ಯಾವ ಕಾರಣಕ್ಕೂ ಸಿಎಂ ಬಿಎಸ್ವೈ ಬದಲಾವಣೆ ಇಲ್ಲ: ಸಚಿವ ಸೋಮಣ್ಣ
ಹಾಸನ, ಸೆಪ್ಟೆಂಬರ್ 11: "ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬದಲಾವಣೆ ಕೇವಲ ಮಾಧ್ಯಮಗಳ ಉಹಾಪೋಹವಷ್ಟೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಯಡಿಯೂರಪ್ಪ ಅವರೇ ನಮ್ಮ ನಾಯಕರು" ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಹಾಸನ ಜಿಲ್ಲಾ ಪಂಚಾಯತಿ ಸಭೆಯ ಬಳಿಕ ಮಾತನಾಡಿದ ಸಚಿವ ಸೋಮಣ್ಣ, ಸಚಿವ ಜಗದೀಶ್ ಶೆಟ್ಟರ್ ಅವರು ದೆಹಲಿಗೆ ಹೋಗಿ ರಾಷ್ಟ್ರ ನಾಯಕರ ಭೇಟಿ ವಿಚಾರವಾಗಿ ಮಾತನಾಡುವಾಗ ಅವರು ಈ ಕುರಿತು ಸ್ಪಷ್ಟಪಡಿಸಿದರು. "ಜಗದೀಶ್ ಶೆಟ್ಟರ್ ಕೈಗಾರಿಕಾ ಸಚಿವರು, ಪ್ರಭಾವಿ ನಾಯಕರು. ಕೈಗಾರಿಕಾ ಕ್ಷೇತ್ರದ ಕುರಿತು ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದಾರೆ. ಇನ್ನಾವುದೇ ಉದ್ದೇಶ ಇಲ್ಲ" ಎಂದು ಸ್ಪಷ್ಟಪಡಿಸಿದರು.
ಶಾಸಕ ಜಮೀರ್ ಅಹ್ಮದ್ ಬಗ್ಗೆ ಸಚಿವ ವಿ.ಸೋಮಣ್ಣ ಹೇಳಿದ್ದು ಹೀಗೆ
"ಕೈಗಾರಿಕಾ ಸಚಿವರು ಏಕೆ ದೆಹಲಿಗೆ ಹೋಗಿದ್ದರು ಎಂದು ನನ್ನನ್ನು ಕೇಳಿದರೆ ನನ್ನಂತಹ ದಡ್ಡ ಬೇರೆ ಯಾರೂ ಇಲ್ಲ. ಆದರೆ ಯಡಿಯೂರಪ್ಪ ಈ ರಾಜ್ಯದ ಮತ್ತು ನಮ್ಮ ಪಕ್ಷದ ಪ್ರಶ್ನಾತೀತ ನಾಯಕ" ಎಂದು ಹೇಳಿದರು.
Recommended Video
"ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರದ ಬಗ್ಗೆ ಚಿಕ್ಕಮಗಳೂರಿನಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ಸಿ.ಟಿ ರವಿ ಭೇಟಿ ಮಾಡಿ ಸಭೆ ನಡೆಸಿದ್ದಾರೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಸಿ.ಟಿ ರವಿಯವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರನ್ನು ಮಾತನಾಡಿಸಲು ಯಾರೂ ಹೋಗಿರಲಿಲ್ಲ. ಆರ್.ಅಶೋಕ್ ಸಹ ಎಲ್ಲೋ ಇದ್ದರು. ಜಗದೀಶ್ ಶೆಟ್ಟರ್ ಅಲ್ಲಿ ಇರಲೇ ಇಲ್ಲ" ಎಂದು ವಸತಿ ಸಚಿವ ವಿ.ಸೋಮಣ್ಣ ಸ್ಪಷ್ಟನೆ ನೀಡಿದರು.