ಪಕ್ಷ ತೊರೆಯುವ ವದಂತಿ, ಸ್ಪಷ್ಟನೆ ಕೊಟ್ಟ ಶಾಸಕ ಶಿವಲಿಂಗೇ ಗೌಡ
ಹಾಸನ, ಜೂ28: "ನೀವು ಮನೆಗೆ ಹೋಗು ಅಂದರೆ ಹೋಗುತ್ತೇನೆ, ಚುನಾವಣೆಗೆ ನಿಲ್ಲು ಅಂದರೆ ನಿಲ್ಲುತ್ತೇನೆ. ನೀವು ಕೊಡುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನಾನು ಯಾವತ್ತು ರಾಜಕಾರಣದಲ್ಲಿ ತಪ್ಪು ಹೆಜ್ಜೆ ಇಡುವ ಸಂಸ್ಕೃತಿ ಹೊಂದಿಲ್ಲ" ಎಂದು ಅರಸೀಕೆರೆ ಶಾಸಕ ಕೆ. ಎಂ. ಶಿವಲಿಂಗೇ ಗೌಡ ಹೇಳಿದ್ದಾರೆ.
ಅರಸೀಕೆರೆಯ ಜೆಡಿಎಸ್ ಶಾಸಕ ಕೆ. ಎಂ. ಶಿವಲಿಂಗೇ ಗೌಡ ಪಕ್ಷ ತೊರೆಯುವ ವದಂತಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಭಾನುವಾರ ಜೆಡಿಎಸ್ ವಾಟ್ಸಪ್ ಗ್ರೂಪ್ಗಳಿಂದ ಹೊರ ಬಂದ ಹಿನ್ನೆಲೆ ಪಕ್ಷ ತೊರೆಯುವ ಚರ್ಚೆಗಳು ಮುನ್ನಲೆಗೆ ಬಂದಿದ್ದವು.
ಜೆಡಿಎಸ್ ವಾಟ್ಸಪ್ ಗ್ರೂಪ್ನಿಂದ ಹೊರಬಂದ ಶಾಸಕ ಶಿವಲಿಂಗೇಗೌಡ
ಮಂಗಳವಾರ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗೇಶಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಿವಲಿಂಗೇಗೌಡರು, ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವು ನೀಡಿದರು.
ಮನೆಮುಂದೆ ಬಂದು ಕಿಟಕಿ ಗಾಜು ಒಡೆದುಹಾಕಿದ ಆನೆ: ಗ್ರಾಮಸ್ಥರು ಹೈರಾಣ
ನಾನೇನು ಮಾಡಿದ್ದೀನಿ ಅಂತ ಜನರಿಗೆ ಗೊತ್ತು
ಇದೇ ವೇಳೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಮಾಜಿ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಹೆಸರು ಹೇಳದೆ ವಾಗ್ದಾಳಿ ನಡೆಸಿದರು. "ಹೆಚ್ಚು ಜನ ಸೇರಿಸಿದ್ದೀರಿ. ಇಂತಹ ಸಂದರ್ಭದಲ್ಲಿ ನಾಲ್ಕು