ಚನ್ನರಾಯಪಟ್ಟಣ ಠಾಣೆ ಪಿಎಸ್ ಐ ಕಿರಣ್ ಆತ್ಮಹತ್ಯೆ
ಹಾಸನ, ಜುಲೈ 31: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಠಾಣೆಯ ಪಿಎಸ್ ಐ ಕಿರಣ್ ಕುಮಾರ್ ಅವರು ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂದು ಮಧ್ಯ ರಾತ್ರಿಯಷ್ಟೇ ಒಂದು ಕೊಲೆ ಪ್ರಕರಣ ಭೇದಿಸಿದ್ದ ಅವರು, ಆರೋಪಿ ಬಂಧನ ಸಂಬಂಧ ಕಾರ್ಯಪ್ರವೃತ್ತರಾಗಿದ್ದರು. ಕೊಲೆ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿರುವುದಾಗಿ ತಿಳಿದುಬಂದಿದೆ.
ಧಾರವಾಡ; ಉದ್ಯೋಗ ನಷ್ಟ, ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಆತ್ಮಹತ್ಯೆಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ. ಆದರೆ ಎರಡು ದಿನಗಳ ಹಿಂದೆ ನಡೆದಿದ್ದ ಕೊಲೆಗಳಿಗೂ ಪಿಎಸ್ ಐ ಆತ್ಮಹತ್ಯೆಗೂ ಸಂಬಂಧವಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.ನಿನ್ನೆ, ಮೊನ್ನೆ ಎರಡು ದಿನ ಚನ್ನರಾಯಪಟ್ಟಣದಲ್ಲಿ ಇಬ್ಬರ ಹತ್ಯೆಯಾಗಿತ್ತು.
ಕಳೆದ ಎರಡು ದಿನಗಳಿಂದಲೂ ಕಿರಣ್ ಅವರು ಈ ಕೊಲೆಗಳ ಜಾಡು ಹಿಡಿದಿದ್ದರು. ಆದರೆ ಚನ್ನರಾಯಪಟ್ಟಣದ ಕೆಲವು ವಾಟ್ಸ್ ಆಪ್ ಗ್ರೂಪ್ ಗಳಲ್ಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎಂದು ಮೆಸೇಜ್ ಹರಿಬಿಡಲಾಗಿತ್ತು. ಈ ಕುರಿತು ಅಸಮಾಧಾನಗೊಂಡಿದ್ದರು ಕಿರಣ್ ಕುಮಾರ್, ತಮ್ಮನ್ನು ಸಸ್ಪೆಂಡ್ ಮಾಡಬಹುದು ಎಂದು ಸಹೋದ್ಯೋಗಿಯೊಟ್ಟಿಗೂ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.
ಇಂದು ಚನ್ನರಾಯಪಟ್ಟಣಕ್ಕೆ ಐಜಿ-ಎಸ್ಪಿ ಭೇಟಿ ನೀಡಲಿದ್ದರು. ಆದರೆ ಅದಕ್ಕೂ ಮುನ್ನ ಕಿರಣ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸ್ ಅಧಿಕಾರಿಯ ಆತ್ಮಹತ್ಯೆಯಿಂದ ಪೊಲೀಸ್ ವಲಯದಲ್ಲಿ ದಿಗ್ಭ್ರಮೆ ಉಂಟಾಗಿದೆ.