88ನೇ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ವಿಧ್ಯುಕ್ತ ಚಾಲನೆ
ಶ್ರವಣಬೆಳಗೊಳ, ಫೆಬ್ರವರಿ 07: ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ವೈಭವದ 88ನೇ ಮಹಾಮಸ್ತಕಾಭಿಷೇಕಕ್ಕೆ ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಚಾಲನೆ ನೀಡಿದರು.
ಚಾವುಂಡರಾಯ ವೇದಿಕೆಯಲ್ಲಿ ರಾಜ್ಯದ ಹಲವು ಗಣ್ಯರ ಸಮಕ್ಷಮದಲ್ಲಿ ರಾಷ್ಟ್ರಪತಿಗಳು ಗೊಮ್ಮಟೇಶ್ವರನ ಸಣ್ಣ ಮೂರ್ತಿಗೆ ಪೂಜೆ ಮಾಡಿ ಹಾಗೂ ದೀಪ ಬೆಳಗಿ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದರು. 12 ವರ್ಷಕ್ಕೊಮ್ಮೆ ನಡೆಯುವ ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನ ಮಹಾಮಸ್ತಕಭಿಷೇಕವು ಇಂದಿನಿಂದ ಫೆಬ್ರವರಿ 27 ರ ವರೆಗೆ ಸತತ 20 ದಿನಗಳ ಕಾಲ ನಡೆಯಲಿದೆ.
ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭೀಷೇಕ
ರಾಷ್ಟ್ರಪತಿ ರಾಮನಾಥ ಕೋವಿಂದ್ ಜೊತೆ ಅವರ ಮಡದಿ ಸವಿತಾ ಕೋವಿಂದ್ ಅವರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ. ರಾಷ್ಟ್ರಪತಿಗಳ ಜೊತೆಗೆ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಸ್ತುವಾರಿ ಸಚಿವ ಎ.ಮಂಜು, ಮಾಜಿ ಪ್ರಧಾನಿ ದೇವೇಗೌಡ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇದ್ದರು.
ಮಹಾಮಸ್ತಕಾಭಿಷೇಕಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದ್ದು, ಭದ್ರತೆಗೆ 3000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಶ್ರವಣಬೆಳಗೊಳದ ಸುತ್ತಮುತ್ತ 5 ಕಿಲೊ ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಜಿಲ್ಲಾಡಳಿತದಿಂದ ಟ್ಯಾಕ್ಸಿ ವ್ಯವಸ್ಥೆ, ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತಾಧಿಗಳ ಸಹಾಯಕ್ಕೆಂದು ಹೆಲ್ಪ್ಲೈನ್ ಗಳನ್ನು ತೆರೆಯಲಾಗಿದೆ.
20 ದಿನಗಳ ಕಾಲ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಇಂದು ಸಂಜೆ ಹಾಸ್ಯ ಕಲಾವಿದ ಪ್ರೊ.ಕೃಷ್ಣೇಗೌಡ ತಂಡದವರಿಂದ ಹಾಸ್ಯೋತ್ಸವ, ಬಾಲಿವುಡ್ ಹಿನ್ನೆಲೆ ಗಾಯಕ ರೂಪೇಶ್ ಜೈನ್ ಹಾಗೂ ಗಾಯಕ ವಿಜಯ ಪ್ರಕಾಶ್ ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ.
ಫೆಬ್ರವರಿ 17ರಂದು ಗೊಮ್ಮಟೇಶ್ವರನ ಮೂರ್ತಿಗೆ ಮಹಾಮಜ್ಜನ ನಡೆಯಲಿದೆ.