ಯಗಚಿ ಜಲಾಶಯ ಭರ್ತಿಯಾಗಲು ಒಂದು ಅಡಿ ನೀರು ಮಾತ್ರ ಬಾಕಿ
ಹಾಸನ, ಜೂನ್ 21: ಮಲೆನಾಡು ಪ್ರದೇಶವಾದ ಚಿಕ್ಕಮಗಳೂರಿನ ಮೂಡಿಗೆರೆ ಸೇರಿದಂತೆ ಹಾಸನ ಜಿಲ್ಲೆಯ ಹಲವೆಡೆ ಉತ್ತಮವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಬೇಲೂರು ತಾಲ್ಲೂಕಿನ ಯಗಚಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯ ಭರ್ತಿಯಾಗಲು ಕೇವಲ ಒಂದು ಅಡಿಯಷ್ಟೇ ಬಾಕಿಯಿದೆ.
ಕಾರ್ಯಪಾಲಕ ಅಭಿಯಂತರ ಎಸ್.ಡಿ. ತಿಮ್ಮೇಗೌಡ ಹಾಗೂ ಎಇ ಶಿವಕುಮಾರ್ ಜಲಾಶಯದ ಭರ್ತಿ ಕುರಿತಂತೆ ಮಾಹಿತಿ ನೀಡಿದ್ದು, "ಯಾವುದೇ ಕ್ಷಣದಲ್ಲಾದರೂ ಕ್ರಸ್ಟ್ ಗೇಟ್ ಮುಖಾಂತರ ನದಿಗೆ ನೀರು ಹೊರಬಿಡುವ ಸಾಧ್ಯತೆ ಇರುವುದರಿಂದ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ,'' ಸೂಚನೆ ನೀಡಿದ್ದಾರೆ.
ಮಳೆ ಅಬ್ಬರಕ್ಕೆ ತ್ರಿವೇಣಿ ಸಂಗಮ ಜಲಾವೃತ: ಭತ್ತದ ಕೃಷಿ ಚಟುವಟಿಕೆ ಶುರು
3.250ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹ
ಬೇಲೂರು ತಾಲೂಕಿನ ಮಲೆನಾಡು ಪ್ರದೇಶಗಳಾದ ಅರೇಹಳ್ಳಿ, ಬಿಕ್ಕೂಡು, ಗೆಂಡೇಹಳ್ಳಿ, ಬೇಲೂರು ಪಟ್ಟಣ, ಹಳೇಬೀಡು ಮತ್ತು ಮಾದಿಹಳ್ಳಿ ಭಾಗಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ನೀರು ಜಲಾಶಯಕ್ಕೆ ಹರಿದು ಬಂದಿದ್ದು. 964.603 ಮೀ.ಎತ್ತರ ಮತ್ತು 3.603 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿ 3.250ಕ್ಕೂ ಹೆಚ್ಚು ಟಿಎಂಸಿ ನೀರು ಸಂಗ್ರಹವಾಗಿದ್ದು, 3000ಕ್ಕೂ ಹೆಚ್ಚು ಕ್ಯುಸೆಕ್ ನೀರು ಹರಿದು ಬರುತ್ತಿದೆ. ಒಳ ಹರಿವಿನ ಪ್ರಮಾಣ ಹೆಚ್ಚಾದರೆ ಜಲಾಶಯದಿಂದ ನೀರನ್ನು ಬಿಡುವುದು ಅನಿವಾರ್ಯವಾಗಲಿದೆ ಎಂದು ಹೇಳಲಾಗಿದೆ.
ನದಿ ಪಾತ್ರದ ಜನರಿಗೆ ಎಚ್ಚರಿಕೆ
ಹಾಗಾಗಿ ಯಗಚಿ ಜಲಾಶಯದ ತಳಭಾಗದ ಮತ್ತು ನದಿ ಪಾತ್ರದ ಪ್ರದೇಶದಲ್ಲಿ ಬರುವ ಎಲ್ಲ ಹಳ್ಳಿಗಳ ಸಾರ್ವಜನಿಕರು ಮತ್ತು ರೈತ ಬಾಂಧವರು ಜನ ಜಾನುವಾರು ಹಾಗೂ ಆಸ್ತಿ ಪಾಸ್ತಿ ರಕ್ಷಣೆಯ ದೃಷ್ಠಿಯಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ತಿಳಿಸಲಾಗಿದೆ. ಈ ಬಾರಿ ಜೂನ್ನಲ್ಲಿ ಉತ್ತಮ ಮಳೆಯಾಗಿದ್ದು, ಯಗಚಿ ನದಿ ತುಂಬಿ ಹರಿದಿದೆ. ಇದು ಹೇಮಾವತಿಯ ಉಪ ನದಿಯಾಗಿರುವುದರಿಂದ ಜಲಾಶಯದಿಂದ ನೀರು ಹರಿಸಿದರೂ ಹೇಮಾವತಿ ಜಲಾಶಯವನ್ನು ತಲುಪಲಿದ್ದು, ಹೇಮಾವತಿ ಜಲಾಶಯ ಭರ್ತಿಯಾಗಲು ಸಹಕಾರಿಯಾಗಲಿದೆ.
ಯಗಚಿ ನದಿಯ ಮೂಲ
ಇನ್ನು ಯಗಚಿ ನದಿ ಬಗ್ಗೆ ಹೇಳುವುದಾದರೆ ಚಿಕ್ಕಮಗಳೂರಿನ ಬಾಬಾ ಬುಡನ್ಗಿರಿ ಬೆಟ್ಟಗಳಲ್ಲಿ ಹುಟ್ಟಿ ಹರಿಯುವ ಈ ನದಿಗೆ ವಾಟೆಹೊಳೆ ಮತ್ತು ಬೆರೆಂಜಿಹಳ್ಳ ನದಿಗಳು ಸೇರುತ್ತವೆ. ಹೀಗಾಗಿ ಇದರ ನೀರಿನಮಟ್ಟ ಹೆಚ್ಚಾಗುತ್ತದೆ. ಈ ಬಾರಿ ಯಗಚಿ ಜಲಾಶಯ ಈ ಬಹುಬೇಗ ಭರ್ತಿಯಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಪ್ರವಾಹ ಪರಿಸ್ಥಿತಿ ಏರ್ಪಡುವ ಸಾಧ್ಯತೆ
ಮೃಗಶಿರ ಮಳೆ ಉತ್ತಮವಾಗಿ ಸುರಿದಿದ್ದರಿಂದ ನದಿ, ತೊರೆಗಳು ಉಕ್ಕಿ ಹರಿದಿದ್ದವು. ಮುಂಗಾರು ಆರಂಭದಲ್ಲಿಯೇ ಅಬ್ಬರಿಸಿದ್ದು, ಮುಂದಿನ ದಿನಗಳಲ್ಲಿ ಮಳೆಯ ಅಬ್ಬರ ಮುಂದುವರೆದರೆ ಮಲೆನಾಡು ಭಾಗದ ಜನರಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಮಳೆ ಹೆಚ್ಚಾದರೆ ಕರಿಮೆಣಸು ಮತ್ತು ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದ್ದು, ಕೊಳೆ ರೋಗ ಬಂದು ಮಿಡಿಯಲ್ಲಿಯೇ ಫಸಲು ಉದುರಲಿದೆ. ಹೀಗಾಗಿ ಮಳೆ ಬಿಡುವು ನೀಡುತ್ತಾ ಸುರಿದರೆ ಸಾಕಪ್ಪಾ ಎಂದು ರೈತರು ವರುಣನಿಗೆ ಮೊರೆಯಿಡುತ್ತಿದ್ದಾರೆ. ಇನ್ನೆರಡು ತಿಂಗಳು ಮಲೆನಾಡಿನಲ್ಲಿ ವರುಣ ಅಬ್ಬರಿಸಲಿರುವುದರಿಂದ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಜನ ಸದಾ ಎಚ್ಚರಿಕೆಯಿಂದ ಇರುವುದು ಒಳಿತು.
Recommended Video