ಹಾಸನ ಪರಿಷತ್ ಚುನಾವಣೆ: ಸೂರಜ್ ರೇವಣ್ಣ ವಿರುದ್ದ ಎಚ್.ಡಿ.ರೇವಣ್ಣ!
ಹಾಸನ, ನ 24: ವಿಧಾನ ಪರಿಷತ್ತಿನ 25ಕ್ಷೇತ್ರಗಳ ಚುನಾವಣೆಗೆ ಆಖಾಡ ಸಿದ್ದವಾಗಿದ್ದು, ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ನವೆಂಬರ್ 26ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಡಿಸೆಂಬರ್ ಹತ್ತರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14ಕ್ಕೆ ಮತ ಎಣಿಕೆ ನಡೆಯಲಿದೆ.
ಈ ಬಾರಿಯ ಚುನಾವಣೆಯಲ್ಲೂ ಕುಟುಂಬ ರಾಜಕಾರಣ ಮುಂದುವರಿದಿದೆ, ಕಾಂಗ್ರೆಸ್ಸಿನಲ್ಲಿ ಅತಿಹೆಚ್ಚು ಒಂದೇ ಕುಟುಂಬದವರಿಗೆ ಟಿಕೆಟ್ ನೀಡಲಾಗಿದೆ. ಇನ್ನು, ಬೆಳಗಾವಿ ಜಿಲ್ಲೆಯಿಂದ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಸುವ ಮೂಲಕ, ಅಲ್ಲಿನ ಚುನಾವಣಾ ರಂಗು ಕುತೂಹಲಕ್ಕೆ ಕಾರಣವಾಗಿದೆ.
ಜೆಡಿಎಸ್ ಏಳು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಿದ್ದು, ಇದರಲ್ಲಿ ಆರು ಸ್ಥಾನವನ್ನು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದ ಮಾತನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಿದ್ದಾರೆ. ಜೊತೆಗೆ, ತುಮಕೂರು ಲೋಕಸಭಾ ಸೋಲಿನ ಪ್ರತೀಕಾರ ತೆಗೆದುಕೊಳ್ಳುವುದಾಗಿ ಶಪಥ ಮಾಡಿದ್ದಾರೆ.
ಹಾಸನ ಜಿಲ್ಲೆಯ ಒಂದು ಕ್ಷೇತ್ರಕ್ಕೆ ಎಲ್ಲಾ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರ ಜೊತೆಗೆ, ಪಕ್ಷೇತರ ಅಭ್ಯರ್ಥಿಯಾಗಿ ಎಚ್.ಡಿ.ರೇವಣ್ಣ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ. ಇದು ಮತದಾರರನ್ನು ಗೊಂದಲಕ್ಕೀಡು ಮಾಡಲಿಕ್ಕಾ ಎನ್ನುವ ಪ್ರಶ್ನೆ ಕಾಡುವುದು ಸಹಜ. ಯಾರು ಈ ಎಚ್.ಡಿ.ರೇವಣ್ಣ?
ಹಾಸನ ಜಿಲ್ಲೆಯಿಂದ ಜೆಡಿಎಸ್ ನಿಂದ ಸೂರಜ್ ರೇವಣ್ಣ ಸ್ಪರ್ಧೆ
ಹಾಸನ ಜಿಲ್ಲೆಯಿಂದ ಜೆಡಿಎಸ್ ನಿಂದ ಸೂರಜ್ ರೇವಣ್ಣ, ಬಿಜೆಪಿಯಿಂದ ಎಚ್.ಎಂ.ವಿಶ್ವನಾಥ್ ಮತ್ತು ಕಾಂಗ್ರೆಸ್ಸಿನಿಂದ ಎಂ.ಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ಹಾಗಾದರೆ, ನಾಮಪತ್ರ ಸಲ್ಲಿಸಿದ ಎಚ್.ಡಿ.ರೇವಣ್ಣ ಯಾರು? ಮಗನ ವಿರುದ್ದ ತಂದೆಯೇ ಕಣಕ್ಕಿಳಿದರೇ ಎಂದರೆ ಉತ್ತರ ಅದಲ್ಲ. ಎಚ್.ಡಿ.ರೇವಣ್ಣ ಅವರು ಮೂಲತಃ ಕೃಷಿಕ, ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ದ ಪ್ರತೀಬಾರಿ ಕಣಕ್ಕಿಳಿಯುವ ಖಯಾಲಿಯನ್ನು ಇವರು ಹೊಂದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ಸ್ಪರ್ಧೆ
ದೇವೇಗೌಡ್ರ ಕುಟುಂಬದ ವಿರುದ್ದ ಅಸೆಂಬ್ಲಿ/ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಳ್ಳುವ ಎಚ್.ಡಿ.ರೇವಣ್ಣನವರು ಜಿಲ್ಲೆಯ ಕೃಷಿ ಪ್ರಧಾನ ಕುಟುಂಬದವರು. ಯಾಕಾಗಿ ಗೌಡ್ರ ಕುಟುಂಬದ ವಿರುದ್ದ ಇವರು ಸ್ಪರ್ಧಿಸುತ್ತಿದ್ದಾರೆ? ಇವರಿಗೆ ಆ ಕುಟುಂಬದ ವಿರುದ್ದ ಏನಾದರೂ ಜಿದ್ದು ಇದೆಯಾ, ಆ ಕಾರಣಕ್ಕಾಗಿ ಇವರು ಸ್ಪರ್ಧಿಸುತ್ತಿದ್ದಾರಾ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವುದಿಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ದ ಸ್ಪರ್ಧಿಸಿದ್ದರು. ಇದಕ್ಕೂ ಮುನ್ನ, ಎಚ್.ಡಿ.ದೇವೇಗೌಡರ ವಿರುದ್ದ ಸ್ಪರ್ಧಿಸಿದ್ದರು.
438 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು
2018ರ ವಿಧಾನಸಭಾ ಚುನಾವಣೆಯಲ್ಲಿ ಹೊಳೇನರಸೀಪುರ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ಗೆದ್ದಿದ್ದರು. ಅಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಇನ್ನೊಬ್ಬ ರೇವಣ್ಣ 438 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. 2008ರ ಅಸೆಂಬ್ಲಿ ಚುನಾವಣೆಯಲ್ಲಿ ಕೆ.ಡಿ.ರೇವಣ್ಣ ಎನ್ನುವ ವ್ಯಕ್ತಿಯೂ ಸ್ಪರ್ಧಿಸಿದ್ದರು. ಕಳೆದ ಮಂಡ್ಯ ಲೋಕಸಭಾ ಚುನಾವಣೆಯ ವೇಳೆಯೂ ಸುಮಲತಾ ಹೆಸರಿನ ಹಲವರು ಕಣದಲ್ಲಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
2014ರ ಚುನಾವಣೆಯಲ್ಲಿ 6,798 ಮತಗಳನ್ನು ಇವರು ಪಡೆದಿದ್ದರು
ಇನ್ನು, ಸತತ ಮೂರು ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ರೇವಣ್ಣ ಸ್ಪರ್ಧಿಸಿದ್ದಾರೆ. 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ಇವರು ದೇವೇಗೌಡ್ರ ವಿರುದ್ದ ಸ್ಪರ್ಧಿಸಿದ್ದರು. 2009ರಲ್ಲಿ 14,447 ಮತ್ತು 2014ರ ಚುನಾವಣೆಯಲ್ಲಿ 6,798 ಮತಗಳನ್ನು ಇವರು ಪಡೆದಿದ್ದರು. ಪ್ರತೀಬಾರಿ ಸ್ಪರ್ಧಿಸಿದಾಗಲೂ ಠೇವಣಿ ಕಳೆದುಕೊಳ್ಳುವುದು ಇವರ ವಿಶೇಷತೆ ಎಂದರೆ ತಪ್ಪಾಗಲಾರದು.
"ಸಹಜವಾಗಿ ಜೆಡಿಎಸ್ ನಮ್ಮ ಪ್ರತಿಸ್ಪರ್ಧಿ. ಅಧಿಕಾರ ಒಂದೇ ಕಡೆ ಕೇಂದ್ರಿಕೃತವಾಗಬಾರದು. ಅದು ವಿಕೇಂದ್ರಿಕರಣವಾಗಬೇಕು. ಇದು ಮೇಲ್ಮನೆ ಚುನಾವಣೆ ಹಿರಿಯರ ಮನೆ ಚುನಾವಣೆ. ಹಿರಿಯರು ಅಂದರೆ ಅನುಭವ, ತಿಳುವಳಿಕೆ ಇರುವವರು. ಪಂಚಾಯತ್ ರಾಜ್ನಿಂದ ಆಯ್ಕೆ ಮಾಡುವ ಚುನಾವಣೆ"ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ. ವಿಶ್ವನಾಥ್ ಪ್ರತಿಸ್ಪರ್ಧಿ ಸೂರಜ್ ರೇವಣ್ಣ ಸ್ಪರ್ಧೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
Recommended Video