ಆಗಸ್ಟ್ 11ರಿಂದ 13ರವರೆಗೆ ರಾಷ್ಟ್ರಮಟ್ಟದ ಜೈನ ಮಹಿಳಾ ಸಮಾವೇಶ
ಶ್ರವಣಬೆಳಗೊಳ (ಹಾಸನ), ಆಗಸ್ಟ್ 8: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ-2018ರ ಅಂಗವಾಗಿ ಆಗಸ್ಟ್ 11ರಿಂದ 13ರವರೆಗೆ ಶ್ರವಣಬೆಳಗೊಳದಲ್ಲಿ ಮೂರು ದಿನಗಳ ಕಾಲ ರಾಷ್ಟ್ರಮಟ್ಟದ ಜೈನ ಮಹಿಳಾ ಸಮಾವೇಶ ಆಯೋಜಿಸಲಾಗಿದೆ.
ಸಂಸ್ಕೃತಿ ರಕ್ಷಣೆ ನಮ್ಮ ಕರ್ತವ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಬಾಹುಬಲಿ ಮಹಾಸ್ತಕಾಭಿಷೇಕ ಮಹೋತ್ಸವ ರಾಷ್ಟ್ರ ಮಟ್ಟದ ದಿಗಂಬರ ಜೈನ ವ್ಯವಸ್ಥಾಪಕ ಸಮಿತಿಯು ಈ ಸಮ್ಮೇಳನ ಆಯೋಜಿಸಿದ್ದು, ಶ್ರವಣಬೆಳಗೊಳದ ಗೊಮ್ಮಟನಗರದಲ್ಲಿ ನಿರ್ಮಿಸಿರುವ ಪಟ್ಟಮಹಾದೇವಿ ಶಾಂತಲಾ ಸಭಾಮಂಟಪದಲ್ಲಿ ನಡೆಯಲಿದೆ.
ಸಮ್ಮೇಳನದ ಅಧ್ಯಕ್ಷರನ್ನಾಗಿ ಧರ್ಮಸ್ಥಳದ ಹೇಮಾವತಿ ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಆ.11ರಂದು ಬೆಳಗ್ಗೆ 10.15ಕ್ಕೆ ಆಚಾರ್ಯರು ಮತ್ತು ಮುನಿಶ್ರೀಗಳ ಸಾನ್ನಿಧ್ಯದಲ್ಲಿ ಪುದುಚೆರಿಯ ರಾಜ್ಯಪಾಲರಾದ ಡಾ. ಕಿರಣ್ ಬೇಡಿ ಅವರು ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಸಚಿವೆ ಉಮಾಶ್ರೀ ಅವರು ವಿದ್ಯಾರ್ಥಿನಿ ನಿಲಯದ ಉದ್ಘಾಟನೆ ನೆರವೇರಿಸುವರು.
ಹರಿಯಾಣ ಸಚಿವೆ ಕವಿತಾ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತಾರಾ ಎ.ಮಂಜು ಮತ್ತು ಭೋಪಾಲದ ಡಾ. ಸುಧಾ ಮಲೈಯಾ ಅವರು ಮಾಧವಿ-4 ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಸಮ್ಮೇಳನದ ಮೂರೂ ದಿನಗಳು ವಿವಿಧ ವಿಚಾರ ಗೋಷ್ಠಿಗಳು ನಡೆಯಲಿವೆ.
ಸಾಧಕ ಮಹಿಳೆಯರಿಗೆ ಆದರ್ಶ ಮಹಿಳೆ ಪ್ರಶಸ್ತಿ
ಸಮ್ಮೇಳನದ ಕೊನೆಯ ದಿನವಾದ ಆ.13ರಂದು ಬೆಳಗ್ಗೆ 11.30ಕ್ಕೆ ವಿವಿಧ ವರ್ಗಗಳ ಸಾಧಕ ಮಹಿಳೆಯರಿಗೆ ಆದರ್ಶ ಮಹಿಳೆ ಪ್ರಶಸ್ತಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜೈನ ಮಹಿಳೆಯರಿಗೆ ಆದರ್ಶ ಜೈನ ಮಹಿಳೆ ಪ್ರಶಸ್ತಿ ಹಾಗೂ ಜೈನ ಸಮಾಜದ ಅಭ್ಯುದಯಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ದೇಶದ ವಿವಿಧ ಜೈನ ಮಹಿಳಾ ಸಂಸ್ಥೆಗಳಿಗೆ ಗೌರವ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ, ಡಾ. ಕಮಲಾ ಹಂಪನಾ, ಸಾಲುಮರದ ತಿಮ್ಮಕ್ಕ ಸೇರಿದಂತೆ 12 ಮಹಿಳೆಯರಿಗೆ ಆದರ್ಶ ಮಹಿಳೆ ಪ್ರಶಸ್ತಿ, ಭಾರತೀಯ ಸೇನೆಯ ಮೇಜರ್ ನೀಲಂ ಘೋರವಾಡೆ, ಸಾಹಿತಿ ಸುನಿತಾ ಜೈನ್, ಡಾ. ಸರಯೂ ದೋಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಪ್ಪತ್ತೆಂಟು ಜೈನ ಮಹಿಳೆಯರಿಗೆ ಆದರ್ಶ ಜೈನ ಮಹಿಳೆ ಪ್ರಶಸ್ತಿ ಹಾಗೂ ಒಂಬತ್ತು ಜೈನ ಮಹಿಳಾ ಸಂಸ್ಥೆಗಳಿಗೆ ಗೌರವ ಪುರಸ್ಕಾರ ಪ್ರದಾನ ಮಾಡಲಾಗುವುದು.