ಪರಿಷತ್ ಗೆಲುವಿಗೆ ತಾಯಿಯ ತ್ಯಾಗ ಕಾರಣ; ಡಾ. ಸೂರಜ್ ರೇವಣ್ಣ
ಹಾಸನ, ಡಿಸೆಂಬರ್ 14; ದೇವೇಗೌಡರ ಕುಟುಂಬದಿಂದ ಮತ್ತೊಂದು ಕುಡಿ ವಿಧಾನಸೌಧ ಪ್ರವೇಶಿಸಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಎಚ್. ಡಿ. ರೇವಣ್ಣ ಪುತ್ರ ಡಾ. ಸೂರಜ್ ರೇವಣ್ಣ ಭರ್ಜರಿ ಜಯ ದಾಖಲಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಗೆಲುವಿನ ನಂತರ ಮಾತಾನಾಡಿದ ಸೂರಜ್ ರೇವಣ್ಣ, "ನನ್ನ ಈ ಗೆಲುವಿಗೆ ಕಾರಣರಾದ ನನ್ನ ತಾಯಿಯ ತ್ಯಾಗಕ್ಕೆ ನಾನು ಯಾವ ರೀತಿ ಧನ್ಯವಾದ ಹೇಳಬೇಕು ತಿಳಿಯುತ್ತಿಲ್ಲ. ಈ ಫಲಿತಾಂಶ ಇಡೀ ರಾಜ್ಯಕ್ಕೆ ಸಂದೇಶವಾಗಿದೆ. ಜೆಡಿಎಸ್ ಮುಳುಗಿಹೋಯ್ತು, ಕುಟುಂಬ ರಾಜಕಾರಣ ಎನ್ನುತ್ತಿರುವವರಿಗೆ ಈಗ ಮತದಾರರು ಪಾಠ ಕಲಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ನಮ್ಮ ತಂದೆಯವರನ್ನು ಅಭಿವೃದ್ಧಿಯ ಹರಿಕಾರ ಎನ್ನುತ್ತಾರೆ. ಅವರ ಜೊತೆ ನಮ್ಮ ಎಲ್ಲ ಶಾಸಕರು ಕೈಜೋಡಿಸಿ ಒಳ್ಳೇ ಕೆಲಸ ಮಾಡುತ್ತಿದ್ದಾರೆ" ಎಂದು ಹೇಳಿದರು.
Breaking: ಹಾಸನದಲ್ಲಿ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಗೆಲುವು
"ಅಭಿವೃದ್ಧಿ ಆಗಬೇಕಂದರೆ ಜೆಡಿಎಸ್ನಿಂದಲೇ ಎಂದು ಅಭೂತಪೂರ್ವವಾಗಿ ಗೆಲ್ಲಿಸಿದ್ದಾರೆ. ಹಿಂದೆ ಸಂಸತ್ ಚುನಾವಣೆ ಇದ್ದಾಗ ನಾನು ಮತ್ತು ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಆಗುತ್ತಾರೆ ಎನ್ನುತ್ತಿದ್ದರು. ಅಂತಿಮವಾಗಿ ಪ್ರಜ್ವಲ್ ಅಭ್ಯರ್ಥಿ ಆದರು. ಇಲ್ಲಿಯೂ ಕೂಡ ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಎನ್ನುವುದು ಬಹುತೇಕರ ಅಭಿಪ್ರಾಯ ಆಗಿತ್ತು" ಎಂದರು.
ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ
"ನನ್ನ ಹೆಸರನ್ನು ಕೂಡ ಹೇಳುತ್ತಿದ್ದರು. ಆದರೆ ಇಂದು ನಮ್ಮ ತಾಯಿಯ ತ್ಯಾಗಕ್ಕೆ ನಾನು ಯಾವ ರೀತಿ ಧನ್ಯವಾದ ತಿಳಿಸಬೇಕು ಎಂದು ತಿಳಿಯುತ್ತಿಲ್ಲ. ಜನವರಿ 1 ನನ್ನ ಹುಟ್ಟಿದ ಹಬ್ಬ, ಅದರೆ ಇಂದು ರಾಜಕೀಯವಾಗಿ ನನಗೆ ಜನ್ಮ ನೀಡಿದ್ದಾರೆ. ನಾನು ಎಂಎಲ್ಸಿ ಆಗಲು ಬಹುಮುಖ್ಯ ಪಾತ್ರವಹಿಸಿದ ಭವಾನಿ ರೇವಣ್ಣ ಅವರಿಗೆ ಧನ್ಯವಾದ ಹೇಳುತ್ತೇನೆ" ಎಂದು ಸೂರಜ್ ರೇವಣ್ಣ ಹೇಳಿದರು.
ಪರಿಷತ್ ಚುನಾವಣೆ ಫಲಿತಾಂಶ ಪ್ರಕಟ; ಯಾರು, ಏನು ಹೇಳಿದರು?
ಹಾಸನ ಕ್ಷೇತ್ರದಲ್ಲಿ 1,433 ಮತಗಳ ಅಂತರದಿಂದ ಡಾ. ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ 731 ಹಾಗೂ ಬಿಜೆಪಿ ಅಭ್ಯರ್ಥಿ 354 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಇದೇ ಮೊದಲ ಬಾರಿಗೆ ಸಕ್ರಿಯ ರಾಜಕೀಯಕ್ಕೆ ಸೂರಜ್ ರೇವಣ್ಣ ಪ್ರವೇಶ ಮಾಡಿದ್ದಾರೆ.
