ಯಡಕುಮರಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 16 ಸಿಬ್ಬಂದಿ ರಕ್ಷಣೆ
ಹಾಸನ, ಆಗಸ್ಟ್ 17 : ಭಾರಿ ಮಳೆಯಿಂದಾಗಿ ಸಕಲೇಶಪುರದ ಯಡಕುಮರಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 16 ರೈಲ್ವೆ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕರು ಸಿಬ್ಬಂದಿ ರಕ್ಷಣೆ ಮಾಡುವಂತೆ ಕೋರಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪತ್ರ ಬರೆದಿದ್ದರು.
ಕೊಡಗಿನಲ್ಲಿ ಜಲಪ್ರಳಯ, ಕಣ್ಣೆದುರೇ ಕುಸಿಯುತ್ತಿವೆ ಮನೆ, ಗುಡ್ಡ, ಕಾಫಿತೋಟ
ಸಕಲೇಶಪುರದ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲ್ಲಾ ಸಿಬ್ಬಂದಿಗಳನ್ನು ರಕ್ಷಣೆ ಮಾಡಿ ಸಕಲೇಶಪುರಕ್ಕೆ ಕರೆತರಲಾಗಿದೆ. ಒಟ್ಟು 16 ಸಿಬ್ಬಂದಿಗಳು ರೈಲು ನಿಲ್ದಾಣದಲ್ಲಿ ಸಿಲುಕಿದ್ದರು.
ಮಳೆಯಿಂದಾಗಿ ಸಕಲೇಶಪುರದ ಯಡಕುಮರಿ ರೈಲು ನಿಲ್ದಾಣದ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಬದಲಾವಣೆ ಮಾಡಿದ್ದರಿಂದ, ಈ ರೈಲು ನಿಲ್ದಾಣಕ್ಕೆ ರೈಲು ಸೇವೆಯೂ ಸ್ಥಗಿತಗೊಂಡಿದೆ.
ಮೈಸೂರು ರೈಲ್ವೆ ವಿಭಾಗದ ವ್ಯವಸ್ಥಾಪಕ ಎ.ಕೆ.ಸಿನ್ಹಾ ಅವರು ಗುರುವಾರ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪತ್ರ ಬರೆದಿದ್ದರು. ಯಡಕುಮರಿ ರೈಲು ನಿಲ್ದಾಣದ ದುಸ್ಥಿತಿಯಲ್ಲಿದೆ. ಅಲ್ಲಿ 16 ಸಿಬ್ಬಂದಿಗಳು ಸಿಲುಕಿದ್ದಾರೆ. ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಯಡಕುಮರಿಯಲ್ಲಿ ಭೂ ಕುಸಿತದಿಂದಾಗಿ ಸಿಕ್ಕಿಹಾಕಿಕೊಂಡಿದ್ದ ರೈಲ್ವೆ ಸಿಬ್ಬಂದಿಯನ್ನು ರಕ್ಷಿಸಲಾಯಿತು. pic.twitter.com/usSkqYgLLC
— Karnataka Varthe (@KarnatakaVarthe) August 17, 2018
ಯಡಕುಮರಿ ರೈಲು ನಿಲ್ದಾಣದ 50 ಮತ್ತು 100 ಮೀಟರ್ ಅಂತರದಲ್ಲಿ ಎರಡೂ ಕಡೆ ಗುಡ್ಡ ಕುಸಿತ ಉಂಟಾಗಿದೆ. ಆದ್ದರಿಂದ, ಸಿಬ್ಬಂದಿ ಅಲ್ಲಿ ಸಿಲುಕಿದ್ದಾರೆ. ಅವರನ್ನು ಅಲ್ಲಿಂದ ವಾಪಸ್ ತರಲು ಹೆಲಿಕಾಪ್ಟರ್ ಬಳಕೆ ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ವಿವರಿಸಿದ್ದರು.