ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ
ಹಾಸನ, ನವೆಂಬರ್ 24; "ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಂದ ಪರಿಹಾರ ಪೋರ್ಟಲ್ನಲ್ಲಿ ಅರ್ಜಿ ಪಡೆದು ರೈತರಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ" ಎಂದು ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್.ಅಶೋಕ ಹೇಳಿದರು.
ಬುಧವಾರ ಸಚಿವರು ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಭೇಟಿ ನೀಡಿ ಮಳೆಹಾನಿ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, "ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ನೆಲಕಚ್ಚಿದೆ. ಆದ್ದರಿಂದ ಸಮೀಕ್ಷೆ ನಡೆಸುತ್ತಿದ್ದು, ಹಾಳಾಗಿರುವ ಬೆಳೆಯ ಪ್ರಮಾಣವನ್ನು ತಿಳಿದು ಶೀಘ್ರ ಕ್ರಮ ಕೈಗೊಳ್ಳುವ ಸಲುವಾಗಿ ಹಾಸನ ಜಿಲ್ಲೆಯ ಹಲವೆಡೆ ತಾವೇ ಪರೀಕ್ಷೆ ನಡೆಸುತ್ತಿರುವುದಾಗಿ" ತಿಳಿಸಿದರು.
ದಿಲ್ಲಿ ರೈತ ಹೋರಾಟ ಮುಂದುವರಿಯಲಿದೆ; ಏಕೆ?
"ಕಳೆದ ಎರಡು ತಿಂಗಳಿಂದ ರಾಜ್ಯದ ಹಲವೆಡೆ ತೀವ್ರ ಮಳೆಗೆ ಬೆಳೆಗಳು ಹಾನಿಯಾಗಿರುವ ಕುರಿತು ಕಂದಾಯ, ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸುತ್ತಿದ್ದು, ನಷ್ಟದ ಅಂದಾಜು ವರದಿ ಪಡೆಯಲಾಗುತ್ತಿದೆ" ಎಂದರು.
ಕೊಪ್ಪಳ; ಮಳೆಗೆ ಬೆಳೆ ಹಾನಿ, ವರದಿ ನೀಡಲು ಡಿಸಿ ಸೂಚನೆ
"ರೈತರಿಗೆ ಅಧಿಕ ಪ್ರಮಾಣದಲ್ಲಿ ನಷ್ಟವಾಗಿದ್ದು, ಹೆಚ್ಚಿನ ಪ್ರಮಾಣದ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಅಧಿಕಾರಿಗಳು ತಕ್ಷಣವೇ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.
ಹಾಸನ; ಮಳೆಗೆ ನೆಲಕಚ್ಚಿದ ಬೆಳೆ, ಚಿಂತಾಕ್ರಾಂತರಾದ ರೈತರು
ಇದೇ ಸಂದರ್ಭದಲ್ಲಿ ಅರಕಲಗೂಡು ತಾಲ್ಲೂಕಿನ ಶಿರದನಹಳ್ಳಿ, ರಾಮನಾಥಪುರ ಬಳಿಯ ಕಾಟ್ಯಾಳುಬಾರೆ ಹೊಳೆನರಸೀಪುರ ತಾಲ್ಲೂಕಿನ ದೊಡ್ಡಬ್ಯಾಗತ್ತವಳ್ಳಿ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ವಿವಿಧ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ಪರಿಶೀಲಿಸಿದರು.
ವರದಿ ನೀಡುವಂತೆ ಸೂಚನೆ; ಹಾಸನ ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಹಾನಿಯಾಗಿರುವ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿದಿನ 10 ಸಾವಿರಕ್ಕೂ ಅಧಿಕ ರೈತ ನೋಂದಣಿ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ನಷ್ಟು ಬೆಳೆ ಹಾನಿಯಾಗಿದ್ದು, ಜಂಟಿ ಸರ್ವೆ ನಡೆಸಿ ಈ ತಿಂಗಳ 26ರೊಳಗೆ ಬೆಳೆ ಹಾನಿಯಾಗಿರುವ ವರದಿಯನ್ನು ನೀಡುವಂತೆ ಸೂಚನೆ ನೀಡಿದರು. ಮಳೆಯಿಂದ ಹಾನಿಗೊಳಗಾಗಿರುವ ಬೆಳೆ ನಷ್ಟ ಪರಿಹಾರ ನೀಡಲು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಬೇಕು, ನಿಖರವಾದ ಮಾಹಿತಿಯೊಂದಿಗೆ ಫೋಟೋ ಮತ್ತು ವೀಡಿಯೋಗಳನ್ನು ಪರಿಹಾರ ಪೋರ್ಟಲ್ಗೆ ಅಪ್ಲೋಡ್ ಮಾಡುವಂತೆ ಹೇಳಿದರು.
ಬೆಳೆ ಹಾನಿ ಹಾಗೂ ಮನೆ ಹಾನಿಗೆ ನಷ್ಟವನ್ನು ತಿಂಗಳ ಅಂತ್ಯದೊಳಗೆ ಪರಿಹಾರ ನೀಡಲು ಡೇಟಾ ನಮೂದು ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪರಿಹಾರಧನವನ್ನು ರಾಜೀವ್ ಗಾಂಧಿ ಪೋರ್ಟಲ್ನಲ್ಲಿ ನೋಂದಣಿ ಮಾಡಿ ನಂತರ ಎಸ್ಡಿಆರ್ಎಫ್ ನಿಧಿಯಿಂದ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳು ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಆಗಿರುವ ನಷ್ಟವನ್ನು ಪರಿಶೀಲಿಸಿ ನಂತರ ವರದಿ ನೀಡುವಂತೆ ತಿಳಿಸಿದರು. 360ಕ್ಕೂ ಅಧಿಕ ಮನೆಗಳು ಕಳೆದ ಎರಡು ವಾರಗಳಿಂದ ಹಾನಿಗೊಳಗಾಗಿದ್ದು, ಗ್ರಾಮವಾರು ಹಾನಿಗೊಳಗಾದ ಮನೆಗಳ ಸಮಗ್ರ ವಿವರಗಳನ್ನೊಳಗೊಂಡಂತಹ ವರದಿಗಳನ್ನು ನೀಡುವಂತೆ ಸೂಚಿಸಿದರು.
ಮಾಹಿತಿ ಪಡೆದ ಮೋದಿ; ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕರೆ ಮಾಡಿ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು, ತಮ್ಮ ಸರ್ಕಾರ ತೆಗೆದುಕೊಂಡಿರುವ ರಕ್ಷಣಾ ಮತ್ತು ಪರಿಹಾರ ಕ್ರಮಗಳ ಬಗ್ಗೆ ವಿವರ ನೀಡಿದ್ದಾರೆ. ವಿಶೇಷವಾಗಿ ಜೀವಹಾನಿ ಮತ್ತು ಬೆಳೆಹಾನಿಯ ಬಗ್ಗೆ ಪ್ರಧಾನಮಂತ್ರಿಗಳು ಕಳಕಳಿ ವ್ಯಕ್ತಪಡಿಸಿ, ರಾಜ್ಯಕ್ಕೆ ಸಾಧ್ಯವಿರುವ ಸಹಕಾರ, ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಹೇಳಿದೆ.
Recommended Video