ಚಿತ್ರಗಳು : ಮಹಾಮಸ್ತಕಾಭಿಷೇಕದ ಸಿದ್ಧತೆ ಪರಿಶೀಲಿಸಿದ ಸಿದ್ದರಾಮಯ್ಯ
ಹಾಸನ, ನವೆಂಬರ್ 5 : 'ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಎಲ್ಲಾ ಕಾಮಗಾರಿಗಳನ್ನು 2018ರ ಜನವರಿ 10ರೊಳಗೆ ಪೂರ್ಣಗೊಳಿಸಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.
ಶನಿವಾರ ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ಮಹಾಮಸ್ತಕಾಭಿಷೇಕದ ಸಂಬಂಧ ಕೈಗೊಂಡಿರುವ ಕಾಮಗಾರಿಗಳ ವೀಕ್ಷಣೆ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಜನವರಿ 15ರಂದು ಶ್ರವಣಬೆಳಗೊಳಕ್ಕೆ ಮತ್ತೆ ಭೇಟಿ ನೀಡುತ್ತೇನೆ ಎಂದರು.
ಶ್ರವಣಬೆಳಗೊಳದಲ್ಲಿ ಹೆಲಿರೈಡ್ ಸೇವೆ ಆರಂಭ?
2018ರ ಫೆಬ್ರವರಿ 7 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಲಿದ್ದಾರೆ. ಫೆ.26ರಂದು ಸಮಾರೋಪ ಸಮಾರಂಭ ನಡೆಯಲಿದೆ. ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ.ಗಳ ಅನುದಾನ ನೀಡಿದೆ. ಸುಮಾರು 40 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಕಪ್ಪುಚುಕ್ಕೆ ಬರದಂತೆ ಮಹಾಮಸ್ತಕಾಭಿಷೇಕ : ರೇವಣ್ಣ
'ಲೋಕೋಪಯೋಗಿ, ನಗರಾಭಿವೃದ್ಧಿ, ಕೆಪಿಟಿಸಿಎಲ್, ತೋಟಗಾರಿಕೆ, ಅಗ್ನಿ ಶಾಮಕದಳ, ಕೆಎಸ್ಆರ್ಟಿಸಿ, ಪೊಲೀಸ್ ಸೇರಿದಂತೆ ಮತ್ತಿತರ ಇಲಾಖೆಗಳ ಮೂಲಕ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ತ್ವರಿತವಾಗಿ ಪೂರ್ಣಗೊಳಿಸಿ' ಎಂದು ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು...
ಶೇ 70ರಷ್ಟು ಕಾಮಗಾರಿಗಳು ಪೂರ್ಣ
'ಮಹಾಮಸ್ತಕಾಭಿಷೇಕಕ್ಕೆ ಸಿದ್ಧಗೊಳುತ್ತಿರುವ ಅಟ್ಟಣಿಗೆ ಕಾಮಗಾರಿ ಶೇ 70 ರಷ್ಟು ಆಗಿದೆ. ಜರ್ಮನ್ ಟೆಕ್ನಾಲಜಿ ಬಳಸಿ ಅಟ್ಟಣಿಗೆ ನಿರ್ಮಿಸಲಾಗುತ್ತಿದೆ. 40 ಲಕ್ಷ ಯಾತ್ರಿಕರು ಬರುವ ನಿರೀಕ್ಷೆ ಇದೆ. ಯಾತ್ರಿಕರ ವಾಸ್ತವ್ಯಕ್ಕಾಗಿ 12 ಉಪ ನಗರಗಳ ನಿರ್ಮಾಣಕ್ಕೆ 490 ಎಕರೆ ಪ್ರದೇಶ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ರೈತರಿಗೆ ಎರಡು ಬೆಳೆಯ ಪರಿಹಾರ ನೀಡಲಾಗುವುದು' ಎಂದರು.
