ಹಾಸನದಲ್ಲಿ ನಿರಂತರ ಮಳೆಯಿಂದ ಭಾರೀ ಹಾನಿ; ಶೀಘ್ರ ವರದಿಗೆ ಸೂಚನೆ
ಹಾಸನ, ಆಗಸ್ಟ್ 13: ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಪರಿಹಾರ ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
Recommended Video
ಹೊಳೆನರಸೀಪುರ ಪಟ್ಟಣದ ಪುರಸಭಾ ಕಾರ್ಯಲಯದ ಸಭಾಂಗಣದಲ್ಲಿ ನಿನ್ನೆ ನಡೆದ ಸಭೆಯಲ್ಲಿಮಾತನಾಡಿದ ಅವರು, "ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಎಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ ಹಾಗೂ ಮನೆಗಳು, ಬೀದಿ ದೀಪಗಳು, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಮತ್ತು ಇತರೆ ಸಾರ್ವಜನಿಕ ಆಸ್ತಿಗಳು ಹಾನಿಯಾಗಿವೆ ಈ ಬಗ್ಗೆ ನಿಖರ ವರದಿ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಆನಂತರ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು. ರೈತರ ಏಳಿಗೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ, ರೈತರು ಉಳಿದರೆ ನಾಡು ಉಳಿಯುತ್ತದೆ" ಎಂದರು.
ಪ್ರವಾಹ ಪೀಡಿತರಿಗೆ 3ನೇ ಕಂತು ಇನ್ನೂ ಬಂದಿಲ್ಲ
ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಮಾತನಾಡಿ ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸೋಂಕು ದೃಢಪಡುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚು ನಿಗಾವಹಿಸಿ ಕಾರ್ಯನಿರ್ವಹಿಸಬೇಕು ಹಾಗೂ ಪಟ್ಟಣ ಪ್ರದೇಶದ ಪ್ರತಿ ವಾರ್ಡ್ ಗಳಲ್ಲಿ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ನಿತ್ಯ ಕನಿಷ್ಠ 200 ಗಂಟಲ ದ್ರವ ಮಾದರಿಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಿದರೆ ಸಮುದಾಯದಲ್ಲಿ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು ಎಂದರು.
ಹೇಮಾವತಿ ಬಲದಂಡೆ ನಾಲೆಗೆ ಶೀಘ್ರವೇ ನೀರು: ಸಚಿವ ಗೋಪಾಲಯ್ಯ
ಕಳೆದ ಬಾರಿ ಪ್ರವಾಹ ಪೀಡಿತರಿಗೆ ಮನೆ ಕಟ್ಟಿಕೊಳ್ಳಲು ಕೇವಲ 2 ಕಂತುಗಳನ್ನು ಬಿಡುಗಡೆ ಮಾಡಿದ್ದು, 3ನೇ ಕಂತು ಇನ್ನೂ ಬಂದಿಲ್ಲ. ಖಾತೆ ಪಹಣಿ ತೆಗೆದುಕೊಳ್ಳುವುದು ಹಾಗೂ ಸಲ್ಲಿಸುವುದು ಹಳ್ಳಿ ಜನರಿಗೆ ಅಷ್ಟಾಗಿ ತಿಳಿಯುವುದಿಲ್ಲ. ಅಧಿಕಾರಿಗಳು ಈ ಬಗ್ಗೆ ಗ್ರಾಮೀಣ ಜನರಿಗೆ ಸರಿಯಾದ ಮಾಹಿತಿ ನೀಡಬೇಕು. ಕೆಲವೆಡೆ ಬಿದ್ದುಹೋಗಿರುವ ಮನೆಗಳ ಸರ್ವೆ ಕೂಡ ಮಾಡಿಲ್ಲ. ಇದರಿಂದ ಹಲವಾರು ಕುಟುಂಬಗಳಿಗೆ ಪರಿಹಾರವೇ ದೊರೆತಿಲ್ಲ. ಗ್ರಾಮ ಲೆಕ್ಕಿಗರು ಹಾಗೂ ಪಿಡಿಒಗಳು ಇದರ ಬಗ್ಗೆ ನಿಗಾವಹಿಸಬೇಕು ಎಂದರು.
