ಲಾಕ್ ಡೌನ್ ನಿಂದ ಬೇಲೂರಲ್ಲಿ ಮನೆಯಲ್ಲಿಯೇ ನಡೆಯಿತು ಮದುವೆ
ಹಾಸನ, ಏಪ್ರಿಲ್ 07: ಕೊರೊನಾ ಲಾಕ್ ಡೌನ್ ನಿಂದಾಗಿ ಮೊದಲೇ ನಿಶ್ಚಯವಾಗಿದ್ದ ಮದುವೆಗಳ ಪೈಕಿ ಕೆಲವು ರದ್ದುಗೊಂಡಿದ್ದರೆ, ಮತ್ತೆ ಕೆಲವು ಮದುವೆಗಳನ್ನು ಹಿರಿಯರ ಸಮ್ಮುಖದಲ್ಲಿ ಕೆಲವೇ ಕೆಲವು ಬಂಧುಗಳ ಉಪಸ್ಥಿತಿಯಲ್ಲಿ ಸರಳವಾಗಿ ನಡೆಸುತ್ತಿರುವ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಇದೀಗ ಬೇಲೂರಿನಲ್ಲಿಯೂ ಅದೇ ಆಗಿದೆ. ಮೊದಲೇ ನಿಗದಿ ಮಾಡಿದ್ದ ಮುಹೂರ್ತದಲ್ಲಿ ವಧು-ವರರು ಹಸೆ ಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೇಲೂರು ಪಟ್ಟಣದ ಗುರಪ್ಪಗೌಡರ ಬೀದಿಯ ನಿವಾಸಿ ಮಮತಾ ಕಲ್ಲೇಶ್ ಆಚಾರ್ ದಂಪತಿ ಪುತ್ರಿ ರೇಖಾ ಮತ್ತು ನೆಹರೂ ನಗರದ ನಿವಾಸಿ ಪ್ರಮೀಳ ಪರಮೇಶ್ ಆಚಾರ್ ದಂಪತಿ ಪುತ್ರ ನಿಶಾಂತ್ ವಿವಾಹವನ್ನು ಏಪ್ರಿಲ್ 5ರಂದು ನಡೆಸಲು ನಿಶ್ಚಯ ಮಾಡಲಾಗಿತ್ತು. ಅಲ್ಲದೆ ಮದುವೆ ಸಂಬಂಧ ಬಹುತೇಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಲಾಗಿತ್ತು.
ಲಾಕ್ ಡೌನ್ :ಮೈಸೂರಿನಲ್ಲಿ ನೆರವೇರಿತು ಕ್ಷಣಾರ್ಧದ ಮದುವೆ
ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಇಡೀ ದೇಶವನ್ನು ಲಾಕ್ ಡೌನ್ ಮಾಡಿದ್ದರಿಂದ ರೇಖಾ ಮತ್ತು ನಿಶಾಂತ್ ಮದುವೆ ಮಾಡುವುದು ಹೇಗೆ ಎಂಬ ಚಿಂತೆ ಎರಡೂ ಕಡೆಯವರನ್ನು ಕಾಡಲಾರಂಭಿಸಿತ್ತು. ಕೆಲವರು ಮುಂದೂಡಿ ಎಂದು ಸಲಹೆ ನೀಡಿದರು. ಆದರೆ ಒಮ್ಮೆ ನಿಶ್ಚಯವಾದ ಮುಹೂರ್ತವನ್ನು ಮುಂದೂಡುವುದು ಹೆತ್ತವರಿಗೆ ಇಷ್ಟವಾಗಿರಲಿಲ್ಲ. ಆಗಿದ್ದಾಗಲಿ ಎಂದು ನಿಶ್ಚಯವಾದ ಮುಹೂರ್ತದಲ್ಲಿಯೇ ಸರಳವಾಗಿ ಮದುವೆ ನಡೆಸಲು ತೀರ್ಮಾನ ಮಾಡಿದರು. ಇದಕ್ಕೆ ತಾಲೂಕು ಆಡಳಿತವೂ ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ವಧುವಿನ ಸ್ವಗೃಹದಲ್ಲಿ ವಿವಾಹ ಸರಳವಾಗಿ ನಡೆದಿದೆ. ಎಲ್ಲರೂ ಮಾಸ್ಕ್ ಹಾಕಿಕೊಂಡು ಮದುವೆಯನ್ನು ನೆರವೇರಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ನೂತನ ವಧು-ವರರಾದ ರೇಖಾ ಮತ್ತು ನಿಶಾಂತ್, ನಮ್ಮ ಜೀವನದ ಅತಿ ಶುಭ ಸಂದರ್ಭ ಮದುವೆ. ಕೊರಾನಾ ವೈರಸ್ ನಿಂದ ಸರಳವಾಗಿ ನಿಗದಿತ ಮುಹೂರ್ತದಲ್ಲಿ ಮದುವೆ ನಡೆದಿದೆ ಎಂದಿದ್ದಾರೆ.
ಚಾಮರಾಜನಗರದ ಚೆಕ್ ಪೋಸ್ಟ್ನಲ್ಲಿ ಸಪ್ತಪದಿ ತುಳಿದ ವಧು-ವರರು
ವಧು-ವರರ ಪೋಷಕರು ಮಾತನಾಡಿ, ನಾವು ಆರು ತಿಂಗಳ ಹಿಂದೆ ಮದುವೆ ನಿಶ್ಚಯ ಮಾಡಿ ಕಲ್ಯಾಣ ಮಂಟಪಕ್ಕೆ ಹಾಗೂ ಸಾಮಗ್ರಿಗಳಿಗೆ ಮುಂಗಡ ಹಣ ಪಾವತಿ ಮಾಡಿ ಖರೀದಿಸಿದ್ದೆವು. ಆದರೆ ಲಾಕ್ ಡೌನ್ ನಿಂದಾಗಿ ಮದುವೆ ರದ್ದುಪಡಿಸುವಂತೆ ತಾಲೂಕು ಆಡಳಿತ ಸೂಚಿಸಿತ್ತು. ಈ ವೇಳೆ ನಾವು ಅವರಲ್ಲಿ ಮನವಿ ಮಾಡಿಕೊಂಡಾಗ ಕೇವಲ ಕುಟುಂಬ ಸದಸ್ಯರು ಸೇರಿ ಮದುವೆ ಮಾಡಿಕೊಳ್ಳಿ ಎಂದರು. ಅದರಂತೆ ಸರಳವಾಗಿ ಕುಟುಂಬದ ಸದಸ್ಯರು ಮಾತ್ರ ಸೇರಿ ಮದುವೆಯನ್ನು ಮನೆಯಲ್ಲಿಯೇ ಶಾಸ್ತ್ರೋಕ್ತವಾಗಿ ನಡೆಸಿದ್ದೇವೆ ಎಂದು ಹೇಳಿದರು.