ಟ್ರಕ್ ಟರ್ಮಿನಲ್ ವಿಚಾರ: ಎಚ್.ಡಿ.ರೇವಣ್ಣ-ಪ್ರೀತಂ ಗೌಡ ನಡುವೆ ನಿಲ್ಲದ ಜಟಾಪಟಿ
ಹಾಸನ ಮೇ 5: ಹಾಸನದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಾಸಕ ಪ್ರೀತಂ ಗೌಡರ ನಡುವೆ ಜಟಾಪಟಿ ಜೋರಾಗಿರುವ ಹೊತ್ತಿನಲ್ಲೆ ಈ ಬಗ್ಗೆ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
ಹಾಸನದ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31ರಲ್ಲಿ 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್ ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸರ್ಕಾರ ಈಗಾಗಲೇ ಪೂರ್ವಾನುಮತಿ ನೀಡಿರುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 71 ರಡಿಯಲ್ಲಿ ಟ್ರಕ್ ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಲು ಸರ್ಕಾರ ಪೂರ್ವಾನುಮತಿ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶದಂತೆ ಸದರಿ ಜಮೀನನ್ನು ಕಂದಾಯ ವ್ಯಾಪ್ತಿಯ ಸುಪರ್ದಿಯಲ್ಲೇ ಇರಿಸಿಕೊಳ್ಳತಕ್ಕದ್ದು, ಈ ಜಮೀನನ್ನು ಮುಂದೆ ಯಾವುದಾದರೂ ಸಂಸ್ಥೆ, ಇಲಾಖೆಗೆ ನೀಡಬೇಕಾದಲ್ಲಿ ಸರ್ಕಾರದ ಅನುಮತಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಪತ್ರದಲ್ಲಿ ಸೂಚಿಸಲಾಗಿದೆ.
ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂದೆ ನಡೆಯುತ್ತಿರುವ ಟ್ರಕ್ ಟರ್ಮಿನಲ್ ಕಾಮಗಾರಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸ್ಥಳೀಯರು, ವಿದ್ಯಾರ್ಥಿಗಳು ಭಾರೀ ವಿರೋಧ ವ್ಯಕ್ತಪಡಿಸಿದರು. ಆದರೂ ಟ್ರಕ್ ಟರ್ಮಿನಲ್ ಕಾಮಗಾರಿ ಮಾಡಿಯೇ ಸಿದ್ಧ ಎಂದು ಶಾಸಕ ಪ್ರೀತಂಗೌಡ ಪಣ ತೊಟ್ಟಿದ್ದರು. ಹೀಗಾಗಿ ಸ್ಥಳೀಯರೊಂದಿಗೆ ಸ್ವತಃ ಹೋರಾಟಕ್ಕಿಳಿದ್ದ ಎಚ್.ಡಿ.ರೇವಣ್ಣ, ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
144 ಸೆಕ್ಷನ್ ಜಾರಿ:
ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇದರಿಂದ ಟ್ರಕ್ ಟರ್ಮಿನಲ್ ನಿರ್ಮಾಣದಿಂದ ಸ್ಥಳವನ್ನು ಕಂದಾಯ ಸಚಿವರು ಖುದ್ದು ಪರಿಶೀಲನೆ ನಡೆಸಲಿ ಎಂದು ಪಟ್ಟು ಹಿಡಿದ ರೇವಣ್ಣ, ಅಧಿಕಾರಿಗಳು ಒಪ್ಪಿದರೆ ಅಲ್ಲಿಯೇ ಟ್ರಕ್ ಟರ್ಮಿನಲ್ ಕಾಮಗಾರಿ ನಡೆಸಲಿ ಎಂದು ಆಕ್ರೋಶ ಹೊರಹಾಕಿದ್ದರು.
ಇದೀಗ ಕಂದಾಯ ಇಲಾಖೆಯಿಂದಲೇ ಕೆಂಚಟ್ಟಳ್ಳಿ ಗ್ರಾಮದ ಸರ್ವೆ ನಂಬರ್ 31ರಲ್ಲಿ 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್ ಟರ್ಮಿನಲ್ ಉದ್ದೇಶಕ್ಕೆ ಕಾಯ್ದಿರಿಸಿರುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.