ಬೇಲೂರಿನ ಚೆನ್ನಕೇಶವ ದೇಗುಲದಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ!
ಹಾಸನ, ಡಿಸೆಂಬರ್ 11: ಪ್ರವಾಸಿ ತಾಣ ಜತೆಗೆ ದೈವಿಕ ತಾಣವೂ ಆಗಿರುವ ವಿಶ್ವ ಪ್ರಸಿದ್ಧ ಬೇಲೂರಿನ ಚೆನ್ನಕೇಶವ ದೇವಾಲಯವು ಶಿಲ್ಪಕಲೆಯಿಂದಲೇ ಭಕ್ತರು ಮಾತ್ರವಲ್ಲದೆ, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ತನ್ನದೇ ಆದ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯವನ್ನು ನೋಡಲೆಂದೇ ದೇಶ-ವಿದೇಶಗಳಿಂದ ಜನ ಬರುತ್ತಿರುತ್ತಾರೆ. ಹೀಗೆ ಬರುವವರು ಅಗತ್ಯ ಸೌಲಭ್ಯವಿಲ್ಲದಿದ್ದರೆ ಹಿಡಿಶಾಪ ಹಾಕುತ್ತಾರೆ. ಇವತ್ತು ಚೆನ್ನಕೇಶವ ದೇವಾಲಯದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ.
ದೂರದಿಂದ ಪ್ರವಾಸಿಗರು ಹಾಗೂ ಭಕ್ತರು ಇತಿಹಾಸ ಪ್ರಸಿದ್ಧ ದೇವಾಲಯವನ್ನು ನೋಡುವ ತವಕದಿಂದ ಬರುತ್ತಾರೆ. ಆದರೆ ಇಲ್ಲಿ ಬಂದರೆ ಹಲವು ಸಮಸ್ಯೆಗಳು ಅವರನ್ನು ಕಾಡುತ್ತವೆ. ಮುಖ್ಯವಾಗಿ ಸ್ವಚ್ಛತೆ, ಭದ್ರತೆ ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಎದ್ದು ಕಾಣುತ್ತದೆ.
ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ
ಕೊರೊನಾ ಹಿನ್ನಲೆಯಲ್ಲಿ ಕೆಲವು ತಿಂಗಳ ಕಾಲ ದೇವಾಲಯಕ್ಕೆ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ದೇವಾಲಯಕ್ಕೆ ಪ್ರವೇಶ ನೀಡಲಾಗಿದೆಯಾದರೂ ಇದರಿಂದ ಹಲವು ಸಮಸ್ಯೆಗಳು ಎದುರಾಗಿವೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು, ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡುತ್ತಿಲ್ಲ. ತಾವು ಧರಿಸಿದ ಮಾಸ್ಕ್ ಗಳನ್ನು ದೇಗುಲದ ಆವರಣದಲ್ಲಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ.
ಬೇಲೂರು, ಹಳೇಬೀಡು ವಿಶ್ವಪಾರಂಪರಿಕ ತಾಣದ ಪಟ್ಟಿಗೆ
ಕಸಗಳು ತಾಂಡವವಾಡುತ್ತಿವೆ
ದೇಗುಲದಲ್ಲಿ ಸ್ವಚ್ಛತೆಯನ್ನು ಕಾಪಾಡದ ಕಾರಣ ಪ್ರಮುಖ ಕಲ್ಲುಕಂಬ ಮತ್ತು ಗೋಡೆಗಳಲ್ಲಿ ಧೂಳು, ಕಸಕಡ್ಡಿ, ಅಗರಬತ್ತಿಯ ಬೂದಿ, ಬಾಳೆಹಣ್ಣಿನ ಸಿಪ್ಪೆ, ಎಲೆ-ಅಡಿಕೆ, ಭಕ್ತರು ತಿಂದುಂಡ ಎಲೆ, ಪೇಪರ್, ಪ್ಲಾಸ್ಟಿಕ್, ಉಳಿದ ಅನ್ನ ಸಾಂಬಾರು ಹೀಗೆ ಕಸಗಳು ತಾಂಡವವಾಡುತ್ತಿವೆ.
ವಾಸ್ತುಶಿಲ್ಪಗಳು ಕಲಾಕಾರರನ್ನು ಸೆಳೆದಿದೆ
ಸುಮಾರು ಒಂಬತ್ತು ಶತಮಾನಗಳಷ್ಟು ಇತಿಹಾಸವನ್ನು ಹೊಂದಿರುವ ಚನ್ನಕೇಶವ ದೇಗುಲ ಹೊಯ್ಸಳ ರಾಜ ವಿಷ್ಣುವರ್ಧನನ ಕಲಾನೈಪುಣ್ಯತೆ ಸಾಕ್ಷಿಯಾಗಿ ನಿಂತಿದೆ. ಇಲ್ಲಿನ ಶಿಲ್ಪಕಲೆ, ವಾಸ್ತುಶಿಲ್ಪಗಳು ದೇಶ ವಿದೇಶಗಳ ಕಲಾಕಾರರನ್ನು ಸೆಳೆದಿದೆ. ಇಂತಹ ದೇವಾಲಯದ ಆವರಣದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳು ಸಮಸ್ಯೆಯಾಗಿ ಕಾಡುತ್ತಿವೆ. ಈ ಬೀದಿ ನಾಯಿಗಳಿಗೆ ಹೆದರಿಕೊಂಡು ಪ್ರವಾಸಿಗರು ಓಡಾಡುವಂತಾಗಿದೆ.
ದೇಗುಲವು ಉಗ್ರರ ಪಟ್ಟಿಯಲ್ಲಿದೆ
ಈಗಾಗಲೇ ತಾಲೂಕಿನ ಸಮೀಪವಿರುವ ದೊಡ್ಡ ಗದ್ದವಳ್ಳಿ ದೇಗುಲದ ಮಹಾಕಾಳಿ ವಿಗ್ರಹ ಕಿಡಿಗೇಡಿಗಳಿಂದ ಹಾನಿಯಾಗಿದೆ. ಹೀಗಾಗಿ ಈ ದೇಗುಲದ ಕಡೆಯೂ ಹೆಚ್ಚಿನ ಗಮನಹರಿಸಿ ದೇಗುಲದತ್ತ ಕೂಡಲೇ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸೂಕ್ತ ಭದ್ರತೆ ಒದಗಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ಈ ದೇಗುಲವು ಉಗ್ರರ ಪಟ್ಟಿಯಲ್ಲಿರುವ ಬಗ್ಗೆಯೂ ಗುಪ್ತಚರ ವರದಿಯಿಂದ ಗೊತ್ತಾಗಿದೆ. ಹೀಗಿರುವಾಗ ಸಂಬಂಧಿಸಿದವರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ, ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯವಾಗಿದೆ.