ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ?
Recommended Video
ಹಾಸನ, ಜೂನ್ 3: ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮತ್ತೆ ಹಾಸನಕ್ಕೆ ಮರಳುವ ಸಾಧ್ಯತೆ ಇದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಾಜ್ಯ ಪಶುಸಂಗೋಪನಾ ಸಚಿವ ಎ. ಮಂಜು ನಡುವಣ ವಾಕ್ಸಮರ ನಂತರ ಅವರನ್ನು ಹಾಸನದಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.
ರೋಹಿಣಿ ಸಿಂಧೂರಿ ಜೆಡಿಎಸ್ ನಾಯಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಎ. ಮಂಜು ಅವರ ನಿರಂತರ ಆರೋಪವಾಗಿತ್ತು. ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ರೋಹಿಣಿ ಸಿಂಧೂರಿಯವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಈ ವರ್ಗಾವಣೆ ವಿರೋಧಿಸಿ ರೋಹಿಣಿ ಸಿಂದೂರಿ ಸಿಎಟಿ ಮೆಟ್ಟಿಲೇರಿದ್ದರು. ಮೊದಲಿಗೆ ವರ್ಗಾವಣೆಯನ್ನು ಸಿಎಟಿ ತಡೆ ಹಿಡಿಯಿತಾದರೂ ಕೊನೆಗೆ ರಾಜ್ಯ ಸರ್ಕಾರದ ಕೈ ಮೇಲಾಗಿ ಮತದಾನದ ಸಂದರ್ಭದಲ್ಲಿ ರೋಹಿಣಿ ಜಿಲ್ಲೆಯಿಂದ ಹೊರಗುಳಿಯುವಂತಾಗಿತ್ತು.
ವರ್ಗಾವಣೆ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ
ಆದರೆ ಈಗ ಜೆಡಿಎಸ್ ಜಿಲ್ಲಾ ನಾಯಕರ ಪ್ರಕಾರ, ರೋಹಿಣಿ ಮತ್ತೆ ಜಿಲ್ಲಾಧಿಕಾರಿಯಾಗಿ ಮರಳುವುದು ಖಚಿತ. "ಹಾಸನದ ಅಭಿವೃದ್ಧಿ ಜೆಡಿಎಸ್ ನ ಭವಿಷ್ಯದ ದೃಷ್ಟಿಯಿಂದ ಮಹತ್ವ ಪೂರ್ಣವಾದದ್ದು. ಇಲ್ಲಿಗೆ ಓರ್ವ ದಕ್ಷ ಅಧಿಕಾರಿ ಬೇಕೆನ್ನುವುದು ಪಕ್ಷದ ಇರಾದೆ. ಹೀಗಾಗಿ ರೋಹಿಣಿ ಸಿಂಧೂರಿಯವರನ್ನು ಮತ್ತೆ ಜಿಲ್ಲಾಧಿಕಾರಿಯಾಗಿ ಮುಂದುವರಿಸುವುದು ಖಚಿತ. ಎ. ಮಂಜು ಜತೆಗಿನ ತಿಕ್ಕಾಟದ ಸಂದರ್ಭದಲ್ಲಿ ರೋಹಿಣಿಯನ್ನು ಬೆಂಬಲಿಸಿದ್ದು ಎಚ್.ಡಿ. ರೇವಣ್ಣ ಮಾತ್ರ," ಎಂದು ನೆನಪಿಸಿಕೊಳ್ಳುತ್ತಾರೆ ಪಕ್ಷದ ನಾಯಕರು.
ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಬಳಿಕ ರಾಜ್ಯ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.