ಹಾಸನ: ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡವ ಶವವಾಗಿ ಪತ್ತೆ; ಅಧಿಕಾರಿಗಳ ವಿರುದ್ಧ ಕೊಲೆ ಆರೋಪ
ಹಾಸನ, ಅಕ್ಟೋಬರ್ 21: ಮೀನು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೋರ್ವ ಮನೆಯಿಂದ ಹೋದವನ ಮತ್ತೆ ವಾಪಸ್ಸಾಗಿದ್ದು ಶವವಾಗಿ. ಈಗ ಮೀನು ಕೃಷಿಕನ ಸಾವು ಹಲವು ಅನುಮಾನ ಹುಟ್ಟುಹಾಕಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ.
ಹೌದು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಕೃಷ್ಣಾಪುರ ಗ್ರಾಮದ ರವಿ ಎಂಬಾತನ ಸಾವು ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸುತ್ತಮುತ್ತಲ ಕೆರೆಗಳನ್ನು ಗುತ್ತಿಗೆಗೆ ಪಡೆದು ಮೀನು ಸಾಕಣೆ ಮಾಡಿ ಜೀವನ ಸಾಗಿಸುತ್ತಿದ್ದ ರವಿ, ಎರಡು ದಿನಗಳ ಹಿಂದೆ ಮಂಡ್ಯ ಜಿಲ್ಲೆ ಬಸರಾಳು ಪೊಲೀಸ್ ಠಾಣೆ ವ್ಯಾಪ್ತಿಯ ಹೇಮಾವತಿ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕೊಲೆ ಎಂದು ಮನೆಯವರು ಆರೋಪ ಮಾಡುತ್ತಿದ್ದಾರೆ.
ಅಕ್ಟೋಬರ್ 7ರಂದು ಮನೆಯಿಂದ ಹೋಗಿದ್ದ ರವಿಯನ್ನು ಚನ್ನರಾಯಪಟ್ಟಣ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಶ್ರೀಗಂಧದ ಕಳ್ಳತನ ಆರೋಪದಲ್ಲಿ ರವಿಯನ್ನ ಬಂಧಿಸಿದ್ದರು. ಬಂಧಿಸಿದ ರವಿಯನ್ನು ಮಹಜರ್ಗೆ ಕರೆದೊಯ್ದಿದ್ದ ರವಿ ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡಿದ್ದನಂತೆ, ಮರುದಿನ ರವಿ ಮನಗೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಮನೆಯವರು ವಿಚಾರ ತಿಳಿಸಿ ವಾಪಸ್ಸಾಗಿದ್ದರು.
ಆದರೆ ಅಂದು ಕಾಣೆಯಾದ ರವಿ ಕಳೆದ ಎರಡು ದಿನ ಹಿಂದೆ ಮಂಡ್ಯ ಜಿಲ್ಲೆಯ ಹೇಮಾವತಿ ಕಾಲುವೆಯಲ್ಲಿ ಶವವಾಗಿ ಸಿಕ್ಕಿದ್ದಾನೆ. ಶವದ ಹಿಂಭಾಗಕ್ಕೆ ಕೈಗಳನ್ನು ಕಟ್ಟಿದ ಸ್ಥಿತಿಯಲ್ಲಿ ಸಿಕ್ಕಿರುವುದು ಕಳ್ಳತನ ಆರೋಪದಲ್ಲಿ ವಶಕ್ಕೆ ಪಡೆದು ಕೊಲೆ ಮಾಡಿ ಬಳಿಕ ಕಾಲುವೆಗೆ ಎಸೆಯಲಾಗಿದೆ ಎಂದು ಕುಟುಂಬಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಕೊಲೆ ಆರೋಪ ಮಾಡುತ್ತಿದ್ದಾರೆ.
ಕಳ್ಳತನ ಮಾಡಿರದ ವ್ಯಕ್ತಿಯ ಮೇಲೆ ಕಳ್ಳತನ ಆರೋಪ ಹೊರಿಸಿದ್ದಾರೆ. ರವಿ ಅವರೇ ಕಾಲುವೆಗೆ ಬಿದ್ದಿರುವುದಲ್ಲ, ಕೊಲೆ ಮಾಡಿ ಕಾಲುವೆಗೆ ಎಸೆಯಲಾಗಿದೆ ಎನ್ನುವುದು ಮನೆಯವರು ಆರೋಪವಾಗಿದೆ.
ಕಳೆದ ಹದಿನೈದು ವರ್ಷಗಳಿಂದಲೂ ಮೀನು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ರವಿ ಎಂದು ಕಳ್ಳತನಕ್ಕೇ ಇಳಿದಿರಲಿಲ್ಲ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈಗ ಕಳ್ಳತನ ಆರೋಪ ಹೊರಿಸುತ್ತಿದ್ದಾರೆ. ಹಾಗಿದ್ದರೆ ಅವರನ್ನು ಬಂಧಿಸಿದ ಬಳಿಕ ಯಾಕೆ ನಮಗೆ ವಿಚಾರ ತಿಳಿಸಲಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಜೊತೆಗೆ ಆತ ತಪ್ಪಿಸಿಕೊಂಡ ಎಂದು ಹೇಳಿ ಹೋದ ಅಧಿಕಾರಿಗಳು ಮತ್ತೆ ಅವರು ಕಾಣೆಯಾದ ಬಗ್ಗೆ ದೂರನ್ನೂ ದಾಖಲಿಸಿಲ್ಲ. ಮೃತದೇಹ ಸಿಕ್ಕ ಬಳಿಕ ಚನ್ನರಾಯಪಟ್ಟಣ ನಗರ ಠಾಣೆಗೆ ತಮ್ಮ ವಶದಲ್ಲಿದ್ದ ಆರೋಪಿ ಕಾಣೆಯಾದ ಬಗ್ಗೆ ದೂರು ನೀಡಿದ್ದಾರೆ.
"ಇದೆಲ್ಲವನ್ನು ನೋಡಿದರೆ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆಯೇ ಅನುಮಾನ ಬರುತ್ತದೆ, ಕಳ್ಳತನದ ಆರೋಪದಲ್ಲಿ ಬಂಧಿಸಿದ ವ್ಯಕ್ತಿಯನ್ನು ಹಿಂಭಾಗಕ್ಕೆ ಕೈಗಳನ್ನು ಕಟ್ಟಿ ವಿಚಾರಣೆ ಮಾಡುವುದು ಎಷ್ಟು ಸರಿ, ಅವರನ್ನು ಇವರೇ ಹೇಳುವಂತೆ ಮಹಜರ್ಗೆ ಕರೆದೊಯ್ಯುವಾಗ ಕೈಗಳನ್ನು ಕಟ್ಟಿರುವುದು ನ್ಯಾಯವೇ, ಇದೆಲ್ಲವನ್ನೂ ನೋಡಿದರೆ ಬೇರೆ ಏನೋ ಆಗಿದೆ," ಎಂದು ರವಿ ಕುಟುಂಬದ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
"ರವಿ ಅಲ್ಲಿಗೆ ಯಾಕೆ ಹೋದರು? ಅಲ್ಲಿ ಕಳ್ಳತನ ಆಗಿತ್ತಾ, ಅದರಲ್ಲಿ ಅವರು ಭಾಗಿಯಾಗಿದ್ದಾರಾ ಅನ್ನುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಆದರೆ ಕೈಗಳನ್ನು ಕಟ್ಟಿದ ರೀತಿಯಲ್ಲಿ ಶವ ನೀರಲ್ಲಿ ಸಿಕ್ಕಿರುವುದನ್ನು ನೋಡಿದರೆ ಇದು ಕೊಲೆ ಅನ್ನುವ ಅನುಮಾನ ನಮಗಿದೆ. ಈ ಬಗ್ಗೆ ತನಿಖೆಯನ್ನು ಸಿಒಡಿಗೆ ವಹಿಸಬೇಕೆಂದು ಕುಟುಂಬಸ್ಥರು ಆಗ್ರಹ ಮಾಡಿದರು. ಸದ್ಯ ಪ್ರಕರಣ ಸಿಐಡಿ ಅಂಗಳದಲ್ಲಿ ಸೂಕ್ತ ತನಿಖೆ ಮಾಡಿ ನಮಗೆ ನ್ಯಾಯ ಒದಗಿಸಿ ಕೊಡಲಿ," ಅನ್ನುವುದು ಸಂಬಂಧಿಕರ ಆಗ್ರಹವಾಗಿದೆ.
Recommended Video
ಒಟ್ಟಿನಲ್ಲಿ ಶ್ರಿಗಂಧದ ಕಳ್ಳತನ ಆರೋಪ ಹೊತ್ತ ರವಿ ನಿಜವಾಗಿಯೂ ಕಳ್ಳತನ ಮಾಡಿದ್ದಾನಾ, ಇಲ್ಲವಾ ಅನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಯಿಂದಲೇ ಬೆಳಕಿಗೆ ಬರಬೇಕಿತ್ತು. ಆದರೆ ಈ ನಡುವೆ ಆತನ ಶವ ಕೈಗಳನ್ನು ಕಟ್ಟಿದ ರೀತಿಯಲ್ಲಿ ನೀರಲ್ಲಿ ಪತ್ತೆಯಾಗಿರುವುದು ಸಾವಿನ ಬಗ್ಗೆ ಅನುಮಾನ ಹುಟ್ಟುಹಾಕುವಂತೆ ಮಾಡಿದೆ.
ಅಧಿಕಾರಿಗಳೇ ಬಂಧಿಸಿದ ವೇಳೆ ಕೈಗಳನ್ನು ಕಟ್ಟಿ ಮಹಜರ್ಗೆ ಕರೆದೊಯ್ಯಲಾಗಿತ್ತಾ? ಆ ವೇಳೆ ತಪ್ಪಿಸಿಕೊಂಡಾತ ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾನೆಯೇ? ಅಥವಾ ಮನೆಯವರು ಆರೋಪ ಮಾಡುವಂತೆ ಕೊಲೆ ಮಾಡಿದ ಬಳಿಕ ಆತನ ಕೈಗಳನ್ನು ಕಟ್ಟಿ ಕಾಲುವೆಗೆ ಎಸೆಯಲಾಯಿತೇ? ಈ ಎಲ್ಲದರ ಬಗ್ಗೆ ಸಿಒಡಿ ತನಿಖೆಯಿಂದಲೇ ಸತ್ಯ ಬಯಲಾಗಬೇಕಿದೆ.