ಶಿರಾಡಿ ಘಾಟ್ ನವೆಂಬರ್ 15 ರಿಂದ ಎಲ್ಲ ವಾಹನಗಳ ಸಂಚಾರಕ್ಕೆ ಮುಕ್ತ
ಹಾಸನ, ನವೆಂಬರ್ 14: ಕೆಲ ತಿಂಗಳ ಹಿಂದೆ ಬಿದ್ದಿದ್ದ ಭಾರಿ ಮಳೆಗೆ ಸಂಪೂರ್ಣ ಅಸ್ಥವ್ಯಸ್ತಗೊಂಡಿದ್ದ ಶಿರಾಡಿ ಘಾಟ್ ರಸ್ತೆ ನಾಳೆ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಈ ಬಗ್ಗೆ ಸಚಿವ ಯು.ಟಿ.ಖಾದರ್ ಮಾಹಿತಿ ನೀಡಿದ್ದು, ನಾಳೆಯಿಂದ (ನವೆಂಬರ್ 15) ರಿಂದ ಶಿರಾಡಿ ಘಾಟ್ ರಸ್ತೆಯು ಎಲ್ಲ ರೀತಿಯ ಘನ ವಾಹನಗಳ ಸಂಚಾರಕ್ಕೆ ಮುಕ್ತವಾಗಿರಲಿದೆ ಎಂದಿದ್ದಾರೆ.
ಲಘು ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಮುಕ್ತ
ನವೆಂಬರ್ 12 ಕ್ಕೆ ಘನ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಮುಕ್ತವಾಗಲಿದೆ ಎಂಬ ಸುದ್ದಿ ನಂಬಿ ನೂರಾರು ಲಾರಿಗಳು ಬಂದಿದ್ದವು ಆದರೆ ಸಂಚಾರಕ್ಕೆ ಮುಕ್ತವಾಗದ ಕಾರಣಕ್ಕೆ ಗುಂಡ್ಯದಲ್ಲಿ ಬೀಡು ಬಿಟ್ಟಿದ್ದವು. ನವೆಂಬರ್ 15 ರಂದು ವಾಹನ ಸಂಚಾರ ಮುಕ್ತವಾಗಲಿದೆ ಎಂಬ ಸುದ್ದಿಯಿಂದ ಅವು ನಿರಾಳವಾಗಲಿವೆ.
ಶಿರಾಡಿ ಘಾಟ್ ರಸ್ತೆ ಕ್ಷಮತೆ ಹಾಗೂ ಸುರಕ್ಷತೆ ಬಗ್ಗೆ ಈಗಾಗಲೇ ದ.ಕ. ಹಾಗೂ ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟಿ ರಸ್ತೆ ಸದೃಢವಾಗಿದೆ ಎಂದುಯು.ಟಿ.ಖಾದರ್ ತಿಳಿಸಿದ್ದಾರೆ.
ನೋಡಿ ಸ್ವಾಮೀ ಚಾರ್ಮಾಡಿ ಘಾಟ್ ಅವಸ್ಥೆ: ನಾವೇನು ಊರಿಗೆ ಹೋಗೋದು ಬೇಡ್ವಾ?
ಅತಿಯಾದ ಮಳೆಯಿಂದ ಭೂಕುಸಿತ ಸಂಭವಿಸಿ ಶಿರಾಡಿ ಘಾಟ್ ರಸ್ತೆಯು ಕೆಲ ತಿಂಗಳು ಸಂಚಾರಕ್ಕೆ ಬಂದ್ ಆಗಿತ್ತು. ಆ ನಂತರ ಲಘು ವಾಹನಗಳ ಸಂಚಾರಕ್ಕೆ ಸೆಪ್ಟೆಂಬರ್ 5 ರಂದು ಮುಕ್ತ ಮಾಡಲಾಗಿತ್ತು. ಈಗ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.
ಭಾರಿ ಮಳೆಯಿಂದ ಶಿರಾಡಿ ಘಾಟ್ ರಸ್ತೆ ಸಂಪೂರ್ಣ ಹದಗೆಟ್ಟಿತ್ತು. ಭೂ ಕುಸಿತದಿಂದ ರಸ್ತೆಯ ಬಾಹ್ಯ ಚಿತ್ರಣವೇ ಬದಲಾಗಿಹೋಗಿತ್ತು. ರಸ್ತೆ ರಿಪೇರಿಗೆ ಸರ್ಕಾರ ಹೆಚ್ಚು ಸಮಯವನ್ನೇ ತೆಗೆದುಕೊಂಡಿತು. ಕಾಮಗಾರಿ ವಿಳಂಬ ಆಗಿದ್ದಕ್ಕೆ ಸ್ಥಳೀಯರಿಂದ ಭಾರಿ ವಿರೋಧವೂ ವ್ಯಕ್ತವಾಗಿತ್ತು.