ದೇಶದ 10 ‘ಸ್ವಚ್ಛ ಐಕಾನಿಕ್' ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಶ್ರವಣಬೆಳಗೊಳ
ಹಾಸನ, ನವೆಂಬರ್ 25: ಶ್ರವಣಬೆಳಗೊಳದ ಗೋಮ್ಮಟೇಶ್ವರ ದೇಶದ ಐಕಾನಿಕ್ ಸ್ವಚ್ಛತಾ ತಾಣಗಳ ಪಟ್ಟಯಲ್ಲಿ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪಾರಂಪರಿಕ ತಾಣಗಳಲ್ಲಿ ಶುಚಿತ್ವ, ನೈರ್ಮಲ್ಯ ಮತ್ತು ಮೂಲಸೌಕರ್ಯಗಳನ್ನು ಮೇಲಸ್ತರಕ್ಕೆ ಒಯ್ಯಲು ಗುರುತಿಸಿರುವ ದೇಶದ 10 ಪ್ರಮುಖ 'ಸ್ವಚ್ಛ ಐಕಾನಿಕ್ ಸ್ಥಳ'ಗಳಲ್ಲಿ ಶ್ರವಣಬೆಳಗೊಳವೂ ಸೇರಿದೆ.
ಶ್ರವಣಬೆಳಗೊಳ : ಮಹಾಮಸ್ತಕಾಭಿಷೇಕ ಲೈವ್ ನೋಡಿ
ನವದೆಹಲಿಯ ಸಿವಿಲ್ ಸರ್ವೀಸಸ್ ಅಧಿಕಾರಿಗಳ ಸಂಸ್ಥೆಯಲ್ಲಿ (ಸಿ.ಎಸ್.ಓ.ಐ) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನೆ ಸಭೆಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶ್ರವಣಬೆಳಗೊಳದ ಅಗತ್ಯತೆ ಮತ್ತು ಮಹಾಮಸ್ತಕಾಭಿಷೇಕದ ಮಹತ್ವ ಎರಡನ್ನೂ ಪೂರಕವಾಗಿ ಇಟ್ಟುಕೊಂಡು ಹೆಚ್ಚಿನ ಅನುದಾನ ನೀಡುವಂತೆ ಬಲವಾಗಿ ಪ್ರತಿಪಾದಿಸಿದ್ದಾಗಿ ತಿಳಿಸಿದರು.
ಗೊಮ್ಮಟಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿರುವ ಸಂದರ್ಭದಲ್ಲೇ ಸ್ವಚ್ಛ ಭಾರತ್ ಮಿಷನ್ ಯೋಜನೆಯ 2ನೇ ಹಂತದ 'ಸ್ವಚ್ಛ ಐಕಾನಿಕ್ ಸ್ಥಳ'ಗಳ ಪಟ್ಟಿಯಲ್ಲಿ ಶ್ರವಣಬೆಳಗೊಳ ಸೇರ್ಪಡೆ ಆಗಿರುವುದರಿಂದ ಅಭಿವೃದ್ಧಿಗೆ ಪೂರಕವಾಗಿ ತುರ್ತಾಗಿ 50 ಕೋಟಿ ರು. ಅನುದಾನ ನೀಡುವಂತೆ ರಾಷ್ಟ್ರೀಯ ಸಮಾಲೋಚನೆ sBeylfli ಮನವಿ ಮಾಡಲಾಯಿತು ಎಂದು ಸಿಂಧೂರಿ ತಿಳಿಸಿದರು.
ಐಕಾನಿಕ್ ಸ್ವಚ್ಛತಾ ಸೌಕರ್ಯಗಳೇನು?