"ಆದಷ್ಟು ಬೇಗ ನಾಲೆಯಿಂದ ನೀರು ಬಿಡಿ"
ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ಹೂವಿನ ಬೆಳೆ ನಾಶವಾಗಿದೆ, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಇದುವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಲಿ ಅಥವಾ ಪರಿಹಾರ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವುದಾಗಲಿ ಮಾಡಿಲ್ಲ. ಅಲ್ಲದೇ ಹೇಮಾವತಿ ಜಲಾಶಯವು ಸಂಪೂರ್ಣವಾಗಿ ತುಂಬುವ ಪರಿಸ್ಥಿತಿಯಲ್ಲಿದ್ದು, ರೈತರಿಗೆ ನೀರಿನ ಅವಶ್ಯಕತೆ ಇರುವುದರಿಂದ ಆದಷ್ಟು ಬೇಗ ನಾಲೆಗಳ ಮೂಲಕ ನೀರು ಬಿಡುವಂತೆ ಕ್ರಮವಹಿಸಬೇಕು ಎಂದರು.
ಕೋವಿಡ್ ಕೇರ್ ಗಳಲ್ಲಿ ಮೂಲ ಸೌಕರ್ಯಗಳ ಕೊರತೆ
ಪ್ರಸ್ತುತ ಕೋವಿಡ್ ಕೇರ್ ಕೇಂದ್ರಗಳಲ್ಲಿ ಶೌಚಾಲಯ ಹಾಗೂ ಇತರೆ ಮೂಲ ಸೌಕರ್ಯಗಳು ಸರಿಯಿಲ್ಲ ಎಂಬ ದೂರುಗಳು ಬರುತ್ತಿವೆ. ಆದ್ದರಿಂದ ಹೊರ ವಲಯಗಳಲ್ಲಿರುವ ಕನಿಷ್ಠ 5 ಹಾಸ್ಟೆಲ್ ಗಳನ್ನು ಗುರುತಿಸಿ ಪ್ರತಿ ಹಾಸ್ಟಲ್ ನಲ್ಲಿಯೂ 20 ಮಂದಿ ಸೋಂಕಿತರನ್ನು ಇರಿಸಿ ಅಲ್ಲಿಯೇ ಊಟ, ಚಿಕಿತ್ಸೆ ಹಾಗೂ ವೈದ್ಯರನ್ನು ನೇಮಿಸುವಂತೆ ಎಚ್.ಡಿ ರೇವಣ್ಣ ಸೂಚಿಸಿದರು.
ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ರೇವಣ್ಣ ಎಚ್ಚರಿಕೆ
ಎಚ್.ಆರ್.ಬಿ.ಸಿ. ಬಲದಂಡೆ ನಾಲೆ ಕಾಮಗಾರಿ ಪರಿಶೀಲನೆ
ಈ ಕುರಿತು ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಕಾರ್ಯನಿರ್ವಹಿಸಬೇಕು. ಅತಿವೃಷ್ಟಿಯಿಂದಾಗಿರುವ ಹಾನಿಗಳ ಸಂಪೂರ್ಣ ವರದಿಯನ್ನು ಆದಷ್ಟು ಬೇಗ ನೀಡಬೇಕು ಎಂದು ಸಂಸದ ಪ್ರಜ್ವಲ್ ರೇವಣ್ಣ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯ ಕೋವಿಡ್ ಸ್ಥಿತಿಗತಿ ಹಾಗೂ ಬೆಳೆಹಾನಿ ಸೇರಿದಂತೆ ಸಂಪೂರ್ಣ ವರದಿ ಸಲ್ಲಿಸಿದರು. ನಂತರ ಸಚಿವರು ಶ್ರೀರಾಮ ದೇವರ ಅಣೆಕಟ್ಟೆ ಹಾಗೂ ಎಚ್.ಆರ್.ಬಿ.ಸಿ. ಬಲದಂಡೆ ನಾಲೆಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪವಿಭಾಗಾಧಿಕಾರಿ ಡಾ.ನವೀನ್ ಭಟ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.