ಕೆಆರ್ಎಸ್ ಮಾದರಿಯಲ್ಲೇ ಯಗಚಿ ಜಲಾಶಯ ಅಭಿವೃದ್ಧಿ
ಹಾಸನ, ಆಗಸ್ಟ್ 4: ಹೇಮಾವತಿ ಜಲಾಶಯ, ಯಗಚಿ ಜಲಾಶಯ ಹಾಗೂ ಚನ್ನಪಟ್ಟಣ ಕೆರೆಯ ಸೌಂದರ್ಯವೃದ್ದಿಗೆ ಹೊಸ ಪ್ರಯತ್ನಗಳು ನಡೆಯುತ್ತಿವೆ. ಶೀಘ್ರದಲ್ಲಿ ಈ ಮೂರು ಸ್ಥಳಗಳು ಪ್ರಮುಖ ಜನಾಕರ್ಷಣೆ ಕೇಂದ್ರವಾಗುವ ನಿರೀಕ್ಷೆ ಇದೆ.
ಹೇಮಾವತಿ ಜಲಾಶಯ, ಯಗಚಿ ಜಲಾಶಯ ಹಾಗೂ ಹಾಸನದ ಚನ್ನಪಟ್ಟಣ ಕೆರೆ ಸೌಂದರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆ 3 ರಂದು ಮಹತ್ವದ ಸಭೆ ನಡೆಯಿತು, ಕೆ.ಆರ್.ಎಸ್ ಬೃಂದಾವನ ಮಾದರಿಯಲ್ಲಿ ಗೊರೂರಿನಲ್ಲಿ ಉದ್ಯಾನದ ಅಭಿವೃದ್ಧಿ, ಯಗಚಿ ಮತ್ತು ಚನ್ನಪಟ್ಟಣ ಕೆರೆ ಜನಾಕರ್ಷಣೆಯ ನವಮಾದರಿಗಳ ತಯಾರಿ ಕುರಿತಂತೆ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಯಿತು.
ನಾರಾಯಣಪುರ ಬಸವಸಾಗರ ಜಲಾಶಯದ ಒಡಲು ಭರ್ತಿ: ಉಕ್ಕಿ ಹರಿದ ಕೃಷ್ಣಾ
ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತನಾಡಿ, ಹಾಸನ ಜಿಲ್ಲೆ ಐತಿಹಾಸಿಕ ಸಾಂಸ್ಕೃತಿಕ ಪ್ರಾಕೃತಿಕ ಸೌಂದರ್ಯ ಶ್ರಿಮಂತಿಕೆ ಹೊಂದಿದೆ. ಪ್ರಮುಖ ಜಲಾಶಯಗಳನ್ನು ಕೂಡ ಹೊಂದಿದೆ ಅವುಗಳನ್ನು ಜನಾಕರ್ಷಣೆಯ ಕೇಂದ್ರಗಳನ್ನಾಗಿ ಪರಿವರ್ತಿಸಬೇಕಾಗಿದೆ ಅದಕ್ಕಾಗಿ ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ಜಲ ನಿಗಮಗಳಿಂದ ಆರ್ಥಿಕ ಹಾಗೂ ತಾಂತ್ರಿಕ ನೆರವು ಅಗತ್ಯ ಎಂದರು.
ನೀರಾವರಿ ಇಲಾಖೆ ಕಾರ್ಯದರ್ಶಿಯೂ ಆಗಿರುವ ವಿಶ್ವೇಶ್ವರ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ. ಜಯಪ್ರಕಾಶ್ ಅವರು ಹೇಮಾವತಿ, ಯಗಚಿ ಹಾಗೂ ಚನ್ನಪಟ್ಟಣ ಕೆರೆ ಸೌಂದರ್ಯ ಅಭಿವೃದ್ಧಿಗೆ ಪ್ರಾರಂಭಿಕ ಹಂತದ ಅಧ್ಯಯನ ಹಾಗೂ ಕಾಲ್ಪನಿಕ ನೀಲಿ ನಕಾಶೆ ಸಿದ್ಧಪಡಿಸಲು ಜೈಪುರ ಮೂಲದ ಖಾಸಗಿ ವಾಸ್ತುಶಿಲ್ಪಿಗಳ ನೇಮಕ ಮಾಡಲಾಗಿದೆ. ಒಂದು ತಿಂಗಳ ಒಳಗಾಗಿ ನೀಲಿ ನಕ್ಷೆ ಸಿದ್ಧಪಡಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಹೇಮಾವತಿ, ಯಗಚಿ ಜಲಾಶಯಗಳು ಮತ್ತು ಚನ್ನಪಟ್ಟಣ ಕೆರೆ ಅಭಿವೃದ್ಧಿ ನೀಲಿನಕಾಶೆ ಸಿದ್ಧಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಜೈಪುರದ ವಾಸ್ತು ಶಿಲ್ಪ ವಿನ್ಯಾಸ ಸಂಸ್ಥೆಯ ಅನೂಪ್ ಭರ್ತಾರಿಯಾ ಅವರು ತಾವು ಬೃಂದಾವನ ಅಭಿವೃದ್ಧಿಗೆ ಸಿದ್ಧಪಡಿಸಿರುವ ನೀಲನಕ್ಷೆ ನೂತನ ವಿನ್ಯಾಸಗಳನ್ನು ಪ್ರದರ್ಶಿಸಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಹೊಸ ಮಾದರಿಗಳ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸಿದರು.