ಮತ್ತೆ ಬಂದ್ ಆಗಲಿದೆಯಾ ಶಿರಾಡಿ ಘಾಟ್ ರಸ್ತೆ?; ಆತಂಕದಲ್ಲಿ ವಾಹನ ಸವಾರರು!
ಹಾಸನ, ಜನವರಿ 12: ಸದಾ ಒಂದಲ್ಲ ಒಂದು ಕಾರಣದಿಂದ ಬಂದ್ ಆಗುವ ರಾಜ್ಯದ ಪ್ರಮುಖ ಹಾಗೂ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರನ್ನು ಸಂಪರ್ಕ ಮಾಡುವ ರಾಷ್ಟ್ರೀಯ ಹೆದ್ದಾರಿ-75 ಮತ್ತೊಮ್ಮೆ ಬಂದ್ ಆಗುವ ಆತಂಕ ಸೃಷ್ಟಿಯಾಗಿದೆ.
ಕಳೆದ ಏಳು ವರ್ಷಗಳಿಂದ ಆಮೆಗತಿದಲ್ಲಿ ನಡೆಯುತ್ತಿರುವ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಯ ಅಂತಿಮ ಹಂತದ ಕೆಲಸಕ್ಕಾಗಿ ಆರು ತಿಂಗಳು ರಸ್ತೆ ಬಂದ್ ಮಾಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಸನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಸಕಲೇಶಪುರ ತಾಲ್ಲೂಕಿನ ಆನೆಮಹಲ್ನಿಂದ ಮಾರನಹಳ್ಳಿವರೆಗೆ ರಸ್ತೆ ಬಂದ್ ಆದರೆ ಮತ್ತೆ ಈ ಭಾಗದ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ, ಮಂಗಳೂರು- ಬೆಂಗಳೂರು ನಡುವಿನ ಸಂಚಾರ ವ್ಯತ್ಯಯದ ಜೊತೆಗೆ ಈ ಭಾಗದ ಪ್ರಮುಖ ಯಾತ್ರಾ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಹೋಗಿ ಬರುವ ಭಕ್ತರಿಗೂ ಸಮಸ್ಯೆ ಎದುರಾಗಲಿದೆ.
ಬೆಂಗಳೂರು, ಮಂಗಳೂರು ಸಂಪರ್ಕಿಸುವ ಹೆದ್ದಾರಿ
ರಾಜ್ಯದ ಪ್ರಮುಖ ಹಾಗೂ ರಾಜಧಾನಿ ಬೆಂಗಳೂರು, ಬಂದರು ನಗರಿ ಮಂಗಳೂರು ನಡುವೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆ ಮತ್ತೆ ಬಂದ್ ಆಗುವ ಆತಂಕ ಎದುರಾಗಿದೆ. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ರಾಜಕಮಲ್ ಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ ಹಾಸನ- ಮಾರನಹಳ್ಳಿಯ ನಡುವಿನ 40 ಕಿಲೋಮೀಟರ್ ಚತುಷ್ಪತ ರಸ್ತೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ಕಳೆದ ಒಂದು ವರ್ಷಗಳಿಂದ ಕಾಮಗಾರಿ ಸ್ವಲ್ಪ ವೇಗ ಪಡೆದುಕೊಂಡಿದೆ.
ಹಾಸನದಿಂದ ಸಕಲೇಶಪುರದವರೆಗಿನ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇದೀಗ ಸಕಲೇಶಪುರ ತಾಲ್ಲೂಕಿನ ಆನೆಮಹಲ್ನಿಂದ ಮಾರನಹಳ್ಳಿಯವರೆಗೆ ಚತುಷ್ಪತ ರಸ್ತೆ ನಿರ್ಮಾಣಕ್ಕೆ ಹತ್ತು ಕಿಲೋಮೀಟರ್ ರಸ್ತೆ ಬಂದ್ ಮಾಡಬೇಕು. ಪರ್ಯಾಯವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಚಾರ್ಮಾಡಿ ಘಾಟ್ ಮೂಲಕ ಸಾಮಾನ್ಯ ಹಾಗೂ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕು,
ಹಾಸನ ಜಿಲ್ಲಾಧಿಕಾರಿಗೆ ಎನ್.ಎಚ್.ಐ.ಎ ಮನವಿ
ಸಾಮಾನ್ಯ ವಾಹನಗಳಿಗೆ ಹಾಸನದ ಬಿಸಿಲೆ ಘಾಟ್ ಮೂಲಕ ಇನ್ನೊಂದು ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಿ ರಸ್ತೆ ಬಂದ್ ಮಾಡಲು ಹಾಸನ ಜಿಲ್ಲಾಧಿಕಾರಿಗೆ ಎನ್.ಎಚ್.ಐ.ಎ ಜನವರಿ 6ರಂದು ಮನವಿ ಮಾಡಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿರುವ ಜಿಲ್ಲಾಧಿಕಾರಿ ಆರ್. ಗಿರೀಶ್, ರಸ್ತೆಯ ಬಗ್ಗೆ ತಜ್ಞರ ವರದಿ ಪಡೆಯಬೇಕು ಹಾಗೂ ಈ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ರಸ್ತೆ ಬಂದ್ ಮಾಡುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಮಾಡುವುದಾಗಿ ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.
