕ್ಟೋಬರ್ 19; ಹಾಸನ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಬೇಲೂರು ಸಮೀಪದಲ್ಲಿನ ಯಗಚಿ ಜಲಾಶಯ ಕೊನೆಗೂ ಭರ್ತಿಯಾಗಿದ್ದು, ತುಂಬಿ ತುಳುಕುವ ಜಲಾಶಯವನ್ನು ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಮಳೆ ಸಮರ್ಪಕಾಗಿ ಸುರಿದಿದ್ದರೆ ಜೂನ್ ತಿಂಗಳಿನಲ್ಲಿಯೇ ಜಲಾಶಯ ಭರ್ತಿಯಾಗಬೇಕಿತ್ತು. ಆದರೆ ಜುಲೈ, ಆಗಸ್ಟ್ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರಿಂದ ಭರ್ತಿಯಾಗಿರಲಿಲ್ಲ. ಇದೀಗ ಡ್ಯಾಂ ಭರ್ತಿಯಾಗಿದ್ದು, ಪ್ರವಾಸಿಗರು ಇತ್ತ ಬರುತ್ತಿದ್ದಾರೆ.
ಯಗಚಿ ಜಲಾಶಯ ಭರ್ತಿಯಾಗಲು ಒಂದು ಅಡಿ ನೀರು ಮಾತ್ರ ಬಾಕಿ
ಈ ಬಾರಿ ಮುಂಗಾರು ಮಳೆಯಿಂದ ತುಂಬ ಬೇಕಾದ ಜಲಾಶಯವು ಹಿಂಗಾರು ಮಳೆಯಿಂದ ತುಂಬುವಂತಾಗಿದೆ. ಜೂನ್ ತಿಂಗಳಲ್ಲಿ ಸುರಿದ ಮಳೆಗೆ ಭರ್ತಿಯಾಗಲು ಒಂದು ಅಡಿಯಷ್ಟೇ ಬಾಕಿಯಿತ್ತು. ಆದರೆ ನಂತರದ ದಿನಗಳಲ್ಲಿ ಮಳೆ ಕ್ಷೀಣಿಸಿದ ಪರಿಣಾಮ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿರಲಿಲ್ಲ.
ಕೆಆರ್ಎಸ್ ಮಾದರಿಯಲ್ಲೇ ಯಗಚಿ ಜಲಾಶಯ ಅಭಿವೃದ್ಧಿ
ಅಕ್ಟೋಬರ್ ತಿಂಗಳಲ್ಲಿ ರಜಾ ದಿನಗಳು ಹೆಚ್ಚು ಇರುವುದರಿಂದ ಪ್ರವಾಸಿಗರು ಬೇಲೂರು, ಹಳೆಬೀಡಿನತ್ತ ಬರುತ್ತಿದ್ದು, ಹೀಗೆ ಬಂದವರು ಸಮೀಪದ ಯಗಚಿ ಜಲಾಶಯಕ್ಕೂ ಭೇಟಿ ನೀಡುತ್ತಿದ್ದಾರೆ. ಜಲಾಶಯ ಸುಂದರವಾದ ಪರಿಸರದಲ್ಲಿದೆ, ಆದ್ದರಿಂದ ಪ್ರವಾಸಿಗರು ಒಂದಷ್ಟು ಸಮಯವನ್ನು ಕಳೆಯುವ ಸಲುವಾಗಿ ಇಲ್ಲಿಗೆ ಬರುತ್ತಿದ್ದಾರೆ. ಆದರೆ ಇಲ್ಲಿ ಜಲಾಶಯವಿದೆಯಾದರೂ ಪ್ರವಾಸಿಗರಿಗೆ ಯಾವುದೇ ಅನುಕೂಲವಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ತಿಪ್ಪಗೊಂಡನಹಳ್ಳಿ ಡ್ಯಾಂ ನೀರು ಬೆಂಗಳೂರಿಗೆ ಬರುವುದು ಮತ್ತಷ್ಟು ವಿಳಂಬ
ನೀರು ಸಂಗ್ರಹಕ್ಕಷ್ಟೆ ಸೀಮಿತ
ಯಗಚಿ ಜಲಾಶಯವನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಮನವಿಗಳು ಹಿಂದಿನಿಂದಲೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಆದರೆ ಆ ಬಗ್ಗೆ ಇಲ್ಲಿ ತನಕ ಯಾರೂ ತಲೆಕೆಡಿಸಿಕೊಳ್ಳದ ಕಾರಣ ಜಲಾಶಯ ಕೇವಲ ನೀರು ಸಂಗ್ರಹಕ್ಕಷ್ಟೆ ಸೀಮಿತವಾಗಿ ಎಲೆ ಮರೆಯ ಕಾಯಿಯಂತೆ ಉಳಿದು ಹೋಗಿದೆ.
