ನನ್ನ ಮಗನ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತೇನೆ: ಮಾಜಿ ಸಚಿವ ಎ.ಮಂಜು
ಹಾಸನ, ಡಿಸೆಂಬರ್ 1: ತಮ್ಮನ್ನು ಬಿಜೆಪಿಯ ಎಲ್ಲ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿದ್ದಕ್ಕಾಗಿ ಮಾಜಿ ಸಚಿವ ಎ.ಮಂಜು ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ಬೆಂಬಲಿಗರ ಸಭೆ ನಡೆಸಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದರು.
ಮಾಜಿ ಸಚಿವ ಎ.ಮಂಜು ಪುತ್ರ ಮಂಥರ್ಗೌಡಗೆ ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿದ ನಂತರ, ಎ. ಮಂಜುಗೆ ಬಿಜೆಪಿಯಲ್ಲಿ ನೀಡಲಾಗಿದ್ದ ಎಲ್ಲ ಜವಾಬ್ದಾರಿಯಿಂದ ಮುಕ್ತಿಗೊಳಿಸಲಾಗಿದೆ. ಹಾಗಾಗಿ ಬಿಜೆಪಿ ವಿರುದ್ಧ ಎ. ಮಂಜು ಅಸಮಾಧಾನ ಹೊರಹಾಕಿದರು.
ಬೆಂಬಲಿಗರ ಸಭೆಯಲ್ಲಿ ಭಾಷಣ ಮಾಡುತ್ತಾ ಭಾವುಕರಾದ ಎ.ಮಂಜು, "ನಾನು ಜೀವನದಲ್ಲಿ ಹಲವಾರು ರಾಜಕೀಯ ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ನನ್ನ ವೈಯುಕ್ತಿಕ ನಿರ್ಣಯವಾಗಿದ್ದರೆ ನಾನು ಯಾವಾಗಲೂ ಶಾಸಕನಾಗಿರುತ್ತಿದ್ದೆ, ನನ್ನ ಸ್ವಾರ್ಥ ರಾಜಕೀಯಕ್ಕೆ ಯಾವತ್ತೂ ರಾಜಕೀಯ ನಿರ್ಣಯ ತಗೊಂಡಿಲ್ಲ, ದನಿ ಇಲ್ಲದವರಿಗೆ ಶಕ್ತಿ ತುಂಬಲು ರಾಜಕೀಯ ನಿರ್ಧಾರ ತೆಗೆದುಕೊಂಡಿದ್ದೇನೆ ಹೊರತು ವೈಯಕ್ತಿಕವಲ್ಲ," ಎಂದರು.
"ಮೊನ್ನೆ ನಡೆದ ಬೆಳವಣಿಗೆ ನನಗೆ ನೋವು ತಂದಿದೆ, ನನಗೆ ಬಿಜೆಪಿಯಲ್ಲಿ ಮಂಡ್ಯ ಉಸ್ತುವಾರಿ ನೀಡಿದ್ದರು, 28 ಗ್ರಾಮ ಪಂಚಾಯತ್ ಸದಸ್ಯರಿದ್ದರು. ನಾನು ವಹಿಸಿಕೊಂಡ ಮೇಲೆ 500 ಮಂದಿ ಗ್ರಾ.ಪಂ. ಸದಸ್ಯರು ಗೆದ್ದಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದ ರಾಜಕೀಯ ಮಾಡಿದರು, ಆ ಸಂದರ್ಭದಲ್ಲಿ ನನ್ನನ್ನು ಕಾಪಾಡಿದ್ದು ಮತದಾರರು," ಎಂದು ಹೇಳಿದರು.
"ರಾಜ್ಯ ಬಿಜೆಪಿ ಶಿಸ್ತು ಸಮಿತಿ ಎಲ್ಲ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿ ನೀಡಿದ ಪತ್ರದಿಂದ ಒಳ್ಳೆಯದಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ನನ್ನ ಮಗನ ಪರವಾಗಿ ಪ್ರಚಾರ ಮಾಡಲು ಅಧಿಕಾರ ಇರಲಿಲ್ಲ ಎಂದು ಹೋಗಲು ಆಗುತ್ತಿರಲಿಲ್ಲ. ನನ್ನ ಮೇಲೆ ನಂಬಿಕೆ ಇಲ್ಲ ಅಂದರೆ ಈಗ ಮಗನ ಪರ ಚುನಾವಣೆ ಮಾಡಲು ಧೈರ್ಯವಿದೆ," ಎಂದು ಎ.ಮಂಜು ತಿರುಗೇಟು ನೀಡಿದರು.