ಸುಧಾರಿತ ಚರಂಡಿ, ಒಳಚರಂಡಿ, ನೈರ್ಮಲ್ಯ ಸೌಲಭ್ಯಗಳು, ನೀರು ವಿತರಣಾ ಯಂತ್ರಗಳು (ಎ.ಟಿ.ಎಂ), ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ಮಾಣ, ದೀಪ ವ್ಯವಸ್ಥೆ, ಉದ್ಯಾನ ಸೇರಿದಂತೆ ಇನ್ನಿತರೆ ಸೌಕರ್ಯಗಳನ್ನು ಈ ತಾಣಗಳಲ್ಲಿ ಕಲ್ಪಿಸಲಾಗುತ್ತದೆ.
2ನೇ ಹಂತದಲ್ಲಿ ಆಯ್ಕೆಯಾದ ತಾಣಗಳು
1. ಗಂಗೋತ್ರಿ, 2. ಯಮುನೋತ್ರಿ (ಉತ್ತರಾಖಂಡ); 3. ಮಹಾಕಾಳೇಶ್ವರ ದೇವಸ್ಥಾನ (ಮಧ್ಯಪ್ರದೇಶ); 4. ಚಾರ್ಮಿನಾರ್ (ಹೈದರಾಬಾದ್); 5. ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್ ಮತ್ತು ಕಾನ್ವೆಂಟ್ (ಗೋವಾ); 6. ಕಾಲಡಿ (ಕೇರಳ); 7. ಗೋಮ್ಮಟೇಶ್ವರ (ಕರ್ನಾಟಕ), 8. ಬೈಜ್ನಾಥ್ ಧಾಮ್ (ಜಾರ್ಖಂಡ್); 9. ಗಯಾತೀರ್ಥ (ಬಿಹಾರ) ಹಾಗೂ 10. ಸೋಮನಾಥ ದೇವಸ್ಥಾನ (ಗುಜರಾತ್).
ಸ್ವಚ್ಛತೆ ಸ್ಥಿತಿಯನ್ನು ಉನ್ನತ ದರ್ಜೆಗೆ
ಕೇಂದ್ರ ಸರ್ಕಾರವು ಭಾರತದಾದ್ಯಂತ ಪಾರಂಪರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ ಗುರುತಿಸಿಕೊಂಡಿರುವ ಸ್ಥಳಗಳ ಪೈಕಿ 100 ತಾಣಗಳಲ್ಲಿ ಸ್ವಚ್ಛತೆ ಸ್ಥಿತಿಯನ್ನು ಉನ್ನತ ದರ್ಜೆಗೆ ಏರಿಸಲು ನಿರ್ಧರಿಸಿದೆ. ಒಂದನೇ ಮತ್ತು ಎರಡನೇ ಹಂತದಲ್ಲಿ ತಲಾ 10 ಪಾರಂಪರಿಕ ಸ್ಥಳಗಳನ್ನು ಆಯ್ಕೆ ಮಾಡಿದೆ ಎಂದು ರೋಹಿಣಿ ಸಿಂಧೂರಿ ತಿಳಿಸಿದರು.
ರಾಷ್ಟ್ರೀಯ ಸಮಾಲೋಚನೆ ಸಭೆ
ನವದೆಹಲಿಯ ಸಿವಿಲ್ ಸರ್ವೀಸಸ್ ಅಧಿಕಾರಿಗಳ ಸಂಸ್ಥೆಯಲ್ಲಿ (ಸಿ.ಎಸ್.ಓ.ಐ) ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನೆ ಸಭೆಯಲ್ಲಿ ಕೇಂದ್ರ ಮತ್ತು ಸಂಬಂಧಪಟ್ಟ ರಾಜ್ಯಗಳ ಅಧಿಕಾರಿಗಳು, ಸಾಂಪ್ರದಾಯಿಕ ಸ್ಥಳಗಳ ಪ್ರತಿನಿಧಿಗಳು, ವಿಶ್ವ ಬ್ಯಾಂಕ್ ಸೇರಿದಂತೆ ಕಾಪೋರೇಟ್ ಮತ್ತು ಅಭಿವೃದ್ಧಿ ಪಾಲುದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.