ಪ್ರೇಯಸಿ ಮಾಜಿ ಪತಿ ಸ್ನೇಹಿತನನ್ನು ಕೊಲೆ ಮಾಡಿದ ಪ್ರಿಯಕರ
ಪ್ರೇಯಸಿಯ ಮಾಜಿ ಪತಿ ಸ್ನೇಹಿತನನ್ನು ಪ್ರಿಯಕರ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ಹಾಸನದ ರಾಜಘಟ್ಟದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹಾಸನ, ನವೆಂಬರ್, 29: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ವಿಚ್ಛೇದಿತ ಪತಿಯನ್ನು ಅಣಕಿಸಿದ ಪರಿಣಾಮ ನಡೆದ ಜಗಳದಲ್ಲಿ ಅಮಾಯಕ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಜಿಲ್ಲೆಯ ರಾಜಘಟ್ಟದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ರಾಜೇಶ್ ಸಾವನ್ನಪ್ಪಿದ ದುರ್ದೈವಿ. ಈತನಿಗೆ ಚೂರಿಯಿಂದ ಚುಚ್ಚಿ ಹತ್ಯೆಗೈದ ಆರೋಪಿ ಅಣ್ಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ರಾಜಘಟ್ಟದ ನಿವಾಸಿ ಅನಿತಾ ಎಂಬಾಕೆ ಸ್ವಾಮಿ ಎಂಬಾತನನ್ನು ವಿವಾಹವಾಗಿದ್ದಳಾದರೂ ಇಬ್ಬರ ನಡುವೆ ವೈಮನಸ್ಸು ಬಂದ ಹಿನ್ನಲೆಯಲ್ಲಿ ವಿಚ್ಚೇದನೆ ಪಡೆದು ಒಂದೇ ಊರಿನಲ್ಲಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು.
ಇತ್ತೀಚೆಗೆ ಅದೇ ಊರಿಗೆ ಹುಬ್ಬಳ್ಳಿ ಮೂಲದ ಅಣ್ಣಪ್ಪ ಎಂಬಾತ ಬಂದಿದ್ದು ಆತನೊಡನೆ ಅನಿತಾ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ನಡುವೆ ಸೋಮವಾರ ರಾತ್ರಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ರಸಮಂಜರಿ ಕಾರ್ಯಕ್ರಮಕ್ಕೆ ಪ್ರಿಯಕರ ಅಣ್ಣಪ್ಪನೊಂದಿಗೆ ಅನಿತಾ ತೆರಳಿದ್ದಳು.
ಅದೇ ಕಾರ್ಯಕ್ರಮಕ್ಕೆ ಆಕೆಯ ವಿಚ್ಚೇದಿತ ಪತಿ ಸ್ವಾಮಿ ಕೂಡ ಬಂದಿದ್ದನು. ಆತನನ್ನು ನೋಡಿದ ಅನಿತಾ ಆತನನ್ನು ಕೆಣಕಲೆಂದು ಪ್ರಿಯಕರನೊಂದಿಗೆ ಸಲುಗೆಯಿಂದ ವರ್ತಿಸಿದ್ದಾಳೆ. ಇದನ್ನು ನೋಡಿದ ಸ್ವಾಮಿಗೆ ಕೋಪ ಬಂದಿದೆ.
ಹೀಗಾಗಿ ತನ್ನ ಗೆಳೆಯ ರಾಜೇಶ್ನನ್ನು ಕರೆದುಕೊಂಡು ಬಂದು ರಸ್ತೆಯಲ್ಲಿ ಅನಿತಾ ಮತ್ತು ಆಕೆಯ ಪ್ರಿಯಕರನಿಗಾಗಿ ಕಾದು ಕೂತಿದ್ದಾನೆ. ಅದೇ ಮಾರ್ಗವಾಗಿ ಅವರಿಬ್ಬರು ಬಂದಿದ್ದಾರೆ. ತಕ್ಷಣ ಅವರನ್ನು ಅಡ್ಡ ಹಾಕಿದ ಸ್ವಾಮಿ ಜಗಳಕ್ಕಿಳಿದಿದ್ದಾನೆ.
ಜಗಳ ವಿಕೋಪಕ್ಕೆ ತೆರಳಿ ಅಣ್ಣಪ್ಪ ತನ್ನ ಬಳಿಯಿದ್ದ ಚೂರಿಯಿಂದ ಚುಚ್ಚಿದ್ದಾನೆ. ಅದು ಸ್ವಾಮಿಯ ಗೆಳೆಯ ರಾಜೇಶ್ನ ಎದೆಗೆ ತಗುಲಿದ್ದು ಪರಿಣಾಮ ಗಂಭೀರವಾಗಿ ಗಾಯಗೊಂಡ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂದರ್ಭ ಸ್ವಾಮಿಗೂ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಆರೋಪಿ ಅಣ್ಣಪ್ಪ ಮತ್ತು ಅನಿತಾ ಅವರನ್ನು ಬಂಧಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.