ಮಾತುಗಳನ್ನು ಆಡದೇ ಹೋದರೆ ತಪ್ಪಾಗುತ್ತದೆ. ಇಂದಿನ ರಾಜಕಾರಣದ ಸನ್ನಿವೇಶ ಪ್ರಸ್ತಾಪ ಮಾಡಲು ಹೋಗಲ್ಲ" ಎಂದರು. ಈ ವೇಳೆ ಕಾರ್ಯಕ್ರಮದಿಂದ ಕೆಲವರು ಹೊರಡುತ್ತಿದ್ದಂತೆ ಕೋಪಗೊಂಡ ಶಿವಲಿಂಗೇಗೌಡರು ಯಾಕೆ ತೆರೆಮರೆಗೆ ಹೋಗುತ್ತಿದ್ದೀರಾ? ಮಾತನಾಡಲು ಡಿಸ್ಟರ್ಬ್ ಆಗುತ್ತದೆ. ಇಲ್ಲಾ ದೂರಕ್ಕೆ ಹೋಗಬೇಕು ಎಂದು ಹೇಳಿದರು. ಅವರು ನಮ್ಮವರೇ, ಅಲ್ಲಿಂದ ಮಾತಾಡಿಕೊಂಡು ಇಲ್ಲಿಗೆ ಬಂದರು. ನಾನು ಇದನ್ನು ಮೊದಲಿನಿಂದಲೂ ಗಮನಿಸುತ್ತಿದ್ದೇನೆ. ನಾನು ಅರಸೀಕೆರೆ ಕ್ಷೇತ್ರದ ಶಾಸಕರಾಗುವ ಮುಂಚೆ ಯಾವ ಕಾರ್ಯಕ್ರಮ ನಡೆದಿದ್ದವು? ಇವತ್ತು ನಾನೇನು ಮಾಡಿದ್ದೇನೆ ಅನ್ನೋದನ್ನು ಕಾರ್ಯಕರ್ತರು ಹೇಳಬೇಕು. ನೀವು ಕಾರ್ಯಕರ್ತರು, ಮುಖಂಡರು ನಿಲ್ಲಬೇಕು. ನನ್ನ ಬಳಿ ಬಂದು ಗಂಟೆಗಟ್ಟಲೇ ಕುಳಿತು ಕೆಲಸ ಮಾಡಿಸಿಕೊಂಡಿಸಿದ್ದೀರಿ. ಅದನ್ನು ನಾನು ಹಿಂಸೆ ಎಂದು ಭಾವಿಸಲ್ಲ, ಪ್ರೀತಿ ಅಂದು ಕೊಳ್ಳುವೆ, ನಾನೇನು ಮಾಡಿದ್ದೀನಿ ಅಂತ ಕೇಳುವವರಿಗೆ ನೀವು ಉತ್ತರ ಹೇಳಿ ಎಂದರು.
ನನಗೆ ರಾಜಕೀಯವಾಗಿ ಶಕ್ತಿ ತುಂಬಿ
ಅರಸೀಕೆರೆ ಪಿಪಿ ಸರ್ಕಲ್ನವರಿಗೆ ನೀವು ನಿಂತು ಉತ್ತರ ಹೇಳಬೇಕು. ಹೇಮಾವತಿ ನದಿಯಿಂದ ಕುಡಿಯುವ ನೀರು, ಎತ್ತಿನಹೊಳೆ ಯೋಜನೆಯನ್ನು ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೇನೆ. ಅದಕ್ಕಾಗಿ ನನಗೆ ರಾಜಕೀಯವಾಗಿ ಶಕ್ತಿ ತುಂಬಿ ಎಂದು ಮನವಿ ಮಾಡಿಕೊಂಡರು. ನನ್ನ ರಾಜಕಾರಣದಲ್ಲಿ ಅರಸೀಕೆರೆ ತಾಲೂಕಿನ ಎಲ್ಲಾ ಕೆರೆಕಟ್ಟೆಗಳು ತುಂಬಿ ಕೋಡಿ ಬೀಳಬೇಕು ಎನ್ನುವ ಆಸೆಯಿದೆ. ಅದನ್ನು ಮಾಡಲು ಹೆಚ್ಚಿನ ರೀತಿಯ ಸಹಕಾರ ಕೊಡಬೇಕು ಎಂದು ಕೇಳಿಕೊಂಡರು.
