ಹಾಸನ ಜಿಲ್ಲೆ ಸುತ್ತಮುತ್ತ 2.3 ರಿಕ್ಟರ್ ಮಾಪನದ ಲಘು ಭೂಕಂಪನ
ಹಾಸನ, ಸೆಪ್ಟೆಂಬರ್ 17: ಹಾಸನ ಜಿಲ್ಲೆಯ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿದ್ದಾರೆ. ಹಾಸನ ನಗರದ ಉದಯಗಿರಿ, ಕುವೆಂಪುನಗರ, ಮಾವಿನಹಳ್ಳಿ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ.
ಐದು ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಹಾಸನ ನಗರ ಮಾತ್ರವಲ್ಲದೆ ವಿಶ್ವವಿಖ್ಯಾತ ಬೇಲೂರು ತಾಲೂಕಿನ ಹಳೆಬೀಡು ಸಮೀಪದ ದ್ಯಾವಪ್ಪನಹಳ್ಳಿ, ನಿಂಗಪ್ಪನಕೊಪ್ಪಲು ಸೇರಿ ಹಲವೆಡೆ ಭೂಕಂಪನ ಅನುಭವವಾಗಿದೆ. ಇದರಿಂದ ಆತಂಕಗೊಂಡ ನಿವಾಸಿಗಳು ಮನೆಯ ಹೊರಗಡೆ ಓಡಿ ಬಂದಿದ್ದಾರೆ. ಜನರು ನೀಡಿದ ಮಾಹಿತಿ ಮೇಲೆ ಸ್ಥಳಕ್ಕೆ ಹಳೆಬೀಡು ಪೊಲೀಸರು ಭೇಟಿ ನೀಡಿದ್ದಾರೆ.
ಹಾಸನ ನಗರ ಸುತ್ತಮುತ್ತ 5 ಗಂಟೆ 10 ನಿಮಿಷದ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೇಲೂರು ಸುತ್ತಮುತ್ತ ಸಂಜೆ 6 ಗಂಟೆ 10 ನಿಮಿಷದ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಹಾಸನದಲ್ಲಿ ಭೂಕಂಪನದ ರಿಕ್ಟರ್ ಮಾಪನದಲ್ಲಿ 2.3 ತೀವ್ರತೆ ದಾಖಲಾಗಿದೆ.
ಸಾಲಗಾಮೆ ಹೋಬಳಿಯ, ರಾಯಪುರದ ಬಳಿ 2.3 ರಷ್ಟು ಕಂಪನ ದಾಖಲಾಗಿದ್ದು, ಈ ಕಂಪನಕ್ಕೆ ಜನರು ಹೆದರುವ ಅವಶ್ಯಕತೆಯಿಲ್ಲ. ಇದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಹಾಸನ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನ ಕೇಂದ್ರ ಬಿಂದು ಸಾಲಗಾಮೆ ಹೋಬಳಿಯ ರಾಯಪುರದಿಂದ 1.5 ಕಿಲೋಮೀಟರ್ ದೂರದಲ್ಲಿರುತ್ತದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3 ಆಗಿರುತ್ತದೆ ಹಾಗೂ ಇದು ಭೂಮಿಯಿಂದ ಸುಮಾರು 2.4 ಕಿಲೋಮೀಟರ್ ಆಳದಲ್ಲಿರುತ್ತದೆ.
ಈ ಹಿಂದೆ ಗದಗ ಹಾಗೂ ವಿಜಯಪುರದಲ್ಲಿ ಭೂ ಕಂಪನ
ಇದಕ್ಕೂ ಮೊದಲು ರಾಜ್ಯದ ಕೆಲವು ಕಡೆಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಭಾರೀ ಸದ್ದಿನೊಂದಿಗೆ ಗದಗ ಹಾಗೂ ವಿಜಯಪುರದ ಕೆಲವೆಡೆ ಭೂಮಿ ಕಂಪಿಸಿದ ಅನುಭವ ಆಗಿತ್ತು. ಭೂಮಿ ನಡುಗಿದ ಅನುಭವಕ್ಕೆ ಜನರು ಬೆಚ್ಚಿಬಿದ್ದಿದ್ದರು.
ವಿಜಯಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ 11 ರಂದು ಮತ್ತೆ ಭೂಕಂಪನದ ಅನುಭವವಾಗಿತ್ತು. ಅದರಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಮುಂಜಾನೆ 8.18ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಜನರು ಹೇಳಿದ್ದರು. ಒಂದೇ ವಾರದಲ್ಲಿ ಎರಡು ಬಾರಿ ಈ ಅನುಭವ ಆಗಿರುವುದು ಸಹಜವಾಗಿ ಭಯಕ್ಕೆ ಕಾರಣವಾಗಿತ್ತು.
Recommended Video
ಸೆಪ್ಟೆಂಬರ್ 4ನೇ ತಾರೀಖಿನಂದು ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕಂಪವಾಗಿತ್ತು. ಅಂದು ರಿಕ್ಟರ್ ಮಾಪನದಲ್ಲಿ 3.9ರಷ್ಟು ತೀವ್ರತೆ ದಾಖಲಾಗಿತ್ತು. ಬಳಿಕ ಸರಿಯಾಗಿ ಒಂದು ವಾರದ ಅಂತರದಲ್ಲಿ ಮತ್ತೆ ಭೂಮಿ ನಡುಗಿದ ಅನುಭವ ಆಗಿತ್ತು.
ಒಂದು ವಾರದ ಹಿಂದೆ ಭೂಕಂಪ ಆಗಿರುವ ಬಗ್ಗೆ ಹಾಗೂ ಅದರ ತೀವ್ರತೆ ಬಗ್ಗೆ ಜಿಲ್ಲಾಡಳಿತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದೀಗ ಮತ್ತೆ ಹಾಸನದಲ್ಲಿ ಇಂತಹ ಅನುಭವ ಆಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಲಭಿಸಬೇಕಿದೆ.