ಬಯಲು ಶೌಚಮುಕ್ತ ಗ್ರಾಮವಾಗುವತ್ತ ಹಾಸನದ "ಕೊಂಡಜ್ಜಿ ಗ್ರಾಮ"
ಹಾಸನ, ಫೆಬ್ರುವರಿ 01: ಇದುವರೆಗೆ ಹಾಸನ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪಾಳು ಬಿದ್ದಿದ್ದ ಕೆರೆ, ಕಲ್ಯಾಣಿಗಳನ್ನು ಗುರುತಿಸಿ ಅವುಗಳನ್ನು ಶ್ರಮದಾನದ ಮೂಲಕ ಅಭಿವೃದ್ಧಿಗೊಳಿಸಿ ಜಲಸಂಗ್ರಹದಲ್ಲಿ ತೊಡಗಿಸಿಕೊಂಡಿದ್ದ ಹಸಿರು ಪ್ರತಿಷ್ಠಾನವು ಗ್ರಾಮ ಸ್ವರಾಜ್ ಸಹಯೋಗದೊಂದಿಗೆ ಕೊಂಡಜ್ಜಿ ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಸಂಕಲ್ಪ ಮಾಡಿದೆ.
ಕೊಂಡಜ್ಜಿ ಗ್ರಾಮದಲ್ಲಿ ಶೌಚಾಲಯ ರಹಿತ ಮನೆಗಳನ್ನು ಗುರುತಿಸಿ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಬಯಲು ಶೌಚಮುಕ್ತ ಗ್ರಾಮವಾಗಿಸುವತ್ತ ದಿಟ್ಟ ಹೆಜ್ಜೆಯನ್ನಿರಿಸಿದೆ. ಜತೆಗೆ ಗ್ರಾಮದಲ್ಲಿ ಹಿಂದುಳಿದ ಮಹಿಳೆ ಮತ್ತು ಯುವಜನರಿಗೆ ಅಣಬೆ ಬೇಸಾಯ ಹಾಗೂ ಫಿನಾಯಲ್ ತಯಾರಿಕಾ ತರಬೇತಿ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವತ್ತ ಮುಂದಾಗಿದೆ.
ಅಣಬೆ ಬೇಸಾಯದ ಬಗ್ಗೆ ತಜ್ಞರಿಂದ ಮಾಹಿತಿ
ಈ ನಡುವೆ ಗ್ರಾಮದಲ್ಲಿ ಕಾರ್ಯಕ್ರಮವೊಂದು ನಡೆಯಿತು. ಅದರಲ್ಲಿ ಸ್ವಾವಲಂಬಿ ಜೀವನಕ್ಕೆ ಆಧಾರವಾಗುವಂತಹ ಉದ್ಯೋಗದ ಬಗ್ಗೆ ಕೆನರಾ ಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಹರೀಶ್ ಮಾಹಿತಿ ನೀಡಿದರು. ಸಂಸ್ಥೆಯಲ್ಲಿ ವರ್ಷವಿಡೀ ಲಭ್ಯವಿರುವ ಉಚಿತ ವಸತಿಯುತ ತರಬೇತಿಗಳ ಕುರಿತು ತಿಳಿ ಹೇಳಿದರು. ಅತ್ಯಂತ ಕಡಿಮೆ ಶ್ರಮ ಮತ್ತು ಕಡಿಮೆ ಹಣದಿಂದ ಬೆಳೆಯಬಹುದಾದ ಅಣಬೆ ಬೇಸಾಯದ ಕುರಿತಂತೆ ಮಾಹಿತಿ ನೀಡಿದರು.