ದೇವೇಗೌಡರಿಗೆ ಮಿಸ್ಗೈಡ್ ಮಾಡಿದ್ರು
ಸುಮಾರು 40 ಲಕ್ಷ ತೆಂಗಿನಮರಗಳು ರೋಗದಿಂದ ನಾಶವಾಗಿದ್ದಾಗ ಇದಕ್ಕೆ ಪರಿಹಾರ ಕೊಡಬೇಕು ಅಂತ ನಾನು ಹನ್ನೊಂದು ದಿನ ಗಿಜಿಹಳ್ಳಿಯಲ್ಲಿ ಪ್ರತಿಭಟನೆ ಮಾಡುತ್ತ ಮಲಗಿದ್ದೆ. ಅವತ್ತು ನನ್ನನ್ನು ಮಾತನಾಡಿಸಲು ಯಾರೂ ಬರಲಿಲ್ಲ. ನಂತರ ನಾನೇ ಎದ್ದು ಹೋಗಿ ಅರಸೀಕೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಶಪಥ ಮಾಡಿದೆ. ಆಗ ಅಲ್ಲಿಗೆ ರೇವಣ್ಣ ಅವರು ಬಂದರು. ನಂತರ ಹಾಸನದಲ್ಲಿ ನಡೆದ ಸಭೆ ವೇಳೆ ರಾಜಕಾರಣದ ಹಿನ್ನೆಲೆಯಲ್ಲಿ ನಮ್ಮ ಪೂಜ್ಯರಾದ ದೇವೇಗೌಡರಿಗೆ ಮಿಸ್ಗೈಡ್ ಮಾಡಿದರು. ನಾನು ಪ್ರತಿಭಟನೆ ಮಾಡುತ್ತ ಮಲಗಿರುತ್ತೇನೆ. ನೀವು ಬಂದು ಮೇಲೆ ಏಳಿಸಿಕೊಂಡು ಬನ್ನಿ ಎಂದು ನಾನು ನಾಟಕವಾಡಿದ ಎಂಬ ಪದವನ್ನು ನನ್ನ ಮೇಲೆ ಪ್ರಯೋಗ ಮಾಡಿದ್ದಾರೆ. ಯಾವ ತಪ್ಪು ಗ್ರಹಿಕೆಯಿಂದ ಅವರು ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಬೇಸರ ಹೊರ ಹಾಕಿದರು.
ರಾಜಕಾರಣದಲ್ಲಿ ಪ್ರಾಮಾಣಿಕವಾದ ಹೋರಾಟ
ನಾನು ರಾಜಕಾರಣದಲ್ಲಿ ಇರುವವರೆಗೂ ಪ್ರಾಮಾಣಿಕವಾದ ಹೋರಾಟ ಮಾಡುತ್ತೇನೆ. ನಿಮ್ಮ ಆಶೀರ್ವಾದ ಇರುವವರೆಗೂ ಹೆದರುವ ಸನ್ನಿವೇಶ ಇಲ್ಲ. ನಿಮ್ಮ ಗೌರವ, ಆತ್ಮಸಾಕ್ಷಿ ಮರೆತು, ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನೆಂದು ರಾಜಕಾರಣ ಮಾಡಲ್ಲ. ಕೆಲವರು ಸೋಗಲಾಡಿತನದಲ್ಲಿ ಬರ್ತಾರೆ, ಏನೇನು ಹೇಳಿಕೆ ಕೊಡುತ್ತಿದ್ದಾರೆ. ನಾನು ಶಾಸಕನಾದ ಮೇಲೆ 530 ಹಳ್ಳಿಗಳಲ್ಲಿ ಸುಮಾರು 700 ರಿಂದ 800 ದೇವಾಲಯಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ನನಗಿದೆ. ನನ್ನ ಸಹಕಾರದಿಂದ ನಿರ್ಮಾಣವಾಗಿರುವ ದೇವಾಲಯಗಳ ದೊಡ್ಡ ಬುಕ್ನ್ನು ಜನತೆ ಮುಂದೆ ಇಡುತ್ತೇನೆ. ನಾನೆಂದು ಆ ದೈವ ಭಕ್ತಿಗೆ, ಧರ್ಮ ಭಕ್ತಿಗೆ, ಧಾರ್ಮಿಕತೆಗೆ ದ್ರೋಹ ಮಾಡುವಂತಹ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಅವರೆಲ್ಲಾ ಆ ಕೆಲಸವನ್ನು ಮಾಡಿ ಇಲ್ಲಿಗೆ ಬರ್ತಾರೆ. ಬಹಳ ಜನ ಮೂರ್ನಾಲ್ಕು ಬಾರಿ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂಥ ಪಿತೂರಿಯನ್ನು ನಡೆಸಿಕೊಂಡು ಬಂದಿದ್ದಾರೆ. ಬೆಂಗಳೂರಿಂದ ಬರ್ತಾರೆ, ಅದ್ಯಾಕೆ ಬರ್ತಾರೆ ನನಗೆ ಗೊತ್ತಿಲ್ಲ ಎಂದು ಸಂತೋಷ್ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.