ಮೂರನೇ ಮದುವೆಯಾಗಲು ಹೊರಟ ಭೂಪನಿಗೆ ಬಿತ್ತು ಗೂಸಾ
ಹಾಸನ, ನವೆಂಬರ್ 18 : ಮೊದಲನೇ ಹೆಂಡತಿಗೆ ಎರಡು ಮಕ್ಕಳನ್ನು ಕೊಟ್ಟು, ಎರಡನೇ ಹೆಂಡತಿಗೆ ಸಕತ್ ಟಾರ್ಚರ್ ಕೊಟ್ಟು, ಮೂರನೇ ಮದುವೆಯಾಗಿ ಯುವತಿಯೊಂದಿಗೆ ಸಂಸಾರ ನೆಡೆಸಲು ಹೊರಟಿದ್ದ ಭಂಡ ಗಂಡನಿಗೆ ಮೊದಲನೇ ಹೆಂಡತಿ ತಕ್ಕ ಶಾಸ್ತಿ ಮಾಡಿದ್ದಾಳೆ.
ಹಾಸನದ ರಾಜೇಶ್ ಎಂಬಾತ ಈ ಮುಂಚೆ ಎರಡು ಮದುವೆ ಆಗಿ ಈಗ ಮೂರನೇ ಮದುವೆಯನ್ನೂ ಇತ್ತೀಚೆಗೆ ಆಗಿದ್ದಾನೆ. 2006ರಲ್ಲಿ ಚನ್ನರಾಯಪಟ್ಟಣದ ಸೌಮ್ಯ ಎಂಬುವರೊಂದಿಗೆ ಸಪ್ತಪದಿ ತುಳಿದು 6 ವರ್ಷಗಳ ಕಾಲ ಅನ್ಯೋನ್ಯವಾಗಿದ್ದ. ಬಳಿಕ ಸಂಸಾರದಲ್ಲಿ ಎದುರಾದ ಕೆಲ ಸಣ್ಣಪಟ್ಟ ಘಟನೆಗಳಿಂದ ಹೆಂಡತಿಗೆ ಕಿರುಕುಳ ಕೊಟ್ಟು ಕೊನೆಗೆ ಹೆಂಡತಿಯೇ ಬೇಡ ಎಂದು ಕೌಟುಂಬಿಕ ನ್ಯಾಯಾಲಯದ ಮೊರೆಹೋದ.
ಇಬ್ಬರೂ ಜೊತೆಯಲ್ಲಿರಲು ಕೋರ್ಟ್ ಅವಕಾಶ ಕೊಟ್ಟಿದ್ದ ಸಮಯದಲ್ಲಿಯೇ ಅರಕಲಗೂಡಿನ ಮಲ್ಲಿಪಟ್ಟಣದ ಕಲಾ ಎಂಬಾಕೆಯನ್ನು ಮದುವೆಯಾಗಿ, 10 ತಿಂಗಳು ಸಂಸಾರ ಮಾಡಿ ಆಕೆಗೂ ಕೊಡಬಾರದ ಟಾರ್ಚರ್ ಕೊಟ್ಟಿದ್ದ.
ಕಳೆದ ನವೆಂಬರ್ 15 ರಂದು ಮತ್ತೊಂದು ಯುವತಿಯನ್ನು ಮದುವೆಯಾಗಿದ್ದ. ಈಗ ಬೀಗರೂಟ ಎಂದು ಸಂಬಂಧಿಕರನ್ನೆಲ್ಲಾ ಕರೆದು ಮಾಂಸದೂಟ ಮಾಡಿಸಿದ್ದ. ಈ ಬಗ್ಗೆ ಮೊದಲನೇ ಹೆಂಡತಿಗೆ ವಿಷಯ ತಿಳಿದು ಪ್ರಶ್ನೆ ಮಾಡಿದ್ದಕ್ಕೆ ಬೀಗರ ಔತಣಕೂಟದಲ್ಲಿಯೇ ಹೆಂಡತಿ, ನಾದಿನಿ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಪೂಲೀಸರ ಮೇಲೆಯೂ ಹಲ್ಲೆ ಮಾಡಲು ಮುಂದಾಗಿದ್ದ.
ಭಂಡ ವರನಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೊರೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.