ಬಿಜೆಪಿಗೆ ವೋಟ್ ಹಾಕಿದ್ದಕ್ಕೆ SSLCಯಲ್ಲಿ ದಕ್ಷಿಣ ಕನ್ನಡ ಸ್ಥಾನ ಕುಸಿತ: ರೇವಣ್ಣ
Recommended Video
ಹಾಸನ, ಮೇ 1: ಹಾಸನ ಜಿಲ್ಲೆಯು ಎಸ್ಎಸ್ಎಲ್ಸಿಯಲ್ಲಿ ಮೊದಲ ಸ್ಥಾನ ಪಡೆಯಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಶ್ರಮವೇನೂ ಇಲ್ಲ. ಪತ್ನಿ ಭವಾನಿ ರೇವಣ್ಣ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾಡಿದ ಕೆಲಸಗಳೇ ಇದಕ್ಕೆ ಕಾರಣ ಎಂದಿರುವ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸದಾ ಮೊದಲು ಅಥವಾ ಎರಡನೆಯ ಸ್ಥಾನ ಪಡೆದುಕೊಳ್ಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಐದನೇ ಸ್ಥಾನಕ್ಕೆ ಕುಸಿದಿರುವುದನ್ನು ರೇವಣ್ಣ ವ್ಯಂಗ್ಯವಾಡಿದ್ದಾರೆ.
ಸಿದ್ದಿಸಿದ ರೋಹಿಣಿ ಸಂಕಲ್ಪ, ಎಸ್ಎಸ್ಎಲ್ಸಿಯಲ್ಲಿ ಹಾಸನ ನಂ.1
ದಕ್ಷಿಣ ಕನ್ನಡದವರು ಬಿಜೆಪಿಯವರಿಗೆ ಮತಹಾಕಿದ್ದಾರೆ. ಇದಕ್ಕಾಗಿ ಅವರ ಸ್ಥಾನ ಕುಸಿದಿದೆ. ಜಾತ್ಯತೀತರಿಗೆ ಅವರು ವೋಟ್ ಹಾಕಿದ್ದರೆ ಮೊದಲನೆಯ ಸ್ಥಾನ ಬರುತ್ತಿತ್ತು. ಅವರು ಶಿಕ್ಷಣಕ್ಕೆ ಒತ್ತು ನೀಡುತ್ತಿಲ್ಲ ಎನ್ನುವುದಕ್ಕೆ ಇದೇ ಉದಾಹರಣೆ ಎಂದು ಹೇಳಿದ್ದಾರೆ.
'ಹಾಸನ ಪ್ರಥಮ ಸ್ಥಾನದ ಬರಲು ದೇವರ ಅನುಗ್ರಹ ಕಾರಣ. ಜತೆಗೆ ನನ್ನ ಪತ್ನಿ ಭವಾನಿ ಕೂಡ ಕಾರಣ. ಶಿಕ್ಷಣದ ಪ್ರಗತಿಗೆ ಸಂಬಂಧಿಸಿದಂತೆ 3-4 ಬಾರಿ ನಾನು ಸಭೆಯಲ್ಲಿ ಭಾಗವಹಿಸಿದ್ದೇನೆ. ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿ ಸಭೆಗಳನ್ನು ನಡೆಸಿದ್ದರು. ವಿಶೇಷ ತರಗತಿಗಳನ್ನು ನಡೆಸಲು ಸೂಚಿಸಿದ್ದರು' ಎಂದು ರೇವಣ್ಣ ಹೇಳಿದ್ದಾರೆ.
SSLC ಫಲಿತಾಂಶ ಹೆಚ್ಚಳದ ಶ್ರೇಯಸ್ಸು ಯಾರಿಗೆ? ರೋಹಿಣಿ ಅಥವಾ ಭವಾನಿ ರೇವಣ್ಣ?
ಕರಾವಳಿ ಭಾಗದ ಜನರಿಗೆ ತಿಳಿವಳಿಕೆ ಕಡಿಮೆ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು.