ಯೂರೋಪ್ನ ಕಲಾ ಪ್ರದರ್ಶದಲ್ಲಿ ಹಾಸನ ಕಲಾವಿದನ ಚಿತ್ರ
ಹಾಸನ, ಅಕ್ಟೋಬರ್ 16: ಹಾಸನ ಕಲಾವಿದ ನಾಗೇಶ್ ಅವರ ಕುಂಚದಲ್ಲಿ ಅರಳಿರುವ ಚಿತ್ರಕಲೆ ಯೂರೋಪ್ ರಾಷ್ಟ್ರದಲ್ಲಿ ಆಯೋಜಿಸಿರುವ ಅಂತರಾಷ್ಟ್ರಿಯಮಟ್ಟದ ಚಿತ್ರಕಲಾ ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಮೂಲಕ ಕಲಾಸ್ತಕರನ್ನು ತನ್ನತ್ತ ಸೆಳೆಯುತ್ತಿರುವುದು ಕರ್ನಾಟಕಕ್ಕೊಂದು ಹೆಮ್ಮೆಯ ವಿಷಯವಾಗಿದೆ.
ಯೂರೋಪ್ನ ಹಂಗೇರಿಯ ಬುದಾಫೇಸ್ಟ್ ನಗರದಲ್ಲಿರುವ ಗ್ಯಾಲರಿಯಲ್ಲಿ ದುನಾಬೆ ಗಂಗೇ ಶೀರ್ಷಿಕೆಯಡಿಯಲ್ಲಿ ಅಕ್ಟೋಬರ್ ಅಂತ್ಯದವರೆಗೆ ನಡೆಯುವ ಚಿತ್ರ ಪ್ರದರ್ಶನದಲ್ಲಿ ಹಲವಾರು ದೇಶದ ಕಲಾವಿದರ ಕೃತಿಗಳು ಪ್ರದರ್ಶನಕ್ಕೆ ಆಯ್ಕೆಗೊಂಡಿವೆ.
ಅದರಲ್ಲಿ ಭಾರತ ದೇಶದಿಂದ ಹಾಸನ ಜಿಲ್ಲೆಯ ಕಲಾವಿದ ನಾಗೇಶ್ ಅವರ ಕುಂಚದಲ್ಲಿ ಮೂಡಿರುವ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಎರಡು ಕಲಾಕೃತಿಗಳು ಈಗ ಅಂತರಾಷ್ಟ್ರೀಯ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಪ್ರದರ್ಶನದಲ್ಲಿ ಜನ ಮೆಚ್ಚುಗೆ ಪಡೆದಿವೆ.
ಹೊಯ್ಸಳ ಕಾಲದ ಶಿಲಾಬಾಲಿಕೆ ಮತ್ತು ಡ್ಯಾನ್ಸಿಂಗ್ ಗಣೇಶ್
ಹೊಯ್ಸಳ ಕಾಲದ ಶಿಲಾಬಾಲಿಕೆಯ ಚಿತ್ರ ಹಾಗೂ ಡ್ಯಾನ್ಸಿಂಗ್ ಗಣೇಶ್ ಎಂಬ ಕಲಾಕೃತಿಗಳು ಕಲಾಸಕ್ತರನ್ನು ತನ್ನತ್ತ ಸೆಳೆದಿವೆ. ಭಾರತದ ಪ್ರತಿನಿಧಿಯಾಗಿ ನಿರ್ವಾಣ ಆಟ್ಸ್ ಫೌಂಡೇಷನ್ ಸಂಸ್ಥಾಪಕರು ಹಾಗೂ ಅಂತರಾಷ್ಟ್ರೀಯ ಕಲಾವಿದರಾದ ರಮೇಶ್ ತೆರೆದಾಳ್ ಕಲಾಕೃತಿಗಳನ್ನು ಯೂರೋಪ್ ಗೆ ಕೊಂಡೊಯ್ದಿದ್ದಾರೆ.
ವಿದೇಶಿಯರನ್ನು ಸೆಳೆದ ನಾಗೇಶ್ ಚಿತ್ರ ಕಲೆ
ಕ್ಯುರೇಟ್ಗಳಾದ ರಾಝಲೀಯ ಗಾಂಗ್ಜೀ (Rozalia gamczy ) ಮತ್ತು ಇಷ್ಟವನ್ವರ್ಗ(Istvanvarga ) ಇವರ ನೇತೃತ್ವದಲ್ಲಿ ಕಲಾ ಪ್ರದರ್ಶನ ನಡೆಯುತ್ತಿದೆ. ವಿಭಿನ್ನ ವಿಶೇಷ ಕಲಾಕೃತಿ ಪ್ರದರ್ಶನಗೊಳ್ಳುತ್ತಿವೆ.
ರಮೇಶ್ ತೆರೆದಾಳ್ ನೀಡಿರುವ ಮಾಹಿತಿ ಪ್ರಕಾರ ಕಲಾ ಪ್ರದರ್ಶನದಲ್ಲಿ ಸಾಕಷ್ಟು ಚಿತ್ರಕಲಾಕೃತಿಗಳಿದ್ದು, ಭಾರತೀಯ ಪೈಕಿ ಎನ್.ನಾಗೇಶ್ ಅವರ ಕಲಾಕೃತಿ ನೋಡುಗರ ಮನಸೆಳೆಯುತ್ತಿವೆ. ವಿದೇಶಗರು ಈ ಕಲಾಕೃತಿಗಳನ್ನು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಸುಮಾರು ತಿಂಗಳುಗಳ ಕಾಲ ನಡೆಯುವ ಈ ಕಲಾವಸ್ತು ಪ್ರದರ್ಶನವನ್ನು, ನಿತ್ಯ ಸಾವಿರಾರು ಮಂದಿ ಚಿತ್ರ ವೀಕ್ಷಣೆ ಮಾಡುತ್ತಿದ್ದಾರಂತೆ.
ಹಲವು ವರ್ಣಗಳಲ್ಲಿ ಚಿತ್ರ ಬಿಡಿಸುವ ನಾಗೇಶ್
ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನಾಗರ ನವಿಲೆ ಗ್ರಾಮದವರಾದ ಎನ್.ನಾಗೇಶ್ A.M.G.D.M.V.A ವಿದ್ಯಾಭ್ಯಾಸ ಮಾಡಿ ಹಾಸನದ ನಿರ್ಮಲಾ ಫೈನ್ ಆರ್ಟ್ ಕಾಲೇಜಿನಲ್ಲಿ ಸುಮಾರು 30 ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗಾಗಲೇ ಸಾಕಷ್ಟು ವಿಭಿನ್ನ, ಅರ್ಥಪೂರ್ಣ ಕಲೆಗಳನ್ನು ತಮ್ಮ ಕೈಯಿಂದ ಮೂಡಿಸಿದ್ದು, ಜಿಲ್ಲೆ, ರಾಜ್ಯ, ಹೊರರಾಜ್ಯ ಮತ್ತು ಹೊರ ದೇಶಗಳಲ್ಲಿ ನಡೆದಿರುವ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಚಿತ್ರ ಕಲೆಗಳು ಪ್ರದರ್ಶನಗೊಂಡು ಜನಮೆಚ್ಚುಗೆ ಪಾತ್ರವಾಗಿವೆ. ಇವರ ಚಿತ್ರ ಸೃಜಶೀಲತೆಯಿಂದ ಕೂಡಿರುತ್ತದೆ. ಜಲವರ್ಣ, ತೈಲವರ್ಣ, ಆಕ್ರಲಿಕ್ವರ್ಣಗಳಲ್ಲಿ ಇವರ ಚಿತ್ರ ಕಲೆ ರಚಿತವಾಗಿ ಗಮನಸೆಳೆಯುತ್ತವೆ.
ರಾಜ್ಯಮಟ್ಟದ ಪ್ರಶಸ್ತಿಗೂ ಭಾಜನ
ಮಂಡ್ಯದಲ್ಲಿ ಈ ಹಿಂದೆ ನಡೆದ ರಾಜ್ಯಮಟ್ಟದ ಚಿತ್ರಕಲಾ ಪ್ರದರ್ಶನದಲ್ಲಿ ಇವರ ಫೋಕ್ಡ್ಯಾನ್ಸ್ ಕಲಾಕೃತಿಗೆ ಮೊದಲ ಬಹುಮಾನ ಲಭಿಸಿದೆ. ಮೂಡಬಿದರೆಯಲ್ಲಿ ನಡೆದ ಬೃಹತ್ ಕ್ಯಾನ್ವಸ್ ಮೇಲೆ ನೂರಾರು ಕಲಾವಿದರೂ ಸೇರಿ ಕಲಾಕೃತಿ ರಚಿಸುವ ಗುಂಪು ಕಲಾ ಪ್ರದರ್ಶನಗಳಲ್ಲೂ ಭಾಗಿಯಾಗಿ ಗಮನ ಸೆಳೆದಿದ್ದಾರೆ.
ಉತ್ತಮ ಕಲಾವಿದರಾಗಿರುವ ಇವರಿಗೆ ಕಲೆಯಲ್ಲೇ ಏನಾದರೊಂದು ಸಾಧಿಸಬೇಕೆಂಬ ತುಡಿತ ಹೊಸತನ್ನು ಸಾಧಿಸಲು ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.