ಸಿದ್ದರಾಮೋತ್ಸವಕ್ಕೆ ಸಹಾಯ: ಸತ್ಯ ಒಪ್ಪಿಕೊಂಡ ಜೆಡಿಎಸ್ ಶಾಸಕ!
ಹಾಸನ, ಆಗಸ್ಟ್ 9: ಜೆಡಿಎಸ್ ಪಕ್ಷದ ಕೆಲವು ಶಾಸಕರು ನೇರವಾಗಿಯೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಹೊಗಳುವುದುಂಟು. ಅದರಲ್ಲೂ ಪ್ರಮುಖವಾಗಿ ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಸದನದಲ್ಲಿ ಸಿದ್ದರಾಮಯ್ಯನವರನ್ನು ಮುಕ್ತಕಂಠದಿಂದ ಹೊಗಳಿ ಅವರ ಸಹಾಯವನ್ನು ನೆನೆಸಿಕೊಂಡಿದ್ದರು.
ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದಿಯನ್ನು ಮಾಡಿದ ಸಿದ್ದರಾಮೋತ್ಸವಕ್ಕೆ ಜೆಡಿಎಸ್ನ ಜನ ಪ್ರತಿನಿಧಿಗಳೂ ಸಹಾಯಹಸ್ತವನ್ನು ಚಾಚಿದ್ದರು ಎನ್ನುವ ಮಾತು ಕೇಳಿ ಬರುತ್ತಿತ್ತು. ಈಗ, ಆ ಸುದ್ದಿಯನ್ನು ಸತ್ಯ ಎಂದು ಶಿವಲಿಂಗೇಗೌಡ ಒಪ್ಪಿಕೊಂಡಿದ್ದಾರೆ.
ಸಿದ್ದರಾಮೋತ್ಸವಕ್ಕೆ ಎಲ್ಲಾ ಪಕ್ಷದವರೂ ಬಂದಿದ್ದಾರೆ: ಭೈರತಿ ಬಸವರಾಜ್
"ಕಾಂಗ್ರೆಸ್ ಮುಖಂಡರು ಎಂದಲ್ಲ, ಸಿದ್ದರಾಮಯ್ಯನವರ ಅಭಿಮಾನಿಗಳು ಎಂದು ಜನರು ನನ್ನ ಬಳಿ ಬಂದಿದ್ದು ಹೌದು. ಇನ್ನೊಂದು ಸಲ 75ವರ್ಷ ಬರಲು ಸಾಧ್ಯವಾ?. ನಾವು ದಾವಣಗೆರೆಗೆ ಹೋಗಿ ಬರುತ್ತೇವೆ, ಏನಾದರೂ ಸಹಾಯ ಮಾಡಿ ಎಂದು ಕ್ಷೇತ್ರದ ಜನರು ನನ್ನ ಬಳಿ ಬಂದಿದ್ದರು"ಎಂದು ಶಿವಲಿಂಗೇಗೌಡರು ಹೇಳಿದರು.
"ಬಸ್ ಚಾರ್ಜ್ ಅಂತಲ್ಲ, ಅಲ್ವಸ್ವಲ್ಪ ಕೊಟ್ಟಿದ್ದು ಹೌದು. ಉಳಿದ ಹಣವನ್ನು ಜನರೇ ಚಂದಾ ಎತ್ತಿ ಸಮಾವೇಶಕ್ಕೆ ಹೋಗಿ ಬಂದಿದ್ದಾರೆ. ಕೆಎಸ್ಆರ್ಟಿಸಿ ಡಿಪೋಗೆ ನಾನು ಮತ್ತು ನನ್ನ ಸ್ನೇಹಿತ ಹೋಗಿ, ಮೂವತ್ತು ಸಾವಿರದ ಬದಲು ಇಪ್ಪತ್ತು ಸಾವಿರ ಕಟ್ಟಿಸಿಕೊಳ್ಳಿ ಎಂದು ಹೇಳಿದ್ದು ಹೌದು" ಎಂದು ಶಿವಲಿಂಗೇಗೌಡರು ತಿಳಿಸಿದ್ದಾರೆ.
"ಇದಕ್ಕೆ ಕೆಲವರು ಶಿವಲಿಂಗೇಗೌಡರು ಸಿದ್ದರಾಮೋತ್ಸವಕ್ಕೆ ಬಸ್ ಕಳಿಸಿದರು ಎಂದು ಹೇಳುತ್ತಿದ್ದಾರೆ. ಅದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಎಚ್. ಡಿ. ಕುಮಾರಸ್ವಾಮಿಯವರು ನನ್ನ ಜೊತೆ ಮಾತುಕತೆ ನಡೆಸುತ್ತಿಲ್ಲ. ನನ್ನನ್ನು ಜೆಡಿಎಸ್ ಅಭ್ಯರ್ಥಿಯಾಗಿ ಮತದಾರ ಗೆಲ್ಲಿಸಿದ್ದಾರೆ. ಹಾಗಾಗಿ, ಈ ಅವಧಿ ಮುಗಿಯುವವರೆಗೆ ನನ್ನ ನಿರ್ಧಾರ ಹೇಳುವುದಿಲ್ಲ" ಎಂದು ಶಿವಲಿಂಗೇಗೌಡರು ಹೇಳಿದರು.
"ನಾನು ಮಂತ್ರಿ ಪದವಿಗೆ ಆಸೆ ಪಡುವವನಲ್ಲ, ಆಸೆ ಪಡುತ್ತಿದ್ದರೆ ನಾನು ಕೂಡಾ ಆಪರೇಶನ್ ಕಮಲದ ಹಿಂದೆ ಹೋಗುತ್ತಿದ್ದೆ. ಹಿಂದಿನಿಂದ ಚೂರಿ ಹಾಕಿದರು ಎಂದು ಕುಮಾರಣ್ಣ ಹೇಳಿದ್ದರು, ಅದರಿಂದ ಮಾನಸಿಕವಾಗಿ ನನಗೆ ಬೇಸರವಾಗಿದೆ. ಜಿಲ್ಲೆಯ ಕಾರ್ಯಕ್ರಮಗಳಲ್ಲಿ ನಾನು ರೇವಣ್ಣ, ಪ್ರಜ್ವಲ್ ಭಾಗವಹಿಸುತ್ತಿದ್ದೇವೆ" ಎಂದು ಶಿವಲಿಂಗೇಗೌಡರು ದಳಪತಿಗಳ ನಡುವಿನ ಸಂಬಂಧದ ಬಗ್ಗೆ ವಿವರಣೆಯನ್ನು ನೀಡಿದರು.
Recommended Video