ಹುಟ್ಟುಹಬ್ಬ ಸಂಭ್ರಮದಲ್ಲಿ ಪ್ರಜ್ವಲ್ , ಚುನಾವಣೆ ಸ್ಪರ್ಧೆ ಬಗ್ಗೆ ಸುಳಿವು!
Recommended Video
ಹೊಳೆನರಸೀಪುರ, ಆಗಸ್ಟ್ 05: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಮೊಮ್ಮಗ, ಎಚ್ ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರು ತಮ್ಮ28ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು. ಈ ನಡುವೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದರು.
ಪ್ರಜ್ವಲ್ ರೇವಣ್ಣ ಅವರು ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದು ನೆನಪಿರಬಹುದು. ಆದರೆ, ಪ್ರಜ್ವಲ್ ಸ್ಪರ್ಧಿಸಿರಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ಸುದ್ದಿ ಬಂದಿದೆ
ಹಾಸನ ಬದಲಿಗೆ ಮಂಡ್ಯದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ?
ಟಿಕೆಟ್ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಜೆಡಿಎಸ್ನ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಖಾಸಗಿ ಮಾಧ್ಯಮವೊಂದರ ಜತೆ ಮಾತನಾಡುತ್ತಾ ಹೇಳಿದರು.
'ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ತೀರ್ಮಾನಕ್ಕೆ ನಾನು ಎಂದಿಗೂ ಬದ್ಧ. ಒಂದು ವೇಳೆ ಟಿಕೆಟ್ ನೀಡಿದರೆ ಹಾಸನ ಅಥವಾ ಮಂಡ್ಯದಿಂದ ಸ್ಪರ್ಧಿಸಲು ನಾನು ಸಿದ್ಧ. ಅಥವಾ ಎಚ್ಡಿಡಿ ಹಾಸನದಿಂದ ಲೋಕಸಭೆಗೆ ಸ್ಫರ್ಧಿಸಿದರೆ ನಾನೇ ಚುನಾವಣಾ ಸಾರಥ್ಯ ವಹಿಸುತ್ತೇನೆ' ಎಂದರು.
2019ರ ಲೋಕಸಭಾ ಚುನಾವಣೆ: ದೇವೇಗೌಡ್ರ ಕುಟುಂಬದ ಮಹತ್ವದ ನಿರ್ಧಾರ?
ನನಗೆ ಟಿಕೆಟ್ ಸಿಗದಿದ್ದರೂ ಬೇಸರವಿಲ್ಲ. ನಾನು ರಾಜಕೀಯದಲ್ಲಿ ಕಲಿಯುವುದು ಸಾಕಷ್ಟಿದೆ. ದೇವೇಗೌಡರ ಜತೆಗಿದ್ದು ಕಲಿಯುತ್ತಿದ್ದೇನೆ ಎಂದರು.
ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಇನ್ನೂ ಇದೆ
ಪ್ರಜ್ವಲ್ ಅವರು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮೊದಲಿಗೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಜ್ವಲ್ ಕೂಡಾ ಒಲವು ತೋರಿದ್ದರು. ಆದರೆ, ಹುಣಸೂರಿನಲ್ಲಿ ಸ್ಪರ್ಧೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎಂಬ ಸುದ್ದಿ ಬಂತು.
ಜತೆಗೆ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೂಡಾ ಕಾರ್ಯಕರ್ತರಿಂದ ಮನವಿ ಬಂದಿತ್ತು. ಆದರೆ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರಜ್ವಲ್ ಅವರು ಅಸೆಂಬ್ಲಿ ಬದಲಿಗೆ ಲೋಕಸಭೆಗೆ ಸ್ಪರ್ಧಿಸುವುದು ಸೂಕ್ತ ಎಂದು ನಿರ್ಧರಿಸಿಬಿಟ್ಟಿದ್ದರು.
ಮಂಡ್ಯದಿಂದ ಪ್ರಜ್ವಲ್ ರೇವಣ್ಣ
ಮೇಲುಕೊಟೆಯಿಂದ ಶಾಸಕರಾಗಿ ಸಿ.ಎಸ್. ಪುಟ್ಟರಾಜು ಅವರು ಆಯ್ಕೆಯಾಗಿದ್ದಾರೆ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಿ ಅಥವಾ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆ ಇರಲಿ ಪ್ರಜ್ವಲ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಂಡ್ಯದ ಜೆಡಿಎಸ್ ಮುಖಂಡರು ಬೇಡಿಕೆ ಇಟ್ಟಿದ್ದಾರೆ.
ಮೈತ್ರಿ ಸರ್ಕಾರದ ಲಾಭ ಪಡೆಯುವ ಯೋಚನೆ
ಸಂಸತ್ತಿನಲ್ಲಿ ಕೇವಲ ಒಂದು ಸದಸ್ಯರನ್ನು ಹೊಂದಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರದ ಲಾಭ ಪಡೆದು, ಹತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ, ಹಳೆ ಮೈಸೂರು ವಿಭಾಗದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದ್ದನ್ನು ಮುಂದಿಟ್ಟುಕೊಂಡು ಹೀಗೊಂದು ಬೇಡಿಕೆ ಮುಂದಿಡಲಾಗಿದೆ. ಮೈಸೂರು ಭಾಗದಿಂದ ಮಂಡ್ಯ ಅಥವಾ ಮೈಸೂರಿನಲ್ಲಿ ಪ್ರಜ್ವಲ್ ಸ್ಪರ್ಧಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಸೂಚಿಸುವ ಸಾಧ್ಯತೆ ಹೆಚ್ಚಿದೆ.
ಮೈತ್ರಿ ಲಾಭ ಎರಡು ಪಕ್ಷಕ್ಕೂ ಆಗಲಿದೆ
ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಅಸೆಂಬ್ಲಿ ಸ್ಥಾನಗಳ ಪೈಕಿ ಜೆಡಿಎಸ್ 3, ಬಿಜೆಪಿ 4 ಮತ್ತು ಕಾಂಗ್ರೆಸ್ 1ಸ್ಥಾನದಲ್ಲಿ ಗೆದ್ದಿದೆ. ಖುದ್ದು ಸಿದ್ದರಾಮಯಯ್ಯನವರೇ ಇಲ್ಲಿಂದ ಸೋತಿರುವುದು ಮತ್ತು ಈ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಗೆದ್ದಿರುವುದರಿಂದ, ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಿ ಎಂದು ಜೆಡಿಎಸ್ ನವರು ಕೇಳಿದರೆ, ಕಾಂಗ್ರೆಸ್ ಗೆ ಇಲ್ಲ ಎನ್ನಲು ಕಾರಣಗಳಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮೈತ್ರಿ ಲಾಭ ಎರಡು ಪಕ್ಷಕ್ಕೂ ಆಗಲಿದೆ.