ಎಚ್. ಡಿ. ರೇವಣ್ಣ ಹೇಳಿಕೆ
ಸೂರಜ್ ರೇವಣ್ಣ ಗೆಲುವಿನ ನಂತರ ಹಾಸನದಲ್ಲಿ ಮಾತನಾಡಿದ ಎಚ್. ಡಿ. ರೇವಣ್ಣ, "ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮಾಡಿದ ಅಭಿವೃದ್ಧಿ ಕೆಲಸ, ಸೇವೆ ಇಂದು ಸೂರಜ್ ಗೆಲುವಿಗೆ ಕಾರಣವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಜೆಡಿಎಸ್ ಅಧಿಕಾರಕ್ಕೆ ತರುವ ಗುರಿ ಇದೆ" ಎಂದರು.
ಪಕ್ಷಾತೀತವಾಗಿ ಗೆಲ್ಲಿಸಿದ್ದಾರೆ
"ಜಿಲ್ಲೆಯ ಆರು ಶಾಸಕರು, ಸಂಸದರು ಹಾಗೂ ದೇವೇಗೌಡರ ಆಶೀರ್ವಾದದ ಫಲವಾಗಿ ಸೂರಜ್ ಗೌಡ ಅವರಿಗೆ ಗೆಲುವಾಗಿದೆ. ಸ್ಥಳೀಯ ಸಂಸ್ಥೆಗಳ ಎಲ್ಲ ಪ್ರತಿನಿಧಿಗಳು ಸೂರಜ್ ಅವರನ್ನು ಪಕ್ಷಾತೀತವಾಗಿ ಗೆಲ್ಲಿಸಿದ್ದಾರೆ. ಈ ಗೆಲುವನ್ನು ಸಂಸದರು, ಶಾಸಕರು, ಕಾರ್ಯಕರ್ತರಿಗೆ ಅರ್ಪಿಸುತ್ತೇವೆ. ಶೃಂಗೇರಿ ಗುರುಗಳು, ಶಾರದಾ ದೇವಿ ಆಶೀರ್ವಾದ, ಸುತ್ತೂರು ಮಠದ ಆಶೀರ್ವಾದ ಈ ಕುಟುಂಬಕ್ಕೆ ಇದೆ" ಎಂದು ರೇವಣ್ಣ ಹೇಳಿದರು.
"ಸೂರಜ್ ಏನು ದಡ್ಡರಲ್ಲ, ಡಾಕ್ಟರ್ ಓದಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಧಾನ ಪರಿಷತ್ನಲ್ಲಿ ಅವರು ಚರ್ಚೆ ನಡೆಸಲಿದ್ದಾರೆ. 2023ರಲ್ಲಿ ಹಾಸನದಿಂದಲೇ ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಪಕ್ಷ ಅಧಿಕಾರಿಕ್ಕೆ ಬರಲಿದೆ" ಎಂದು ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ
"ಪ್ರಜ್ವಲ್, ಸೂರಜ್ಗೆ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ ಹಾಸನ. ಸಾಯುವವರೆಗೂ ಈ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ ನನಗಿದೆ. ರಾಜ್ಯಕ್ಕೆ ಮಾದರಿಯಾಗಿ ಈ ಚುನಾವಣೆ ಫಲಿತಾಂಶ ಬಂದಿದೆ. ರಾಜ್ಯದಲ್ಲೇ ಹೆಚ್ಚು ಲೀಡ್ ಪಡೆದಿರುವುದು ಸೂರಜ್ ರೇವಣ್ಣ. ಅವರ ಗೆಲುವಿಗೆ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಕಾರಣರಾಗಿದ್ದಾರೆ. ನಮ್ಮ ಕುಟುಂಬದವರು ಎಂದುಕೊಂಡು ಹೋರಾಟ ಮಾಡಿದ್ದಾರೆ" ಎಂದು ಮಗನ ಗೆಲುವಿನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಯಾವುದೇ ಚರ್ಚೆ ನಡೆದಿಲ್ಲ
"ಶಾಸಕ ಬಾಲಕೃಷ್ಣ 1500ಕ್ಕೂ ಹೆಚ್ಚು ಮತದಿಂದ ಗೆಲ್ಲುತ್ತಾರೆ ಎಂದು ಮೊದಲೇ ಹೇಳಿದ್ದರು. ದೇವರು ಅವರ ಬಾಯಿಂದ ನುಡಿಸಿದ್ದರು ಅಂತ ಕಾಣುತ್ತೆ. ಪ್ರತಿ ಶಾಸಕರಿಗೂ, ಸೂರಜ್ ರೇವಣ್ಣಗೆ ಮತಹಾಕಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಜ್ವಲ್, ಸೂರಜ್ ಅವರಿಗೂ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ ಹಾಸನವಾಗಿದೆ. ಸಾಯುವವರೆಗೂ ಈ ಜಿಲ್ಲೆಗಾಗಿ ಕೆಲಸ ಮಾಡುವ ಆಸೆ ನನಗಿದೆ. ನಾನು ಸಾಯುವವರೆಗೂ ಜಿಲ್ಲೆಯ ಜನರ ಜೊತೆ ಇರುತ್ತೇನೆ. ನಾನು ಹಾಸನದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಈಗ ಯಾವುದೇ ಚರ್ಚೆಯಿಲ್ಲ" ಎಂದು ಭವಾನಿ ರೇವಣ್ಣ ಸ್ಪಷ್ಟಪಡಿಸಿದರು.