ಮೋದಿಗೆ ಜೀವಕ್ಕೆ ಅಪಾಯ, ಕರ್ನಾಟಕಕ್ಕೆ ಹೊಸ ಸಿಎಂ: ಬ್ರಹ್ಮಾಂಡ ಭವಿಷ್ಯ
ಹಾಸನ, ಅಕ್ಟೋಬರ್ 18: ಹಾಸನಾಂಬಾ ದೇಗುಲ ದರ್ಶನಕ್ಕೆ ಆಗಮಿಸಿದ್ದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಎರಡು ವರ್ಷಗಳ ಹಿಂದೆ ನುಡಿದಿದ್ದ 'ಗಂಡಾಂತರ' ಭವಿಷ್ಯದ ಪುನರಾವರ್ತನೆಯಾಗಿದೆ.
"ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ಪ್ರಧಾನಿಯ ಈ ಗಂಡಾಂತರಕ್ಕೆ ವೃಶ್ಚಿಕ ರಾಶಿ ದೋಷವೇ ಕಾರಣ, ದೇವರ ಮೊರೆ ಹೋಗಿ ಪೂಜೆ, ಹೋಮ ಮಾಡಿ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು" ಎಂದಿದ್ದಾರೆ. ಹಾಸನಾಂಬೆಯ ದರ್ಶನ ಪಡೆದ ಬ್ರಹ್ಮಾಂಡ ಗುರೂಜಿ (ಜ್ಯೋತಿಷಿ ನರೇಂದ್ರ ಬಾಬು ಶರ್ಮ) ದೇಶದ ಪ್ರಧಾನಿ ಹಾಗೂ ರಾಜ್ಯಕ್ಕೆ ಸಂಬಂಧಪಟ್ಟಂತೆ ಮತ್ತೊಮ್ಮೆ ಭವಿಷ್ಯವೊಂದನ್ನು ನುಡಿದಿದ್ದಾರೆ.
ನರೇಂದ್ರ ಮೋದಿಗೂ ಸಂಖ್ಯೆ 8ಕ್ಕೂ ಎಂಥ ನಂಟು?
ಪ್ರಧಾನಿ ನರೇಂದ್ರ ಮೋದಿಗೆ ಗಂಡಾಂತರ ಕಾದಿದೆ. ಪ್ರಧಾನಿಯ ಈ ಗಂಡಾಂತರಕ್ಕೆ ವೃಶ್ಚಿಕ ರಾಶಿ ದೋಷವೇ ಕಾರಣ ಎಂದು 2017ರಲ್ಲಿ ಇದೇ ಹಾಸನಾಂಬ ದೇಗುಲದ ಎದುರು ನಿಂತು ಹೇಳಿದ್ದರು. ಈಗಲೂ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ
ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ
"ನವೆಂಬರ್ 4ರಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಗಂಡಾಂತರ ಇದೆ. ಅವರ ಜಾತಕದಲ್ಲಿ ಅಪಮೃತ್ಯು ಗಂಡಾಂತರ ಕಾದಿದೆ. ಇದರಿಂದ ಪಾರಾಗಲು ವಿಶೇಷ ಪೂಜೆ, ಹೋಮ ಮಾಡಬೇಕಾಗುತ್ತದೆ. ಗಂಡಾಂತರದಿಂದ ಪಾರಾದರೆ ಇನ್ನೂ ಎರಡೂ ಮುಕ್ಕಾಲು ವರ್ಷ ಪ್ರಧಾನಿಯಾಗಿ ಇರುತ್ತಾರೆ" ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು.
ರಾಜ್ಯ ರಾಜಕಾರಣದಲ್ಲಿ ಬದಲಾವಣೆ
ಇದಲ್ಲದೆ, ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬದಲಾವಣೆಯಾಗಲಿದೆ. ಹಿರಿಯ ರಾಜಕಾರಣಿಗಳು ಶಾಶ್ವತವಾಗಿ ಮೂಲೆಗುಂಪಾಗುವ ಕಾಲ ಬಂದಿದೆ, ಹಳಬರ ಪೈಕಿ ಯಾರೂ ಮುಖ್ಯಮಂತ್ರಿ ಆಗುವ ಯೋಗ ಹೊಂದಿಲ್ಲ. ಮುಂಬರುವ ಸರ್ಕಾರಕ್ಕೆ ಹೊಸಬರೇ ಮುಖ್ಯಮಂತ್ರಿಯಾಗುತ್ತಾರೆ. ಯಡಿಯೂರಪ್ಪನವರು ಪೂರ್ಣಾವಧಿ ಮುಖ್ಯಮಂತ್ರಿಯಾಗುವ ಯೋಗ ಹೊಂದಿಲ್ಲ. ಇನ್ಮುಂದೆ ಯಾವುದೇ ಸಮ್ಮಿಶ್ರ ಸರ್ಕಾರ ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಡಿ.ಕೆ.ಶಿವಕುಮಾರ್ ಭವಿಷ್ಯ
ಡಿಕೆ ಶಿವಕುಮಾರ್ ಅವರ ಜೈಲುವಾಸ ಮುಂದಿನ ತಿಂಗಳು ಅಂತ್ಯವಾಗಲಿದೆ. ಆದರೆ, ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮಸ್ಥಳಕ್ಕೆ ಹೋಗಲೇಬೇಕು. ಮುಂದಿನ 10 ವರ್ಷದಲ್ಲಿ ಡಿ.ಕೆ.ಶಿವಕುಮಾರ್ ಒಂದು ಬಾರಿ ಮುಖ್ಯಮಂತ್ರಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ .ಆದರೆ, ಮುಂದಿನ 10 ವರ್ಷಗಳಲ್ಲಿ ಐದು ವರ್ಷ ಸಿಎಂಗಳನ್ನು ಕರ್ನಾಟಕ ಕಾಣಲಿದೆ ಎಂದರು.
ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ
ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತವೆ. ಆಹಾರದ ಬೆಲೆ ಏರುತ್ತದೆ, ಜನರು ಎಚ್ಚರಿಕೆಯಿಂದ ಇರಬೇಕು, ಮತ್ತೊಮ್ಮೆ ಪ್ರವಾಹದ ಭೀತಿ ಕರ್ನಾಟಕವನ್ನು ಕಾಡಲಿದೆ ಎಂದು ಬ್ರಹ್ಮಾಂಡ ಗುರೂಜಿ ಹೇಳಿದರು.