ಹಾಸನ; ಸುತ್ತಾಡಲು ಹೋಗಿದ್ದ ನವದಂಪತಿ ಶವವಾಗಿ ಪತ್ತೆ
ಹಾಸನ, ಮೇ 08: ಹೊರಗೆ ಸುತ್ತಾಡಲು ಹೊರಟ ನವದಂಪತಿ, ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆ ಸಕಲೇಶಪುರ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ನಡೆದಿದೆ.
ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಮೃತಪಟ್ಟ ದಂಪತಿ. ಎರಡು ತಿಂಗಳ ಹಿಂದಷ್ಟೆ ಇವರ ವಿವಾಹವಾಗಿತ್ತು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರ್ಥೇಶ್, ಲಾಕ್ ಡೌನ್ ಹಿನ್ನೆಲೆಯಲ್ಲಿ ತಮ್ಮ ಗ್ರಾಮವಾದ ಬೇಲೂರು ತಾಲೂಕಿನ ಮುರಹಳ್ಳಿಗೆ ಬಂದಿದ್ದರು. ಬುಧವಾರ ಹೆನ್ನಲಿ ಗ್ರಾಮದಲ್ಲಿನ ಪತ್ನಿ ಕೃತಿಕಾ ಮನೆಗೆ ಬಂದಿದ್ದರು.
ಅಲ್ಲಿಂದ ಗುರುವಾರ ಸಂಜೆ ದಂಪತಿ ತಿರುಗಾಡಿಕೊಂಡು ಬರುತ್ತೇವೆಂದು ಬೈಕ್ ನಲ್ಲಿ ಹೊರ ಹೋಗಿದ್ದಾರೆ. ಆದರೆ ತುಂಬಾ ಸಮಯವಾದರೂ ಇಬ್ಬರೂ ವಾಪಸ್ ಬರಲಿಲ್ಲ. ಮನೆಯವರು ಫೋನ್ ಮಾಡಿದಾಗ ಇಬ್ಬರ ಮೊಬೈಲೂ ಸ್ವಿಚ್ ಆಫ್ ಬಂದಿದೆ. ಆತಂಕಗೊಂಡ ಮನೆಯವರು ಅವರನ್ನು ಹುಡುಕಲು ಶುರುಮಾಡಿದ್ದಾರೆ. ಈ ಸಮಯದಲ್ಲಿ ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಪತ್ತೆಯಾಗಿದೆ. ಪರಿಶೀಲಿಸಿದಾಗ, ಮೀನುಗಾರರು ಹಾಕಿದ್ದ ಬಲೆಯಲ್ಲಿ ಕೃತಿಕಾ ಶವ ಸಿಕ್ಕಿಕೊಂಡಿದ್ದು ಬೆಳಕಿಗೆ ಬಂದಿದೆ.
ನಂತರ ಅರ್ಥೇಶ್ ಮೃತದೇಹ ಕೂಡ ಸಿಕ್ಕಿದೆ. ನದಿಯ ಬಳಿ ಸೆಲ್ಫೀ ತೆಗೆದುಕೊಳ್ಳಲು ಹೋದಾಗ ಕಾಲು ಜಾರಿ ಬಿದ್ದು ದಂಪತಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸಕಲೇಶಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.