ಬೆಂಗಳೂರಿನಿಂದ ಮಂಗಳೂರುವರೆಗೆ ಚತುಷ್ಪತ ರಸ್ತೆ ನಿರ್ಮಾಣ
ಬೆಂಗಳೂರಿನಿಂದ ಮಂಗಳೂರುವರೆಗೆ ಚತುಷ್ಪತ ರಸ್ತೆ ನಿರ್ಮಾಣಕ್ಕೆ ದಶಕಗಳ ಹಿಂದೆಯೇ ಯೋಜನೆ ಸಿದ್ಧವಾಗಿತ್ತು. ಆದರೆ ಬೆಂಗಳೂರಿನಿಂದ ಹಾಸನದವರೆಗೆ ನಡೆದಿದ್ದ ಕಾಮಗಾರಿ, ಬಳಿಕ ಸ್ಥಗಿತಗೊಂಡು ಕಳೆದ ಏಳು ವರ್ಷಗಳಿಂದ ಆಮೆ ವೇಗದಲ್ಲಿ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ-75ರ ಶಿರಾಡಿ ಘಾಟ್ ರಾಜಧಾನಿ ಬೆಂಗಳೂರು- ಮಂಗಳೂರು ನಡುವೆ ಪೆಟ್ರೋಲಿಯಂ ಉತ್ಪನ್ನಗಳ ಜೊತೆಗೆ ದೊಡ್ಡ ಪ್ರಮಾಣದ ಸರಕು ಸಾಗಣೆಯ ಪ್ರಮುಖ ಮಾರ್ಗವಾಗಿದೆ.
ಜೊತೆಗೆ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಇದೇ ಮಾರ್ಗದಲ್ಲಿ ನಿತ್ಯವೂ ಸಾವಿರಾರು ಜನರು ಓಡಾಡುತ್ತಾರೆ. ಹೇಳಿ ಕೇಳಿ ಸಕಲೇಶಪುರ ಪ್ರಕೃತಿ ಪ್ರವಾಸೋದ್ಯಮದ ತಾಣ, ಇಲ್ಲಿಗೆ ಬರುವ ಪ್ರವಾಸಿಗರಿಂದಲೇ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಹಾಗಾಗಿಯೇ ಮತ್ತೆ ರಸ್ತೆ ಬಂದ್ ಆದರೆ ಈ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಆತಂಕ ನಿರ್ಮಾಣವಾಗಿದೆ.
ಒಂದು ಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿ
ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಉದ್ದೇಶದಿಂದ ಹಲವು ತಿಂಗಳು ರಸ್ತೆ ಬಂದ್ ಆಗಿದ್ದರಿಂದ ಜನರು ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದರು. ಈಗ ಮತ್ತೊಮ್ಮೆ ರಸ್ತೆ ಬಂದ್ ವಿಚಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ, ""ಒಂದು ಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಕಾಮಗಾರಿ ಮಾಡಲಿ, ಸಂಪೂರ್ಣ ಬಂದ್ ಮಾಡುವ ಅಗತ್ಯ ಇಲ್ಲ ಎಂದಿದ್ದು, ಈ ಬಗ್ಗೆ ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡುತ್ತೇವೆ. ಕಾಮಗಾರಿಗೆ ಹಣ ಹೆಚ್ಚು ಖರ್ಚಾದರೂ ಪರವಾಗಿಲ್ಲ ಬೇಗನೆ ಮುಗಿಸಿ ಎಂದು ಮನವಿ ಮಾಡುವುದಾಗಿ,'' ಹೇಳಿದ್ದಾರೆ.
ಒಟ್ಟಾರೆ, ಮೊದಲೇ ಕೊರೊನಾ ಆತಂಕದಿಂದ ಕಳೆದ ಎರಡು ವರ್ಷಗಳಿಂದ ಭಾರೀ ನಷ್ಟಕ್ಕೀಡಾಗಿರುವ ಜನರು ಈಗಷ್ಟೇ ಸುಧಾರಿಸಿಕೊಳ್ಳುತ್ತಿರುವಾಗ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಬಂದ್ ವಿಚಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಸಂಪೂರ್ಣ ರಸ್ತೆ ಬಂದ್ ಮಾಡದೆ ಇದೇ ಮಾರ್ಗದ ಪರ್ಯಾಯ ರಸ್ತೆಗಳ ಮೂಲಕ ಜನರ ಸಂಚಾರಕ್ಕೆ ಅವಕಾಶ ನೀಡಲಿ ಎನ್ನುವ ಅಭಿಪ್ರಾಯ ಜನರದ್ದಾಗಿದೆ.
Recommended Video