ಹಾಸನದಲ್ಲಿ ಮಗನ ಗೆಲುವಿಗಾಗಿ ಟೊಂಕಕಟ್ಟಿ ನಿಂತ ರೇವಣ್ಣ..!
Recommended Video
ಹಾಸನ, ಮಾರ್ಚ್ 15: ರಾಜಕೀಯದ ಸಂಧ್ಯಾ ಕಾಲದಲ್ಲಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಮೊಮ್ಮಕ್ಕಳಿಬ್ಬರು ಸಂಸತ್ತು ಪ್ರವೇಶಿಸುವುದನ್ನು ನೋಡುವ ಕಾತುರದಲ್ಲಿದ್ದಾರೆ.
ಅದಕ್ಕಾಗಿ ಜೆಡಿಎಸ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ ಹಾಸನ ಮತ್ತು ಮಂಡ್ಯ ಕ್ಷೇತ್ರಕ್ಕೆ ಒಬ್ಬೊಬ್ಬರನ್ನು ಕಣಕ್ಕಿಳಿಸಿ ಅವರನ್ನು ಗೆಲ್ಲಿಸಿಕೊಂಡು ಬರುವ ಜವಬ್ದಾರಿಯನ್ನು ಮಕ್ಕಳಿಬ್ಬರಿಗೆ ಬಿಟ್ಟು ಬಿಟ್ಟಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಗ ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ನಿಂತು ಕೆಲಸ ಮಾಡುತ್ತಿದ್ದರೆ, ಇತ್ತ ಹಾಸನದಲ್ಲಿ ಪ್ರಜ್ವಲ್ ಗಾಗಿ ಅಪ್ಪ ರೇವಣ್ಣ ಹಗಲು ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಡಿಯೋ: ಗಳಗಳನೇ ಅತ್ತ ದೊಡ್ಡಗೌಡ್ರು, ಜೊತೆಯಾದ ಮೊಮ್ಮಗ!
ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಹಾಸನ ದೇವೇಗೌಡರ ಭದ್ರಕೋಟೆ. ಅಲ್ಲಿ ಜೆಡಿಎಸ್ ನದ್ದೇ ಪಾರುಪತ್ಯೆ. ಆದರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆಯಿಟ್ಟಿದೆ.
ಜೊತೆಗೆ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆಯೇ ಚರ್ಚೆಯಾಗುತ್ತಿರುವುದರಿಂದ ಮತ್ತು ಮತದಾರರು ಕೂಡ ಪ್ರಬುದ್ಧರಾಗುತ್ತಿರುವುದರಿಂದ ಈ ಹಿಂದೆ ಇದ್ದಂತಹ ಪರಿಸ್ಥಿತಿ ಈಗಲೂ ಮುಂದುವರೆಯಬಹುದೆಂದು ಹೇಳಲಾಗುವುದಿಲ್ಲ. ಜತೆಗೆ ಬಿಜೆಪಿ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬುದರ ಮೇಲೆ ಅಲ್ಲಿ ಪ್ರಜ್ವಲ್ ರೇವಣ್ಣ ರಾಜಕೀಯ ಭವಿಷ್ಯ ಮತ್ತು ಬಿಜೆಪಿ ನಡುವಿನ ಪೈಪೋಟಿ ಶುರುವಾಗಲಿದೆ.
ಅಂದುಕೊಂಡಷ್ಟು ಸುಲಭವಿಲ್ಲ ಗೆಲುವು
ಈಗಿನ ಪರಿಸ್ಥಿತಿಯನ್ನು ನೋಡಿದರೆ ಹಾಸನದಲ್ಲಿ ಬಿಜೆಪಿ ಅಸ್ತಿತ್ವ ಕಂಡುಕೊಳ್ಳಲು ಹವಣಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಮುಖಂಡ ಮಾಜಿ ಸಚಿವರೂ ಆಗಿರುವ ಎ.ಮಂಜು ಅವರು ದೇವೇಗೌಡರ ಕುಟುಂಬದ ವಿರುದ್ಧ ಮೊದಲಿನಿಂದಲೂ ಕತ್ತಿ ಮಸೆಯುತ್ತಲೇ ಬಂದವರು. ಹೀಗಾಗಿ ಅವರು ಜೆಡಿಎಸ್ ಅನ್ನು ಬೆಂಬಲಿಸುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಅವರಿಗೆ ಗೆಲುವು ದೇವೇಗೌಡರಷ್ಟು ಸುಲಭವಾಗಿ ದಕ್ಕುತ್ತದೆ ಎನ್ನಲಾಗುವುದಿಲ್ಲ. ಹೀಗಾಗಿಯೇ ತನ್ನ ಮಗನ ಬೆನ್ನಿಗೆ ನಿಂತಿರುವ ಎಚ್.ಡಿ.ರೇವಣ್ಣ ಅವರು ಮಗನನ್ನು ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದು ಕ್ಷೇತ್ರದುದ್ದಕ್ಕೂ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಲೋಕಸಭೆ ಕದನ 2019: ಹಾಸನ ಲೋಕಸಭಾ ಕ್ಷೇತ್ರದ ಪರಿಚಯ
ಮಾಧ್ಯಮಗಳಲ್ಲಿ ಜೋಕ್ ಗಳಾಗಿ ಬಿಂಬಿತ
ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾರಣದಿಂದಾಗಿ ಚುನಾವಣಾ ಪ್ರಚಾರದ ವೇಳೆ ಕೇವಲ ಬಿಜೆಪಿಯನ್ನಷ್ಟೇ ತೆಗಳಿ ಮತ ಪಡೆಯುವ ಅನಿವಾರ್ಯತೆಯಿದ್ದು, ಅದೊಂದು ರೀತಿಯಲ್ಲಿ ಕಷ್ಟದ ಕೆಲಸ. ಆದರೂ ಮಗನಿಗಾಗಿ ರೇವಣ್ಣ ಅವರು ಮಾತನಾಡಲೇಬೇಕಾಗಿದೆ. ಅವರ ಮಾತುಗಳ ಶೈಲಿ ಕೂಡ ವಿಭಿನ್ನವಾಗಿದ್ದು, ತಾನೇನು ಮಾತನಾಡುತ್ತಿದ್ದೇನೆ ಎಂಬುದೇ ಕೆಲವೊಮ್ಮೆ ಅವರಿಗೆ ತಿಳಿಯುತ್ತಿಲ್ಲ. ಜತೆಗೆ ಅದು ಮಾಧ್ಯಮಗಳಲ್ಲಿ ಜೋಕ್ ಗಳಾಗಿ ಬಿಂಬಿತವಾಗುತ್ತಿದೆ.
ಮಂಡ್ಯ ಜೆಡಿಎಸ್ ಸಮಾವೇಶ : ನಿಖಿಲ್ ಅಭ್ಯರ್ಥಿ ಎಂದು ಘೋಷಣೆ
ಈ ರಾಷ್ಟ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ?
ರೇವಣ್ಣ ಬಿಜೆಪಿ ವಿರುದ್ಧ ಎಸೆದಿರುವ ಒಂದಷ್ಟು ವಾಗ್ಭಾಣಗಳು ಇಲ್ಲಿವೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿಯವರು ಈ ರಾಷ್ಟ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ರಾಮ ರಾಮ ಎಂದು ಭಜನೆ ಮಾಡಿ ಇವತ್ತು ಶ್ರೀರಾಮನನ್ನೇ ಮರೆತಿದ್ದಾರೆ. ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ನೀಡುತ್ತಿರುವ ಎರಡು ಸಾವಿರ ಹಣ ದಿನದ ಲೆಕ್ಕದಲ್ಲಿ 17 ರೂ. ಆಗುತ್ತದೆ. ಎಷ್ಟೋ ಬಸ್ ನಿಲ್ದಾಣಗಳಲ್ಲಿ ಅಲೆದಾಡುವ ವ್ಯಕ್ತಿಗಳಿಗೆ ಒಬ್ಬ ಮಾಮೂಲಿ ಮನುಷ್ಯನೇ ಐವತ್ತು ರೂಪಾಯಿ ಟಿಪ್ಸ್ ಕೊಡುತ್ತಾನೆ. ಹೀಗಾಗಿ ಅದಕ್ಕೂ ಆ ಹಣ ಸಮಾನವಿಲ್ಲದಂತಾಗಿದೆ. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದಾಗ ಹಾಸನ-ಬೆಂಗಳೂರಿಗೆ ರೈಲ್ವೆ ಯೋಜನೆ ಕಾಣಲು ಸಾಧ್ಯವಾಯಿತು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಡಿಪಾಯ ಹಾಕಿದವರು ಯಾರು? ತಾಕತ್ತಿದ್ದರೆ ಬಿಜೆಪಿಯವರು ಹೇಳಲಿ.
ಕಣ್ಣೀರಿಟ್ಟಿದ್ದು ಕುಟುಂಬ ರಾಜಕಾರಣಕಲ್ಲ
"ಬಿಜೆಪಿಯವರು ಈ ದೇಶದ ಸೈನಿಕರ ಮರಣವನ್ನು ಮುಂದಿಟ್ಟುಕೊಂಡು ಜೈಕಾರ ಹಾಕುವ ಮೂಲಕ ಈ ರಾಷ್ಟ್ರದ ಮತದಾರರಿಂದ ಮತ ಪಡೆಯುವ ಹೀನಾಯ ಸಂಪ್ರದಾಯ ಅಳವಡಿಸಿಕೊಂಡಿದ್ದಾರೆ. ಇವರಿಗೆ ದೇವೇಗೌಡರ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ? ದೇವೇಗೌಡರ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ? ದೇವೇಗೌಡರ ಶಕ್ತಿ ಮಾಜಿ ಸಚಿವ, ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ಗೆ ಏನು ಗೊತ್ತಿದೆ? ತಾಕತ್ತಿದ್ದರೆ ಇಂಡಿಪೆಂಡೆಂಟ್ ಆಗಿ ಬರಲಿ. ಕಾರ್ಯಕ್ರಮವೊಂದರಲ್ಲಿ ದೇವೇಗೌಡರು ಅರವತ್ತು ವರ್ಷದ ರಾಜಕೀಯ ಇತಿಹಾಸದಲ್ಲಿ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಕಂಡು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ ಹೊರತು ಕುಟುಂಬ ರಾಜಕಾರಣಕಲ್ಲ. ದೇವೇಗೌಡರ ಜಾಯಮಾನದಲ್ಲೇ ಮತದಾರರಿಗೆ ಬಿಟ್ಟರೆ ವಿರೋಧ ಪಕ್ಷದವರಿಗೆ ಹೆದರಿಲ್ಲ. ಜೆಡಿಎಸ್ ಪಕ್ಷದಲ್ಲಿ ಸಾಮೂಹಿಕ ನಾಯಕತ್ವವಿದೆ. ಆದರೆ ಟಿವಿ ಮಾಧ್ಯಮದವರು ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ರೇವಣ್ಣ ತಮ್ಮ ಭಾಷಣಗಳಲ್ಲಿ ನುಡಿದಿದ್ದಾರೆ.
ಮಂಡ್ಯದಲ್ಲಿ ಮಗನ ಸ್ಪರ್ಧೆ; ಎಚ್ ಡಿಕೆಯಿಂದ ಡಿವಿಎಸ್, ಬಿಎಸ್ ವೈ ಉದಾಹರಣೆ
ರಾಜ್ಯದ ಬಿಜೆಪಿಯವರಿಗೆ ನಮ್ಮದೇ ಯೋಚನೆ
"ರಾಜ್ಯದಲ್ಲಿ ವಿರೋಧ ಪಕ್ಷದವರಿಗೆ ನಾವು ಬಡವರ ಪರವಾದ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಹಿಸಲಾಗುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಯಕರು ಬಿಜೆಪಿಯ ಎ ಟೀಮ್ ಬಿ ಟೀಂ ಅಂದ ಕಾರಣ ಬಿಜೆಪಿಯವರು 104 ಸೀಟು ಗೆಲ್ಲಲು ಸಾಧ್ಯವಾಯಿತೇ ಹೊರತು ಇಲ್ಲವಾಗಿದ್ದರೆ 60 ಸೀಟು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ನಾನು ಕಳೆದ ಬಾರಿ ಮಂತ್ರಿಯಾದ ಸಂದರ್ಭ ನನ್ನ ಬಗ್ಗೆ ತನಿಖೆ ಮಾಡಿ ಎಂದು ಬರೆದು ಕೊಟ್ಟಿದ್ದೆ. ತಾಕತ್ತಿದ್ದರೆ ಈಗಿನ ಯಾರಾದರೂ ಒಬ್ಬರು ಬರೆದು ಕೊಡಲಿ ನೋಡೋಣ.ರಾಜ್ಯದಲ್ಲಿ 1 ಲಕ್ಷದ 19 ಸಾವಿರ ರೈತರ ಕುಟುಂಬಕ್ಕೆ ಈಗಾಗಲೇ ಸಾಲ ಮನ್ನಾ ಯೋಜನೆಯಲ್ಲಿ ರೈತರ ಖಾತೆಗೆ ಹಣ ಹೋಗಿದೆ. ಮಾರ್ಚ್ 31ರೊಳಗೆ ಉಳಿದ ರೈತರ ಖಾತೆಗೆ ಹಣ ಬರುತ್ತದೆ. ರೈತರು ಯಾವುದೇ ರೀತಿಯ ಭಯ ಪಡಬೇಕಾಗಿಲ್ಲ. 500 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ರಾಜ್ಯದ ಬಿಜೆಪಿಯವರಿಗೆ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣನವರ ಜಪ ಮಾಡದಿದ್ದರೆ ಊಟ ಸೇರಲ್ಲ, ನಿದ್ರೆ ಬರಲ್ಲ" ಇದು ರೇವಣ್ಣ ಬಿಜೆಪಿ ವಿರುದ್ಧ ಎಸೆದಿರುವ ಒಂದಷ್ಟು ವಾಗ್ಭಾಣಗಳು.