ಪರಿಷತ್ ಚುನಾವಣೆ; ಡಾ. ಸೂರಜ್ ರೇವಣ್ಣ ಸ್ಪರ್ಧೆ ಖಚಿತ?
ಹಾಸನ, ನವೆಂಬರ್ 17; ಕರ್ನಾಟಕ ವಿಧಾನ ಪರಿಷತ್ನ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಹಾಸನ ಸ್ಥಳೀಯ ಸಂಸ್ಥೆಗಳಿಂದ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಸೂರಜ್ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ಅಥವ ರೇವಣ್ಣ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಪಕ್ಷದ ವರಿಷ್ಠ ಎಚ್. ಡಿ. ದೇವೇಗೌಡರು ಅಭ್ಯರ್ಥಿ ಆಯ್ಕೆ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಸಭೆ ನಡೆಸಿದ್ದರು.
ಪರಿಷತ್ ಚುನಾವಣೆ; ಜೆಡಿಎಸ್ ಹೊಸ ಕಾರ್ಯತಂತ್ರ!
ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿ ಮುಂದೆ ಬಂದರೆ ಟಿಕೆಟ್ ನೀಡುವುದಾಗಿಯೂ ದೇವೇಗೌಡರು ಹೇಳಿದ್ದರು. ಕೆಲವು ಶಾಸಕರು ಸಹ ಡಾ. ಸೂರಜ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಅಂತಿಮವಾಗಿ ಪಕ್ಷ ಸೂರಜ್ ರೇವಣ್ಣ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಪರಿಷತ್ ಚುನಾವಣೆ; ಬಿಜೆಪಿಗೆ 15 ಸೀಟು ಗುರಿ, 4 ತಂಡದಿಂದ ಯಾತ್ರೆ!
2020ರಲ್ಲಿ ಹಾಸನ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಡಾ. ಸೂರಜ್ ರೇವಣ್ಣ ವಿಧಾನಸಭ ಚುನಾವಣೆಗೆ ಸ್ಪರ್ಧೆ ಮಾಡುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶುಕ್ರವಾರ ಅವರು ನಾಮಪತ್ರ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ.
ಪರಿಷತ್; ಜಿಲ್ಲಾ, ತಾಲೂಕು ಪಂಚಾಯಿತಿ ಸದಸ್ಯರಿಗೆ ಮತದಾನದ ಹಕ್ಕಿಲ್ಲ
ಭವಾನಿ ರೇವಣ್ಣ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕುಟುಂಬದಲ್ಲಿ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಅಥವ ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆಗೆ ಅವರು ಆಯ್ಕೆಯಾಗಬಹುದು ಎಂಬ ಸುದ್ದಿ ಇದೆ.
ಈ ಹಿನ್ನಲೆಯಲ್ಲಿ ಅಂತಿಮವಾಗಿ ಡಾ. ಸೂರಜ್ ರೇವಣ್ಣ ಹೆಸರನ್ನು ಅಂತಿಮಗೊಳಿಸಲಾಗಿದೆ. ಈಗಾಗಲೇ ಸೂರಜ್ ರೇವಣ್ಣ ಸಹೋದರ ಪ್ರಜ್ವಲ್ ರೇವಣ್ಣ ಹಾಸನದ ಸಂಸದರು. ಸೂರಜ್ ರೇವಣ್ಣ ಪರಿಷತ್ಗೆ ಸ್ಪರ್ಧೆ ಮಾಡುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಯಾರು?; ಕಾಂಗ್ರೆಸ್ ಪಕ್ಷದಿಂದ ಹಾಸನ ಕ್ಷೇತ್ರದಿಂದ ಎಂ. ಶಂಕರ್ ಕಣಕ್ಕಿಳಿಯುವುದು ಖಚಿತವಾಗಿದೆ. ಈಗಾಗಲೇ ಪರಿಷತ್ ಸದಸ್ಯರಾಗಿರುವ ಎಂ. ಎ. ಗೋಪಾಲಸ್ವಾಮಿ ಮತ್ತೊಮ್ಮೆ ಕಣಕ್ಕಿಳಿಯಲು ನಿರಾಕರಿಸಿದ್ದಾರೆ.
ಬಿಜೆಪಿಯಿಂದ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಹಾಸನದಲ್ಲಿ 3,590 ಮತದಾರರಿದ್ದು, 257 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ.
ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಮತದಾನ ಮಾಡಲಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅವಧಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಈ ಬಾರಿ ಅವರು ಮತದಾನದಿಂದ ವಂಚಿತರಾಗಿದ್ದಾರೆ.
ವಿಧಾನ ಪರಿಷತ್ಗೆ ಜೆಡಿಎಸ್ನಿಂದ ಆಯ್ಕೆಯಾಗಿರುವ ಎನ್. ಅಪ್ಪಾಜಿ ಗೌಡ (ಮಂಡ್ಯ), ಸಂದೇಶ್ ನಾಗರಾಜ್ (ಮೈಸೂರು), ಸಿ. ಆರ್. ಮನೋಹರ್ (ಕೋಲಾರ), ಬೆಮಲ್ ಕಾಂತರಾಜು (ತುಮಕೂರು) ಅವವ ಅವಧಿ ಪೂರ್ಣಗೊಳ್ಳಲಿದ್ದು, ಆ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಇವರಲ್ಲಿ ಎನ್. ಅಪ್ಪಾಜಿ ಗೌಡ ಪುನಃ ಸ್ಪರ್ಧಿಸಬಹುದು. ಆದರೆ ಸಂದೇಶ ನಾಗರಾಜ್, ಸಿ. ಆರ್. ಮನೋಹರ್, ಬೆಮಲ್ ಕಾಂತರಾಜು ಜೆಡಿಎಸ್ನಿಂದ ಕಣಕ್ಕಿಳಿಯುವುದಿಲ್ಲ. ಈ ಮೂವರು ಬೇರೆ ಪಕ್ಷದತ್ತ ಮುಖ ಮಾಡಿದ್ದಾರೆ.
ಮೇಲ್ಮನೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತವಿಲ್ಲ. ಆದ್ದರಿಂದ ಪರಿಷತ್ ಚುನಾವಣೆಯನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ. ಚುನಾವಣಾ ಪ್ರಚಾರಕ್ಕಾಗಿ ನವೆಂಬರ್ 19 ರಿಂದ 23ರ ತನಕ ಜನ ಸ್ವರಾಜ್ ಯಾತ್ರೆಯನ್ನು ಪಕ್ಷ ಹಮ್ಮಿಕೊಂಡಿದೆ. ನಾಲ್ಜು ತಂಡಗಳಾಗಿ ಪಕ್ಷದ ನಾಯಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
Recommended Video