ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ: ಕುಮಾರಸ್ವಾಮಿ ಹೇಳಿದ್ದೇನು?
ಹಾಸನ, ಆಗಸ್ಟ್ 03: ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಆಗಲಿ ಪ್ರಜ್ವಲ್ ರೇವಣ್ಣ ಇಬ್ಬರೂ ಸ್ಪರ್ಧೆಮಾಡುವುದಿಲ್ಲ, ಇದೆಲ್ಲಾ ಗಾಳಿ ಸುದ್ದಿ ಅಷ್ಟೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಕುಟುಂಬವನ್ನು ಪದೇ-ಪದೇ ಸುದ್ದಿಗೆ ಎಳೆಯಬೇಡಿ ಎಂದು ಖಾರವಾಗಿಯೇ ಮಾಧ್ಯಮಗಳಿಗೆ ಮನವಿ ಮಾಡಿದ ಕುಮಾರಸ್ವಾಮಿ, ಹುಣಸೂರು, ಕೆ.ಆರ್.ಪೇಟೆ ಕ್ಷೇತ್ರಕ್ಕೆ ಬೇರೆ ಅಭ್ಯರ್ಥಿಗಳಿದ್ದಾರೆ, ಕುಟುಂಬದಿಂದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂದರು.
ಜಾತಿ ವ್ಯವಸ್ಥೆ ಚುನಾವಣೆಯನ್ನು ನಿಯಂತ್ರಣ ಮಾಡುತ್ತಿದೆ. ನಿಖಿಲ್ ಕುಮಾರಸ್ವಾಮಿ ಬೆಳವಣಿಗೆಯನ್ನು ಕುಂಠಿತ ಮಾಡುವ ಕಾರ್ಯ ನಡೆಯುತ್ತಿದೆ. ಇಂತಹಾ ಕೆಟ್ಟ ವ್ಯವಸ್ಥೆಯಿಂದ ನಾನೇ ಹಿಂದೆ ಸರಿಯಬೇಕು ಎಂದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ರಾಜಕೀಯ ನಿವೃತ್ತಿಯ ಮಾತನಾಡಿದ್ದರು.
ಯಾವ ಮುಖ್ಯಮಂತ್ರಿ ಅವರೂ ಮಾಡದ ಕಾರ್ಯವನ್ನು ಯಡಿಯೂರಪ್ಪ ಅವರು ಮಾಡಿದ್ದಾರೆ. ಯಾರೇ ಸಿಎಂ ಬಂದರೂ ವರ್ಗಾವಣೆ ಸಾಮಾನ್ಯ ಆದರೆ ಯಡಿಯೂರಪ್ಪ ಅವರು ಸ್ಥಳ ನಿಯೋಜನೆಯನ್ನೂ ಮಾಡದೇ ವರ್ಗಾವಣೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.