ಹಾಸನದಲ್ಲಿ ಅಕ್ರಮ ಗೋ ಸಾಗಣೆ; ಪತ್ರಕರ್ತೆ ಮೇಲೆ ಹಲ್ಲೆ
ಹಾಸನ, ಡಿಸೆಂಬರ್ 02: ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಣೆ, ಗೋ ಹತ್ಯೆ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತೆಯೊಬ್ಬರ ಮೇಲೆ ಗುಂಪೊಂದು ದಾಳಿ ಮಾಡಿರುವ ಘಟನೆ ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ.
ಹಾಸನದ ಬಾಬು ಹಾಗೂ ರೆಹಮಾನ್ ಎಂಬುವರು ಜಿಲ್ಲೆಯ ನಾಲ್ಕು ಕಡೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದು, ಅಕ್ರಮ ಗೋ ಸಾಗಾಟದಲ್ಲಿ ತೊಡಗಿಕೊಂಡಿದ್ದರು. ಕಸಾಯಿ ಖಾನೆಯಲ್ಲಿ ಅಕ್ರಮವಾಗಿ 100ಕ್ಕೂ ಹೆಚ್ಚು ಗೋವುಗಳನ್ನು ಕೂಡಿಹಾಕಿದ್ದರು ಎಂದು ತಿಳಿದುಬಂದಿದೆ.
ಭೂ ಮಾಫಿಯಾ ವರದಿಗಾರಿಕೆ: ಹಾಡಹಗಲೇ ಲೈಟ್ ಕಂಬಕ್ಕೆ ಕಟ್ಟಿ ಪತ್ರಕರ್ತನ ಮೇಲೆ ಹಲ್ಲೆ
ಪ್ರಾಣಿಪ್ರಿಯರೊಂದಿಗೆ ಸೇರಿ ಪತ್ರಕರ್ತೆಯು ಗೋವುಗಳ ರಕ್ಷಣೆ ಮಾಡಲು ಕಸಾಯಿ ಖಾನೆಗೆ ತೆರಳಿದ್ದಾರೆ. ಈ ಸಮಯದಲ್ಲಿ ಗುಂಪೊಂದು ಪತ್ರಕರ್ತೆ ಸುತ್ತುವರೆದು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಆಕೆ ಮೇಲೆ ಕೈ ಮಾಡಿ, ಕೂಡಲೇ ಅಲ್ಲಿಂದ ತೆರಳಬೇಕೆಂದು ಅವಾಚ್ಯವಾಗಿ ನಿಂದಿಸಿರುವ ಆರೋಪ ಕೇಳಿಬಂದಿದೆ.
ಕೆಲವೇ ಗೋವುಗಳನ್ನು ರಕ್ಷಣೆ ಮಾಡಲು ಸಾಧ್ಯವಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಉಳಿದ ಗೋವುಗಳನ್ನು ಬೇರೆಡೆಗೆ ಸಾಗಿಸಿದ್ದಾರೆ ಎನ್ನಲಾಗಿದೆ. ಅರಸೀಕೆರೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಎಗ್ಗಿಲ್ಲದೇ ನಡೆಯುತ್ತಿದೆ. ಗೋವುಗಳ ಅರೆಬರೆ ಮೃತದೇಹ ಹಾಗೂ ಪ್ರಾಣಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ.