"ಹುಲಿಯಾ, ಬಂಡೆ ಝೂನಲ್ಲಿರಷ್ಟೇ ಫಿಟ್"; ವ್ಯಂಗ್ಯವಾಡಿದ ನಳಿನ್
ಹಾಸನ, ಜುಲೈ 29: ''ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲು ಫಿಟ್. ಸಮಾಜದಲ್ಲಿರಲು ಅನ್ ಫಿಟ್" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ವ್ಯಂಗ್ಯ ಮಾಡಿದ್ದಾರೆ.
Recommended Video
ಇಂದು ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದ ಸಂದರ್ಭ ಮಾತನಾಡಿದ ಅವರು, ''ಆಡಳಿತದಲ್ಲಿ ಲೋಪವಿದ್ದರೆ ಜಗಳವಾಡಿ, ನಿಮಗೆ ಹಕ್ಕಿದೆ. ಆದರೆ ಇಲ್ಲಸಲ್ಲದ ಆರೋಪ ಮಾಡಿ ಚಿಲ್ಲರೆ ರಾಜಕಾರಣ ಮಾಡಬೇಡಿ" ಎಂದಿದ್ದಾರೆ.
ಕಾಂಗ್ರೆಸ್ಸಿನವರಿಗೆ ಜಾಮೀನು ಪಡೆಯುವ ಸ್ಥಿತಿ ಏಕೆ ಬಂತು ಸಿದ್ದರಾಮಯ್ಯ?
"ಹುಲಿಯಾ ಮತ್ತು ಬಂಡೆ ಝೂನಲ್ಲಿ ಇರಲಷ್ಟೇ ಯೋಗ್ಯರು. ಅವರಿಗೆ ಮಾನವ ಸಮಾಜದಲ್ಲಿ ಇರುವ ಅರ್ಹತೆಯೇ ಇಲ್ಲ'' ಎಂದು ಟೀಕಿಸಿದ್ದಾರೆ. ''ಕಾಂಗ್ರೆಸ್ನವರು ಈ ಕೊರೊನಾ ಸಂದರ್ಭವನ್ನು ಬಳಸಿಕೊಂಡು ಜನರನ್ನು ಮತ್ತಷ್ಟು ಆತಂಕಗೊಳಿಸುತ್ತಿದ್ದಾರೆ. ವೆಂಟಿಲೇಟರ್ ಇಲ್ಲ, ಆಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯ ಇಲ್ಲ ಎಂದು ಹೇಳುತ್ತಿದ್ದೀರಿ. ಅವ್ಯವಹಾರದ ಆರೋಪ ಮಾಡುತ್ತಿದ್ದೀರಿ. ನಿಮ್ಮ ಕಾಲದಲ್ಲಿ ಎಷ್ಟು ವೆಂಟಿಲೇಟರ್ ಬಂದವು, ಎಲ್ಲಿ ಹೋದವು? ನೀವು ಆಡಳಿತ ಮಾಡುವಾಗ ಡೆಂಗ್ಯೂ, ಹಾವು ಕಡಿತ, ಹುಚ್ಚು ನಾಯಿ ಕಡಿತಕ್ಕೆ ಔಷಧಿಯೇ ಬಂದಿರಲಿಲ್ಲ. ಮೊದಲು ಇಂದಿರಾ ಕ್ಯಾಂಟೀನ್ನಲ್ಲಿ ಆಗಿರುವ ಭ್ರಷ್ಟಾಚಾರದ ಲೆಕ್ಕ ಕೊಡಿ. ನೀವು ಆಡಳಿತ ನಡೆಸುತ್ತಿದ್ದಾಗ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿಲ್ಲವೇ'' ಎಂದು ಪ್ರಶ್ನಿಸಿದ್ದಾರೆ.
''ನೀವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹೇಳುತ್ತೀರಿ. ಆದರೆ ನಿಜವಾಗಿ ಪ್ರಜಾಪ್ರಭುತ್ವದ ಹತ್ಯೆಗೈದವರು ಇಂದಿರಾ ಗಾಂಧಿ. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೆ ತರುವ ಮೂಲಕ ದೇಶವನ್ನು ಪೂರ್ತಿಯಾಗಿ ಜೈಲಲ್ಲಿಟ್ಟವರು ನೀವೇ ಅಲ್ಲವೇ'' ಎಂದು ಕೇಳಿದರು.