ಪ್ರತಿ ತಾಲ್ಲೂಕಿನಲ್ಲಿಯೂ ಪಿಂಚಣಿ ಅದಾಲತ್: ಜೆ.ಸಿ. ಮಾಧುಸ್ವಾಮಿ
ಆರ್ಥಿಕ ಸ್ವಾವಲಂಬನೆಯ ಪ್ರಾತ್ಯಕ್ಷಿಕೆ
ಸುರಭಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರೀತಿ ಲೋಬೋ ಯಶಸ್ವಿನಿ ಮಹಿಳಾಭಿವೃದ್ಧಿ ಸಂಸ್ಥೆಯ ಧರಣಿ ಅವರು ಅಣಬೆ ಬೇಸಾಯ, ಫಿನಾಯಿಲ್ ತಯಾರಿಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿದರು. ಗ್ರಾಮಗಳಲ್ಲಿನ ಮಹಿಳೆಯರು ಹೇಗೆ ತಮ್ಮ ಜೀವನಕ್ಕೆ ಹಣವನ್ನು ಸಂಪಾದಿಸಬಹುದು, ಸಣ್ಣ ಸಣ್ಣ ಕೆಲಸಗಳ ಮೂಲಕ ಹೇಗೆ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂಬುದಕ್ಕೆ ಕೆಲವು ಸಲಹೆಗಳನ್ನು ನೀಡಿದರು.
28 ಮನೆಗಳಲ್ಲಿ ಶೌಚಾಲಯ ನಿರ್ಮಾಣ
ಕೊಂಡಜ್ಜಿ ಗ್ರಾಮವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಗ್ರಾಮ ಸ್ವರಾಜ್ ಸಮಿತಿ, ಸರಕಾರಿ ಶಾಲೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ನ ಸಹಯೋಗದೊಂದಿಗೆ 17 ಶೌಚಾಲಯ ರಹಿತವಾದ ಮನೆಗಳನ್ನು ಗುರುತಿಸಿ ಅದಕ್ಕೆ 11 ಮನೆಗಳನ್ನು ಸೇರಿಸಿ ಒಟ್ಟು 28 ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಈ ಸಂಬಂಧ ಕಾಮಗಾರಿಯೂ ಭರದಿಂದ ನಡೆಯುತ್ತಿದೆ. ಇದಕ್ಕೆ ಜಿಲ್ಲಾ ಪಂಚಾಯತ್ ವತಿಯಿಂದ ಸಹಾಯಧನವನ್ನು ನೀಡಲಾಗುತ್ತಿದೆ. ಈ ಒಂದು ಕಾರ್ಯದ ಮೂಲಕ ಬಯಲುಶೌಚ ಮುಕ್ತ ಗ್ರಾಮವನ್ನಾಗಿ ಮಾಡಲು ಮುಂದಡಿ ಇಡಲಾಗಿದೆ.
ಎರಡು ದೇವಾಲಯಗಳನ್ನು ದತ್ತು ತೆಗೆದುಕೊಳ್ಳಲಿದೆ ಕುಕ್ಕೆ
ಕೆರೆ ಸಂರಕ್ಷಣೆಗೂ ದಾರಿ
ಈಗಾಗಲೇ ಹಲವು ಮನೆಗಳಲ್ಲಿ ಶೌಚಾಲಯ ನಿರ್ಮಾಣ ಸಂಪೂರ್ಣವಾಗಿದೆ. ಈ ಎಲ್ಲ ಕುಟುಂಬಗಳೂ ಕೆರೆ ಮತ್ತು ಕೆರೆಯ ದಂಡೆಯನ್ನೇ ಶೌಚಕ್ಕೆ ಅವಲಂಬಿಸಿದ್ದು, ಈಗ ಕೊಂಡಜ್ಜಿ ಗ್ರಾಮವು ಬಯಲು ಶೌಚ ಮುಕ್ತ ಗ್ರಾಮವಾಗಿ ಪರಿವರ್ತನೆಗೊಳ್ಳುತ್ತಿರುವುದು, ತನ್ಮೂಲಕ ಕೆರೆ ಸಂರಕ್ಷಣೆಯೂ ಆಗುವುದರಿಂದ ಹಸಿರು ಭೂಮಿಯ ಆಶಯ ಈಡೇರುತ್ತಿರುವುದರ ಕುರಿತಂತೆ ಕೊಂಡಜ್ಜಿ ಗ್ರಾಮ ಸ್ವರಾಜ್ ಸಮಿತಿಯ ಉಸ್ತುವಾರಿ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.