ಮೈದುಂಬಿದ ಹೇಮಾವತಿಗೆ ಬಾಗಿನ ಅರ್ಪಿಸಿದ ಪ್ರಜ್ವಲ್ ರೇವಣ್ಣ
ಹಾಸನ, ಆಗಸ್ಟ್ 11 : ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯವು ತುಂಬಿ ಹರಿಯುತ್ತಿದ್ದು ಸಂಸದ ಪ್ರಜ್ವಲ್ ರೇವಣ್ಣ ಜಲಾಶಯಕ್ಕೆ ಬಾಗಿನ ಸಮರ್ಪಿಸಿದರು. ಜಲಾಶಯದಲ್ಲಿ 2918 ಅಡಿ ನೀರಿನ ಸಂಗ್ರಹವಿದೆ.
ಹೇಮಾವತಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಜಲಾಶಯಕ್ಕೆ 101967 ಕ್ಯೂಸೆಕ್ ನೀರಿನ ಒಳಹರಿವು ಇದೆ. 2922 ಅಡಿ ಎತ್ತರದ ಜಲಾಶಯದಲ್ಲಿ 2918 ಅಡಿ ನೀರು ಸಂಗ್ರಹವಾಗಿದೆ. ಮುಂಜಾಗ್ರತಾ ಕ್ರಮವಾಗಿ ನೀರನ್ನು ಬಿಡುಗಡೆ ಮಾಡಲಾಗಿದೆ.
ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಎಷ್ಟು ನೀರಿದೆ?
"ಜಲಾಶಯಕ್ಕೆ ಮತ್ತು ಜನರಿಗೆ ತೊಂದರೆಯಾಗದಂತೆ ಹೆಚ್ಚುವರಿ ನೀರನ್ನು ಹರಿಬಿಡುವುದು ಎಂದು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ತಿರ್ಮಾನ ಮಾಡಿದ್ದೇವೆ. ಹೆಚ್ಚುವರಿ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದೆ" ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಹಾರಂಗಿ ಒಡಲು ಭರ್ತಿ, ಹಾಲ್ನೊರೆಯಂತೆ ಧುಮ್ಮುಕ್ಕುತ್ತಿದೆ ನೀರು
ಪ್ರವಾಹದಿಂದ ಹೊಳೆನರಸಿಪುರ ತಾಲೂಕಿನಲ್ಲಿ 25 ಸಾವಿರ ಎಕರೆ, ಬೇಲೂರಿನಲ್ಲಿ 50 ಸಾವಿರ ಎಕರೆ ಭೂಮಿ ಹಾಳಾಗಿದೆ. ಜಿಲ್ಲೆಯಲ್ಲಿ 18 ಚಾನೆಲ್ಗಳು ಒಡೆದಿವೆ. ಹಳೆಕೋಟೆ ಹೋಬಳಿಯಲ್ಲಿ 98 ಮನೆಗಳು, ಚನ್ನರಾಯಪಟ್ಟಣದಲ್ಲಿ 28 ಮನೆಗಳು, ಹೊಳೆನರಸಿಪುರದಲ್ಲಿ 5 ಮತ್ತು ಗನ್ನಿಕಡದಲ್ಲಿ ಹಲವು ಮನೆಗಳು ಕುಸಿದಿವೆ.
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
"ಪ್ರತಿ ದಿನವು ಸಂತ್ರಸ್ಥರ ಸಂಖ್ಯೆ ಹೆಚ್ಚುತ್ತಿದ್ದು ಅದಕ್ಕೆ ಅನುಗುಣವಾಗಿ ಗಂಜಿಕೇಂದ್ರಗಳನ್ನು ತೆರೆಯಲಾಗುತ್ತಿದೆ. ಈಗಾಗಲೇ ಹೊಳೆನರಸಿಪುರದಲ್ಲಿ 1, ಸಕಲೇಶಪುರದಲ್ಲಿ 6, ಬೇಲೂರಿನಲ್ಲಿ 4 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಜಾನುವಾರುಗಳಿಗಾಗಿ ಗೋಶಾಲೆಗಳನ್ನು ಆರಂಭಿಸಲಾಗಿದೆ" ಎಂದು ಪ್ರಜ್ವಲ್ ರೇವಣ್ಣ ತಿಳಿಸಿದರು.
"ಜಿಲ್ಲೆಯ ಸಂತ್ರಸ್ಥರ ತಾತ್ಕಾಲಿಕ ಪರಿಹಾರಕ್ಕಾಗಿ 5 ಕೋಟಿ ಅನುದಾನ ಬಂದಿದ್ದು ಅದು ಸಾಕಾಗುವುದಿಲ್ಲ. ಹಾಗಾಗಿ ಇನ್ನೂ 10 ಕೋಟಿ ಹಣದ ಅಗತ್ಯವಿದೆ ಅದನ್ನು ಸರ್ಕಾರ ಕೂಡಲೇ ನೀಡಬೇಕೆಂದು" ಪ್ರಜ್ವಲ್ ರೇವಣ್ಣ ಮನವಿ ಮಾಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎಸ್.ಪ್ರಕಾಶ್ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಟೇಲ್ ಶಿವರಾಂ ಮುಂತಾದವರು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.