ಮೈಸೂರಿನ ಮನೆಗಳ್ಳರು ಹಾಸನದಲ್ಲಿ ಸಿಕ್ಕಿ ಬಿದ್ದರು...
ಹಾಸನ, ಮಾರ್ಚ್ 7: ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಅಂತಹ ಮನೆಗಳಿಗೆ ಕನ್ನ ಹಾಕಿ ನಗದು, ಚಿನ್ನಾಭರಣ ದೋಚುತ್ತಿದ್ದ ಮೈಸೂರು ಮೂಲದ ಮೂವರು ಮನೆಗಳ್ಳರನ್ನು ಜಿಲ್ಲಾ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಾ ಮೈಸೂರು ಜಿಲ್ಲೆಯ ಸರಗೂರು ಗ್ರಾಮದ ನಿವಾಸಿ ಫಯಾಜ್ ಅಹಮದ್ ಹಾಗೂ ಮೈಸೂರಿನ ಸಯ್ಯದ್ ನಾಸಿರ್, ಕೇಶವ ಬಾಬು ಗಾಯಕ್ವಾಡ್ ಬಂಧಿತರಾಗಿದ್ದಾರೆ. ಇವರು ಮಹಾನ್ ಖದೀಮರಾಗಿದ್ದು, ಈಗಾಗಲೇ ಮಂಡ್ಯ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.
ವಿಡಿಯೋ- ಮೈಸೂರಲ್ಲಿ ಶೆಟರ್ ಮುರಿದು ಐ-ಫೋನ್ ದೋಚಿದ ಕಳ್ಳರು
ಸಕಲೇಶಪುರ ತಾಲೂಕು ಹಾನುಬಾಳು ಗ್ರಾಮದ ಹರಿಪ್ರಸಾದ್ ಅವರು ತಮ್ಮ ಸಂಬಂಧಿಕರ ಮದುವೆಗೆಂದು ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಬೆಳಗ್ಗಿನ ಸಮಯದಲ್ಲಿಯೇ ಮನೆಯ ಮೇಲ್ಚಾವಣಿಯ ಹೆಂಚುಗಳನ್ನು ತೆಗೆದು ಒಳ ನುಗ್ಗಿ ಬೀರುಗಳನ್ನು ಒಡೆದು 35 ಸಾವಿರ ರೂ ನಗದು, 40 ಗ್ರಾಂ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು. ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ಹರಿ ಪ್ರಸಾದ್ ಪೊಲೀಸರಿಗೆ ದೂರು ನೀಡಿದ್ದರು.
ಸಕಲೇಶಪುರ ತಾಲೂಕಿನಲ್ಲಿ ಕಳೆದ ಮೂರು ತಿಂಗಳಿನಿಂದ ಹೆಚ್ಚುತ್ತಿರುವ ಮನೆಗಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್ಪಿ ಶ್ರೀನಿವಾಸಗೌಡ ಅವರು ತನಿಖಾ ತಂಡ ರಚಿಸಿ ಕಾರ್ಯಾಚರಣೆಗೆ ಸೂಚಿಸಿದ್ದರು. ಈ ನಡುವೆ ಮಾ.2 ರಂದು ಸಕಲೇಶಪುರ ನಗರದ ಬಸ್ ಸ್ಟ್ಯಾಂಡ್ ಬಳಿ ಫಯಾಜ್ ಅಹ್ಮದ್ ಅನುಮಾನಾಸ್ಪದವಾಗಿ ನಿಂತಿದ್ದನ್ನು ಕಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನೆ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.
ಜಾಲಿ ಮಾಡಲು ಬ್ಯಾಂಕ್ ಖಾತೆಗೆ ಕನ್ನ ಹಾಕಿದ ತಾಂಜೇನಿಯ ವಿದ್ಯಾರ್ಥಿಗಳು
ಅಲ್ಲದೆ ಸಯ್ಯದ್ ನಾಸಿರ್, ಕೇಶವ ಬಾಬು ಗಾಯಕ್ವಾಡ್ ಎಂಬಿಬ್ಬರು ಭಾಗಿಯಾಗಿರುವುದು ಪತ್ತೆಯಾಗಿದ್ದು, ಕೂಡಲೇ ಅವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಸುಮಾರು 20 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ. ಅಲ್ಲದೆ ಆರೋಪಿಗಳಿಂದ ಸುಮಾರು 24 ಲಕ್ಷ ಬೆಲೆಬಾಳುವ 825 ಗ್ರಾಂ ಚಿನ್ನಾಭರಣ ಹಾಗೂ 7,80,000 ಬೆಲೆಬಾಳುವ 17 ಕೆಜಿ ಬೆಳ್ಳಿ, 30,000 ಬೆಲೆಯ ಲ್ಯಾಪ್ ಟಾಪ್, 12,000 ಬೆಲೆಯ ವಾಚ್ ಸೇರಿದಂತೆ ಒಟ್ಟು 32,97,000 ಬೆಲೆಯ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.