ಈ ವ್ಯಾಪ್ತಿಯಲ್ಲಿ ಸುಂದರ ಪ್ರವಾಸಿ ತಾಣಗಳು ಇರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. 2004ರಲ್ಲಿ ಹೇಮಾವತಿ ನದಿಯ ಉಪ ನದಿಯಾದ ಯಗಚಿಗೆ ನೀರಾವರಿ ಉದ್ದೇಶಕ್ಕೆ ಅಡ್ಡಲಾಗಿ ಅಣೆಕಟ್ಟೆಯನ್ನು ಕಟ್ಟಲಾಗಿದೆ. ಅಲ್ಲಿಂದೀಚೆಗೆ ಇದು ಕೂಡ ಪ್ರವಾಸಿ ತಾಣವಾಗಿ ಎಲ್ಲರ ಗಮನಸೆಳೆಯುತ್ತಿದೆ. ಸಾಮಾನ್ಯವಾಗಿ ಬೇಲೂರು, ಹಳೆಬೀಡು ನೋಡಿಕೊಂಡು ಚಿಕ್ಕಮಗಳೂರಿನತ್ತ ತೆರಳುವ ಪ್ರವಾಸಿಗರು ದಾರಿ ಮಧ್ಯೆ ಸಿಗುವ ಯಗಚಿಗೊಂದು ಭೇಟಿ ನೀಡುವುದು ಮಾಮೂಲಾಗಿದೆ.
60 ಕೋಟಿ ಯೋಜನೆಯ ಪ್ರಸ್ತಾವನೆ
ಯಗಚಿಯನ್ನು ನೋಡಲು ಬರುವ ಪ್ರವಾಸಿಗರಿಗೆ ಶೌಚಾಲಯದ ಸಮಸ್ಯೆ ಕಾಡುತ್ತಿದ್ದು, ಕಳೆದ 10 ವರ್ಷಗಳಿಂದ ಸವಲತ್ತುಗಳಿಗೆ ಆಗ್ರಹಿಸಿ ಸಂಘ-ಸಂಸ್ಥೆಗಳು ನಡೆಸಿದ ಹೋರಾಟ ಇಲ್ಲಿನ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳ ಕಿವಿಗೆ ಇನ್ನು ಮುಟ್ಟಿಲ್ಲ.
ಹೀಗಾಗಿ ಯಗಚಿ ಉದ್ಯಾನವನ ನಿರ್ಮಾಣ ಮಾಡುವುದು ಮತ್ತು ಸೌಲಭ್ಯ ಒದಗಿಸುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಈಗಾಗಲೇ ಸ್ಥಳೀಯ ಶಾಸಕರು ಯಗಚಿ ಜಲಾಶಯದಲ್ಲಿ ಕೆಆರ್ಎಸ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲು ಸುಮಾರು 60 ಕೋಟಿ ರೂ. ಯೋಜನೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಅದು ಕಾರ್ಯರೂಪಕ್ಕೆ ಬರುವುದು ಯಾವಾಗ? ಎಂಬುದೇ ತಿಳಿಯದಾಗಿದೆ.
ಜಲಾಶಯದತ್ತ ಪ್ರವಾಸಿಗರ ದಂಡು
ಇನ್ನು ಯಗಚಿ ನದಿ ಬಗ್ಗೆ ಹೇಳುವುದಾದರೆ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಬೆಟ್ಟಗಳಲ್ಲಿ ಹುಟ್ಟಿ ಹರಿಯುವ ಈ ನದಿಗೆ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ನದಿಗಳು ಸೇರುತ್ತವೆ. ಹೀಗಾಗಿ ಇದರ ನೀರಿನಮಟ್ಟ ಹೆಚ್ಚಾಗುತ್ತದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಯಗಚಿ ಜಲಾಶಯವು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದು ಒಂದಷ್ಟು ಸೌಲಭ್ಯವನ್ನು ಕಲ್ಪಿಸಿದ್ದೇ ಆದರೆ ಪ್ರವಾಸಿಗರು ನೆಮ್ಮದಿಯಾಗಿ ತೆರಳಲು ಸಾಧ್ಯವಾಗುತ್ತದೆ. ಆದರೆ ರಸ್ತೆ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಇಲ್ಲಿ ಇಲ್ಲದಿರುವುದು ಖುಷಿಯಾಗಿ ತೆರಳುವ ಪ್ರವಾಸಿಗರಿಗೆ ಬೇಸರ ತರಿಸುತ್ತಿದ್ದು, ಹಿಡಿ ಶಾಪ ಹಾಕಿಕೊಂಡು ಬರುವಂತಾಗಿದೆ.
Recommended Video
ಮೂಲಸೌಲಭ್ಯ ಕಲ್ಪಿಸಲು ಆಗ್ರಹ
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಯಗಚಿ ಜಲಾಶಯದ ಸುತ್ತಲೂ ಉದ್ಯಾನ ನಿರ್ಮಿಸಿ, ಶೌಚಾಲಯ ಸೇರಿದಂತೆ ಒಂದಷ್ಟು ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದೇ ಆದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗಬಹುದೇನೋ?.