ಹಾಸನ: ಕೊಟ್ಟ ಸಾಲ ಕೇಳಿದಕ್ಕೆ ಕೊಂದೆ ಬಿಟ್ಟ ಯುವಕ; ಸಾಲ ಕೊಟ್ಟಿದಕ್ಕೆ ಹೆಣವಾದ ವೃದ್ಧ!
ಹಾಸನ, ಅಕ್ಟೋಬರ್ 22: ಕೊಟ್ಟ ಸಾಲ ವಾಪಸ್ಸು ಕೇಳಿದಕ್ಕೆ ವೃದ್ಧನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪಾಪಿ ಯುವಕನನ್ನು ಬಂಧಿಸುವಲ್ಲಿ ಹಾಸನ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಅಕ್ಟೋಬರ್ 12ರಂದು ಸಾಲದ ಹಣ ವಾಪಸ್ಸು ಕೇಳಿದಕ್ಕೆ ಹಾಸನ ತಾಲೂಕಿನ ಸಮುದ್ರವಳ್ಳಿ ಗ್ರಾಮದ 60 ವರ್ಷದ ದಾಸೇಗೌಡ ಎಂಬುವರನ್ನು ಆರೋಪಿ ಯುವಕ ಕಿರಣ್ ಗೌಡ ಕೊಲೆ ಮಾಡಿ ಪರಾರಿಯಾಗಿದ್ದ. ದಾಸೇಗೌಡನ ಜಮೀನಿನ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನು ಹಾಸನ ಪೊಲೀಸರು ಸದ್ಯ ಭೇದಿಸಿ ಕೊಲೆಗಾರನ ಕೈಗೆ ಕೋಳ ತೊಡಿಸಿದ್ದಾರೆ.
ವೃದ್ಧ ದಾಸೇಗೌಡನ ಕೊಲೆಗೆ ಸಂಬಂಧಿಸಿದಂತೆ ಕೊಲೆ ಆರೋಪಿ 26 ವರ್ಷದ ಕಿರಣ್ ಗೌಡ ಎಂಬ ಯುವಕನನ್ನು ಹಾಸನ ಗ್ರಾಮಾಂತರ ಪೊಲೀಸ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಬಗ್ಗೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದು, ಕೊಲೆ ಆರೋಪಿ ಕಿರಣ್ಗೆ ಕೊಲೆಯಾದ ದಾಸೇಗೌಡ 5 ಲಕ್ಷ ಸಾಲ ನೀಡಿದ್ದರು. ಈ ಸಾಲದ ಹಣವನ್ನು ದಾಸೇಗೌಡ ಹಿಂದಿರುಗಿಸುವಂತೆ ಒತ್ತಡ ಹೇರಿದ್ದಕ್ಕೆ ಕಿರಣ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ.
ಆರೋಪಿ ಕಿರಣ್ಗೆ ವೃದ್ಧ ದಾಸೇಗೌಡ ಕೆಲ ವರ್ಷದ ಹಿಂದೆ 5 ಲಕ್ಷ ಸಾಲ ನೀಡಿದ್ದರಂತೆ. ಹೀಗಾಗಿ ತಾನು ನೀಡಿದ್ದ ಹಣವನ್ನು ವಾಪಾಸ್ ಕೊಡು ಅಂತ ದಾಸೇಗೌಡ ಕಿರಣ್ನ್ನು ಪೀಡಿಸಿದ್ದಾನೆ. ಆದರೆ ಕ್ರಿಕೆಟ್ ಬೆಟ್ಟಿಂಗ್, ಜೂಜು ಹೀಗೆ ಹಲವು ದುಶ್ಚಟ ರೂಢಿಸಿಕೊಂಡಿದ್ದ ಕಿರಣ್ ದಾಸೆಗೌಡನಿಗೆ ಸಾಲ ಮರುಪಾವತಿ ಮಾಡಲು ಆಗಿಲ್ಲ.
ಇತ್ತ ದಾಸೇಗೌಡನ ಕಾಟವನ್ನೂ ತಡೆದುಕೊಳ್ಳಲು ಆಗಿಲ್ಲ. ಹೀಗಾಗಿ ದಾಸೆಗೌಡನನ್ನು ಮುಗಿಸಲು ಕಿರಣ್ ತೀರ್ಮಾನಿಸಿದ್ದಾನೆ. ದಾಸೇಗೌಡನ ಚಲವಲನ ಗಮನಿಸಿದ್ದ ಕಿರಣ್, ಅಕ್ಟೋಬರ್ 12ರಂದು ದಾಸೇಗೌಡ ತಮ್ಮ ಜಮೀನು ಬಳಿ ಇದ್ದ ಕೊಟ್ಟಿಗೆ ಬಳಿ ಹೋಗಿ ಕರು ಹಾಕುವ ಹಂತದಲ್ಲಿದ್ದ ಹಸುವನ್ನು ನೋಡಿಕೊಂಡು ಬರಲು ಹೋದಾಗ ಹಿಂದಿನಿಂದ ಬಂದ ಕಿರಣ್ ಚಾಕುವಿನಿಂದ ದಾಸೆಗೌಡನನ್ನು ಇರಿದು ಕೊಂದಿದ್ದಾನೆ ಅನ್ನುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಕೊಟ್ಟಿಗೆಯಲ್ಲಿನ ಹಸುಗಳನ್ನು ನೋಡಿಕೊಂಡು ಬರುವುದಾಗಿ ಮನೆಯವರಿಗೆ ತಿಳಿಸಿ ಮನೆಯಿಂದ ಹೋದ ದಾಸೇಗೌಡ ಮನೆಗೆ ಹಿಂದುರುಗಿ ಬಾರದೆ ಹೋದಾಗ, ದಾಸೇಗೌಡನ ಪತ್ನಿ ಜಮೀನು ಬಳಿ ಇದ್ದ ಕೊಟ್ಟಿಗೆ ಹತ್ತಿರ ಹೋಗಿ ನೋಡಿದಾಗ ದಾಸೇಗೌಡ ಕೊಲೆಯಾಗಿರುವುದು ಬಯಲಾಗಿದೆ. ಆದರೆ ಕೊಲೆ ಮಾಡಿದ್ದು ಯಾರು ಅನ್ನುವುದು ಹಾಗೆ ಗುಮಾನಿಯಲ್ಲೇ ಇತ್ತು.
ಆದರೆ ಹಾಸನ ಗ್ರಾಮಾಂತರ ಪೊಲೀಸರು ಈ ಪ್ರಕರಣ ಭೇದಿಸಿದ್ದು, ದಾಸೇಗೌಡನ ಮನೆಯ ಆಸುಪಾಸಿನಲ್ಲೇ ಇರುವ ಮತ್ತು ಸಂಬಂಧಿಕನೇ ಆಗಬೇಕಾದ ಕಿರಣ್ನನ್ನು ಬಂಧಿಸಿ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ. ಸದ್ಯ ಸಾಲ ನೀಡಿದ್ದಕ್ಕೆ ಹಿಂದಿರುಗಿಸುವಂತೆ ಅತಿಯಾಗಿ ಪೀಡಿಸಿದಕ್ಕೆ ದಾಸೇಗೌಡ ತನ್ನ ಪ್ರಾಣ ಕಳೆದುಕೊಳ್ಳಬೇಕಾಗಿದ್ದು ದುರಾದೃಷ್ಟವೇ ಸರಿ.
Recommended Video
ಇನ್ನು ಸಾಲ ನೀಡುವಾಗ ವ್ಯಕ್ತಿಯ ಹಿನ್ನಲೆ ಏನು ಅನ್ನುವುದನ್ನು ನೋಡದೆ ನೀಡಿದರೆ ಎಂಥ ಪರಿಸ್ಥಿತಿ ಎದುರಾಗಬಹುದು ಅನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.