"ಇರುವ ಒಬ್ಬ ಮಗನನ್ನು ಕಳೆದುಕೊಳ್ಳಲು ಆಗಲ್ಲ, ಹಾಗಾಗಿ ಹೋಗಲೇಬೇಕು. ಮಗನ ಪರ ಎಲೆಕ್ಷನ್ ಮಾಡಿಲ್ಲ ಎಂಬ ಪಾಪಕ್ಕೆ ಏಕೆ ಗುರಿಯಾಗಬೇಕು? ಆ ಪಾಪದ ಗುರಿ ಲೆಟರ್ ಕೊಟ್ಟು ತಪ್ಪಿಸಿದವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಅವರು ಲೆಟರ್ ಕೊಡದಿದ್ದರೆ ನಾನು ಮಗನ ಪರ ಪ್ರಚಾರಕ್ಕೆ ಹೋಗುತ್ತಿರಲಿಲ್ಲ. ಈಗ ನೂರಕ್ಕೆ ನೂರು ಮಗನ ಪರ ಪ್ರಚಾರಕ್ಕೆ ಹೋಗುತ್ತೇನೆ," ಎಂದು ಎ.ಮಂಜು ತಮ್ಮ ನಿರ್ಧಾರ ತಿಳಿಸಿದರು.
"ನಾನು ಮಗ ಮಂಥರ್ಗೌಡ ಪರ ಪ್ರಚಾರಕ್ಕೆ ಬರಲ್ಲ ಅಂತ ಹೇಳಿದ್ದೆ, ಅವನು ನಾಮಪತ್ರ ಸಲ್ಲಿಸಬೇಕಾದರೆ ನಾನು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಜೊತೆ ಇದ್ದೆ. ಈಗ ಬಿಜೆಪಿಯವರೇ ಒಂಥರಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈಗ ನಾನು ಬಿಜೆಪಿ ಪಕ್ಷದಲ್ಲೇ ಇದ್ದೇನೆ, ಆದರೆ ನನ್ನ ಮಗನ ಪರವಾಗಿ ಚುನಾವಣೆ ಮಾಡುತ್ತೇನೆ. ಇನ್ನು ಇದೇ ವೇಳೆ ನನಗೆ ನೋಟಿಸ್ ಕೊಟ್ಟವನು ಅವಿವೇಕಿ," ಎಂದು ಎ.ಮಂಜು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ನೋಟಿಸ್ ಕೊಡಲು ಅವನಿಗೆ ಅಧಿಕಾರವೇ ಇಲ್ಲ, ನನಗೆ ರಾಜ್ಯಾಧ್ಯಕ್ಷರು ನೋಟಿಸ್ ಕೊಡಬೇಕು. ಅದು ಪಕ್ಷ ವಿರೋಧಿ ಚಟುವಟಿಕೆ ಮಾಡಿದಾಗ ಮಾತ್ರ ನೋಟಿಸ್ ಕೊಡಬೇಕು. ನನಗೆ ಲೆಟರ್ ಬರುವವರೆಗೂ ಏನು ಮಾಡಿದ್ದಾರೆ ಎಂದು ಗೊತ್ತಿಲ್ಲ, ನಾವು ಬಿಜೆಪಿ ಅಭ್ಯರ್ಥಿ ಜೊತೆಯಲ್ಲೇ ಇದ್ದು, ಅವರ ಜೊತೆ ಹೋಗಿ ನಾಮಪತ್ರ ಸಲ್ಲಿಸಿದ್ದೇವೆ. ಸಾಯಂಕಾಲ ಏಕಾಏಕಿ ಎಲ್ಲಾ ಜವಾಬ್ದಾರಿ ವಾಪಸ್ ಪಡೆದಿದ್ದೇವೆ ಅಂತಾರಲ್ಲ, ಅವನಿಗೆ ಏನು ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಲು ಹೇಳಿ ಎಂದು ಸವಾಲು ಹಾಕಿದರು.
ಪಕ್ಷ ಕಟ್ಟಲು ನಾವು ಮಂಡ್ಯದಲ್ಲಿ ಜೀತ ಮಾಡುತ್ತಿದ್ದೇವೆ, ನಮಗೆ ಯಾವ ಹುದ್ದೆಯನ್ನು ಕೊಟ್ಟಿರಲಿಲ್ಲ, ಆದರೆ ಸಂಘಟನೆ ಜವಾಬ್ದಾರಿ ಹೊತ್ತಿದ್ದೆವು. ನೋಟಿಸ್ ಕೊಡಲು ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಇದರ ಹಿಂದೆ ಯಾರ ಕೈವಾಡ ಇದೆ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ನನ್ನ ಮನೆಯನ್ನು ಒಡೆದಿದ್ದಾರೆ, ಸಂದರ್ಭ ಬಂದಾಗ ಮಾತನಾಡುತ್ತೇನೆ, ಮಾತನಾಡುವ ದಿನಗಳು ಬರುತ್ತವೆ ಎಂದು ಎ. ಮಂಜು ತಿಳಿಸಿದರು.
Recommended Video