ನರೇಗಾದಿಂದ ಪುನಶ್ಚೇತನದತ್ತ ಹಾಸನದ ಸಂತೇಕೊಪ್ಪಲು ಐತಿಹಾಸಿಕ ಕಲ್ಯಾಣಿ
ಹಾಸನ, ಮೇ 30: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅವಸಾನದ ಅಂಚಿನಲ್ಲಿರುವ ಐತಿಹಾಸಿಕ ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ನರೇಗಾ ಯೋಜನೆಯಡಿ ಮತ್ತೆ ಆರಂಭಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ.
Recommended Video
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಕಲ್ಯಾಣಿಗಳಿದ್ದು, ಅವುಗಳಲ್ಲಿ ಕೆಲವು ಸುಸ್ಥಿತಿಯಲ್ಲಿದ್ದರೆ, ಇನ್ನು ಕೆಲವು ನಿರ್ಲಕ್ಷ್ಯಕ್ಕೊಳಗಾಗಿ ಅವಸಾನದ ಅಂಚಿಗೆ ತಲುಪಿದ್ದವು. ಹಿಂದಿನ ಕಾಲದಲ್ಲಿ ಪ್ರಮುಖ ನೀರಿನ ಸೆಲೆಯಾಗಿದ್ದ ಈ ಕಲ್ಯಾಣಿಗಳು ಕಾಲ ಕ್ರಮೇಣ ಜನ ಅದರತ್ತ ನಿರಾದಾರ ತೋರಿದ ಕಾರಣ ಅವುಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗದೆ ಇದ್ದುದರಿಂದ ಅವುಗಳು ಹೂಳು ತುಂಬಿ, ಗಿಡಗಂಟಿಗಳು ಬೆಳೆದು ಮುಚ್ಚಿಹೋಗಿದ್ದವು.
ಅಂತರ್ಜಲ ಕಾಪಾಡುವ ಕಲ್ಯಾಣಿಗಳು
ಅಂತರ್ಜಲ ಕಾಪಾಡುವಲ್ಲಿ ಮತ್ತು ನೀರನ್ನು ಹಿಡಿದಿಡುವಲ್ಲಿ ಕಲ್ಯಾಣಿಗಳ ಮಹತ್ವದ ಬಗ್ಗೆ ಅರಿತ ಹಾಸನದ ಹಸಿರುಭೂಮಿ ಪ್ರತಿಷ್ಠಾನವು ಎರಡು ವರ್ಷಗಳ ಹಿಂದೆಯೇ ಹೊಸದೊಂದು ಕಾರ್ಯಕ್ರಮವನ್ನು ಹುಟ್ಟು ಹಾಕಿತು. ಅವಸಾನದಂಚಿನಲ್ಲಿರುವ ಕಲ್ಯಾಣಿಗಳ ಹೂಳು ತೆಗೆದು, ಗಿಡಗಂಟಿಗಳನ್ನು ತೆರವುಗೊಳಿಸಿ ಪುನಶ್ಚೇತನಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಆ ಕಾರ್ಯಕ್ರಮವು ಆಗಿನ ಸಂಘಟನಾ ಕಾರ್ಯದರ್ಶಿಗಳಾಗಿದ್ದ ತಿಮ್ಮೇಶ್ಪ್ರಭು ಅವರ ಆಯೋಜನೆಯ ಮೇರೆಗೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ.ಎಚ್.ಎಲ್.ನಾಗರಾಜ್ರವರ ನೇತೃತ್ವದಲ್ಲಿ ಆರಂಭವಾಯಿತು.
ನರೇಗಾ ಯೋಜನೆ ದಿನದ ಕೂಲಿ 202 ರೂ.ಗೆ ಏರಿಕೆ
ತಿಂಗಳ ನಾಲ್ಕು ಭಾನುವಾರವೂ ಹಸಿರು ಪ್ರತಿಷ್ಠಾನದ ಸದಸ್ಯರು ಮತ್ತು ವಿವಿಧ ಕಾಲೇಜುಗಳ ಎನ್ಎಸ್ಎಸ್ ವಿದ್ಯಾರ್ಥಿಗಳು, ಇವರಲ್ಲದೆ ಗ್ರಾಮಸ್ಥರ ಮನವೊಲಿಸಿ ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು. ಇದಕ್ಕೆ ಉತ್ತಮ ಸ್ಪಂದನೆಯೂ ದೊರೆಯಿತು. ಒಂದಷ್ಟು ಕಲ್ಯಾಣಿಗಳಿಗೆ ಮರು ಜೀವ ಬಂತು. ಅದೇ ವರುಷ ಮಳೆ ಉತ್ತಮವಾಗಿ ಸುರಿದ ಕಾರಣ ಕಲ್ಯಾಣಿಗಳಲ್ಲಿ ನೀರು ತುಂಬಿದವು. ಪರಿಣಾಮ ಅಂತರ್ಜಲದ ಮಟ್ಟವೂ ಹೆಚ್ಚಾಯಿತು.
ಕೊರೊನಾದಿಂದಾಗಿ ಎದುರಾಗಿದ್ದ ತೊಡಕು
ಇದೇ ಕಾರ್ಯವನ್ನು ಕಳೆದ ಎರಡು ವರ್ಷಗಳಿಂದ ಮಾಡುತ್ತಾ ಬರಲಾಗುತ್ತಿದೆ. ಈ ಬಾರಿ ಕೊರೊನಾದಿಂದಾಗಿ ಮಾಡಲಾಗಲಿಲ್ಲ. ಇದೀಗ ಹಾಸನ ತಾಲೂಕಿನ ಸಂತೇಕೊಪ್ಪಲು ಗ್ರಾಮದ ಬೃಹತ್ ಐತಿಹಾಸಿಕ ಕಲ್ಯಾಣಿಯನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ನರೇಗಾ ಯೋಜನೆಯಡಿ ಹೂಳೆತ್ತಿ ಪುನಶ್ಚೇತನಗೊಳಿಸುವ ಕೆಲಸ ಪ್ರಾರಂಭವಾಗಿದೆ. ಇದು ಅತ್ಯಂತ ಸಂತೋಷದ ಮತ್ತು ಆಶಾದಾಯಕ ಬೆಳವಣೆಗೆ ಎಂದು ಹಸಿರುಭೂಮಿ ಪ್ರತಿಷ್ಠಾನ ಪ್ರಶಂಸೆ ವ್ಯಕ್ತಪಡಿಸಿದೆ. ಹಾಸನ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಡಾ.ಯಶವಂತ್, ಸಂತೆಕೊಪ್ಪಲು ಪಿಡಿಓ ಚಂದ್ರಕಲಾ ಮತ್ತು ಗ್ರಾಪಂ ಸದಸ್ಯರಾದ ಮಲ್ಲೇಶ್ರವರ ಮುತುವರ್ಜಿಯಿಂದ ಈ ಕೆಲಸಕ್ಕೆ ಚಾಲನೆ ದೊರೆತಿದ್ದು, ಜಾಬ್ಕಾರ್ಡ್ ಹೊಂದಿರುವ ಇಪ್ಪತ್ತು ಶ್ರಮದಾನಿಗಳು ಕೆಲಸ ಮಾಡುತ್ತಿದ್ದಾರೆ.
ಕಲ್ಯಾಣಿಯಲ್ಲಿ ನೀರು ತುಂಬುವ ಭರವಸೆ
ಇದೇ ಕಲ್ಯಾಣಿಯ ಪುನಶ್ಚೇತನವನ್ನು ಹಾಸನದ ಹಸಿರುಭೂಮಿ ಪ್ರತಿಷ್ಠಾನದ ವತಿಯಿಂದ ಎರಡು ವರ್ಷಗಳ ಹಿಂದೆಯೇ ಮಾಡಲಾಗಿತ್ತು. ಶ್ರಮದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಸುಮಾರು 20 ಗಂಟೆಗಳ ಕಾಲ ಕೆಲಸ ಮಾಡಿ ಹೂಳು ತೆಗೆಯಲಾಗಿತ್ತು. ಹೂಳು ಹೆಚ್ಚಾಗಿದ್ದ ಕಾರಣ ಮತ್ತು ಕಲ್ಯಾಣಿಯು ಬೃಹತ್ ಪ್ರಮಾಣದ್ದಾಗಿದ್ದು, ಆಳ ಹೆಚ್ಚಾಗಿದ್ದರಿಂದ ಕೆಲಸವನ್ನು ಪೂರ್ಣಗೊಳಿಸಲಾಗಿರಲಿಲ್ಲ.
ಅಂತರ್ಜಲ ವೃದ್ಧಿಗೆ ರಾಜ್ಯ ಸರ್ಕಾರದ ಹೊಸ ಪ್ಲ್ಯಾನ್...
ಇನ್ನು ಈ ಕಲ್ಯಾಣಿಗೆ ಮಳೆನೀರು ಹರಿದು ಬರುವ ದಾರಿಗಳು ಇಲ್ಲವಾದ್ದರಿಂದ ಕಳೆದ ಮೂರು ತಿಂಗಳ ಹಿಂದೆ ಅದಕ್ಕೆ ಕೆಲವೇ ಮೀಟರ್ ಗಳ ಅಂತರದಲ್ಲಿ ಮಳೆ ನೀರಿನ ಸಂಗ್ರಹಕ್ಕಾಗಿ ಚೆಕ್ ಡ್ಯಾಂ ನಿರ್ಮಿಸಲಾಗಿದ್ದು, ಈ ಬಾರಿ ಬಿದ್ದಿರುವ ಎರಡು ಮೂರು ದೊಡ್ಡ ಮಳೆಗೆ ಅದರಲ್ಲಿ ನೀರು ತುಂಬಿದೆ. ಸುತ್ತಲಿನ ಕೊಳವೆ ಬಾವಿಗಳಿಗೆ ಜೀವ ಬಂದಿದೆ. ಜೊತೆಗೆ ಈಗ ನರೇಗಾ ಯೋಜನೆಯಡಿ ಐತಿಹಾಸಿಕ ಈ ಬೃಹತ್ ಕಲ್ಯಾಣಿಯನ್ನು ಹೂಳೆತ್ತುತ್ತಿರುವುದರಿಂದ ಈ ಬಾರಿ ಅದರಲ್ಲಿ ಅಂತರ್ಜಲ ವೃದ್ಧಿಸುವ ಹಾಗೂ ಮಳೆ ನೀರು ಸಂಗ್ರಹಿಸುವ ಸಾಧ್ಯತೆ ಹೆಚ್ಚಾಗಿದೆ.
ನರೇಗಾ ಯೋಜನೆಯಡಿ ಮತ್ತೆ ಕೆಲಸ
ಈ ಬೃಹತ್ ಕಲ್ಯಾಣಿಯು ಸಂತೇಕೊಪ್ಪಲು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಸ್ತಾರವಾದ ಆವರಣದಲ್ಲಿ ಇದ್ದು, ಇಲ್ಲಿ ಆರೋಗ್ಯ ನಿರೀಕ್ಷಕರಾದ ಅಪ್ಪಾಜಿಗೌಡರ ಮುತುವರ್ಜಿಯಿಂದ, ಹಸಿರುಭೂಮಿ ಪ್ರತಿಷ್ಠಾನದ ಪ್ರೇರಣೆ ಮತ್ತು ನೇತೃತ್ವದಲ್ಲಿ ಇನ್ನೂರಕ್ಕೂ ಹೆಚ್ಚು ಮಿಶ್ರ ಜಾತಿಯ ಗಿಡಗಳನ್ನು ನೆಡಲಾಗಿದ್ದು, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಗ್ರಾಮಸ್ಥರ ನೆರವಿನೊಂದಿಗೆ ಗಿಡಗಳನ್ನು ಬೆಳೆಸುತ್ತಿರುವುದು ಸಂತಸದ ವಿಷಯವಾಗಿದೆ.
ಪುನಶ್ಚೇತನ ಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ಹಸಿರುಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಚ್.ಅಪ್ಪಾಜಿಗೌಡರು, ಮಾಜಿ ಅಧ್ಯಕ್ಷರಾದ ಸುಬ್ಬುಸ್ವಾಮಿ, ಹಿರಿಯ ಸದಸ್ಯರಾದ ಪುಟ್ಟಯ್ಯ, ರೂಪಹಾಸನ ಅವರು ಭೇಟಿ ನೀಡಿದ್ದು, ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾರ್ಯವನ್ನು ಶ್ಲಾಘಿಸಿದ್ದಾರೆ.