‘3 ಕೆರೆ ಅಭಿವೃದ್ಧಿಪಡಿಸಲಾಗುತ್ತದೆ'
'ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ 14 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕುಡಿಯುವ ನೀರು, ಹೊಸ ನಗರಗಳಿಗೆ ಯುಜಿಡಿ, ಆರೋಗ್ಯ ಸೇವೆಗಾಗಿ 15 ಕಡೆಗಳಲ್ಲಿ ಕ್ಲಿನಿಕ್ ತೆರೆಯಲಾಗುವುದು. ಪ್ರತಿ ಕ್ಲಿನಿಕ್ನಲ್ಲಿ 3 ವೈದ್ಯರಿರುತ್ತಾರೆ. 5 ಆಂಬ್ಯುಲೆನ್ಸ್ ಬಳಸಿಕೊಳ್ಳಲಾಗುವುದು. ಯಾತ್ರಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲಾಗುವುದು' ಎಂದು ಸಿದ್ದರಾಮಯ್ಯ ಹೇಳಿದರು.
'ಸಿಲ್ವರ್ ಜ್ಯೂಬಿಲಿ ಪಾರ್ಕ್ ಅಭಿವೃದ್ಧಿ'
'ವಿಂದ್ಯಾಗಿರಿ ಹಾಗೂ ಕಲ್ಯಾಣಿ ಅಲಂಕರಿಸಲಾಗುವುದು, ವಸ್ತು ಪ್ರದರ್ಶನ ಪ್ರಾಧಿಕಾರದಿಂದ ವಸ್ತು ಪ್ರದರ್ಶನ ಮಳಿಗೆ ನಿರ್ಮಾಣ ಮಾಡಲಾಗುವುದು. ಅಂತರರಾಷ್ಟ್ರೀಯ ಖ್ಯಾತ ಕಲಾವಿದರನ್ನು ಆಹ್ವಾನಿಸಿ ಸಂಗೀತ, ಜನಪದ ನೃತ್ಯ ಮತ್ತಿತರ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. 1 ಕೋಟಿ ವೆಚ್ಚದಲ್ಲಿ ಹಾಸನದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಅಭಿವೃದ್ಧಿ ಪಡಿಸಲಾಗುವುದು' ಎಂದು ಸಿದ್ದರಾಮಯ್ಯ ತಿಳಿಸಿದರು.
‘175 ಕೋಟಿ ಅನುದಾನ ನೀಡಲಾಗಿದೆ'
'ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ 175 ಕೋಟಿ ರೂ.ಗಳ ಅನುದಾನ ಒದಗಿಸಿದೆ. ಹಣಕಾಸು ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ' ಎಂದು ಸಿದ್ದರಾಮಯ್ಯ ಹೇಳಿದರು.
ಕಲ್ಪಾಮೃತ ಮಳಿಗೆಗೆ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋಟಗಾರಿಕಾ ಇಲಾಖೆ ಮತ್ತು ಜಿಲ್ಲಾಡಳಿತ ಜಂಟಿಯಾಗಿ ನಿರ್ಮಿಸಿರುವ ಎಳನೀರು ಉತ್ಪನ್ನಗಳನ್ನು ಮಾರಾಟ ಮಾಡುವ ಕಲ್ಪಾಮೃತ ಮಳಿಗೆಗೆ ಭೇಟಿ ನೀಡಿ ಎಳನೀರು ಸವಿದರು.
ಕಲ್ಪಾಮೃತ ಉದ್ಘಾಟಿಸಿ, ಎಳನೀರು ಹೀರಿದ ದೇವೇಗೌಡರು!
ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ಭೇಟಿ
ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈನ ಮಠದ ಶ್ರೀ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರನ್ನು ಭೇಟಿಯಾದರು. ಅಂತರರಾಷ್ಟ್ರೀಯ ಮಟ್ಟದ ಪ್ರಾಕೃತ ಸಮ್ಮೇಳನದಲ್ಲಿ ಭಾಗವಹಿಸಿ ವಿದ್ವಾಂಸರನ್ನು ಸನ್ಮಾನಿಸಿದರು.
ಸಚಿವರು, ಅಧಿಕಾರಿಗಳು ಜೊತೆಗಿದ್ದರು
ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್, ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ವಿಶೇಷಾಧಿಕಾರಿ ರಾಕೇಶ್ ಸಿಂಗ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.