ಹಾಸನ, ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿದ ಪತಿ
ಹಾಸನ, ಆಗಸ್ಟ್ 14: ಹಾಸನ ಜಿಲ್ಲೆಯ ಹೊಳೆನರಸೀಪುರ ನ್ಯಾಯಾಲಯದ ಆವರಣದಲ್ಲಿ ಗಂಡನೇ ಹೆಂಡತಿಯ ಕುತ್ತಿಗೆ ಸೀಳಿರುವ ಆಘಾತಕಾರಿ ಘಟನೆ ನಡೆದಿದೆ. ಎರಡು ವರ್ಷದಿಂದ ವಿಚ್ಛೇದನಕ್ಕಾಗಿ ಗಂಡ ಹೆಂಡತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಎರಡನೇ ಜೆಎಂಎಫ್ಸಿ ಕೋರ್ಟ್ನ ಶೌಚಾಲಯದ ಬಳಿ ಕೃತ್ಯ ನಡೆದಿದ್ದು ಆರೋಪಿ ಪತಿ ಶಿವಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿ ಚೈತ್ರಾ (32) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೊಳೆನರಸೀಪುರ ಕೌಟುಂಬಿಕ ನ್ಯಾಯಾಲಯದಲ್ಲಿ ಒಂದು ಗಂಟೆ ಕಾಲ ಕೌನ್ಸೆಲಿಂಗ್ ಮುಗಿಸಿ ಹೊರಬಂದ ಬಳಿಕ ಆರೋಪಿ ಶಿವಕುಮಾರ್, ಪತ್ನಿ ಚೈತ್ರಾ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆ ಶೌಚಾಲಯಕ್ಕೆ ತೆರಳುತ್ತಿದ್ದನ್ನು ಗಮನಿಸಿದ ಆತ, ಹಿಂಬಾಲಿಸಿ, ಮಚ್ಚಿನಿಂದ ಅವಳ ಕತ್ತು ಸೀಳಿದ್ದಾನೆ.
ಬಳಿಕ ಮಗುವಿನ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾನೆ. ವಿಪರೀತ ರಕ್ತಸ್ರಾವದಿಂದ ಬಳಲುತ್ತಿದ್ದ ಚೈತ್ರಾರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸುತ್ತಿದ್ದ ಶಿವಕುಮಾರ್ನನ್ನು ಪಕ್ಕದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಕುಮಾರ್ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ.
ಘಟನೆಯ ಕೆಲ ನಿಮಿಷಗಳ ಹಿಂದೆ, ಕೌನ್ಸೆಲಿಂಗ್ ಸೆಷನ್ನಲ್ಲಿ, ದಂಪತಿಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಿಟ್ಟು ತಮ್ಮ ಏಳು ವರ್ಷಗಳ ದಾಂಪತ್ಯವನ್ನು ಉಳಿಸಿಕೊಂಡು ಮತ್ತೆ ಒಂದಾಗಲು ಒಪ್ಪಿಕೊಂಡಿದ್ದರು. ಆದಾಗಿ ಕೆಲವೇ ಕ್ಷಣಗಳಲ್ಲಿ ಈ ಕೃತ್ಯ ನಡೆದಿದೆ.
ಇನ್ನು, ನ್ಯಾಯಾಲಯದ ಸಂಕೀರ್ಣದೊಳಗೆ ಆಯುಧವನ್ನು ತೆಗೆದುಕೊಂಡು ಬರಲು ಆರೋಪಿಗೆ ಹೇಗೆ ಸಾಧ್ಯವಾಯಿತು? ಎಂಬುದನ್ನು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
"ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ. ಆತನನ್ನು ನಮ್ಮ ವಶದಲ್ಲಿಟ್ಟುಕೊಂಡಿದ್ದೇವೆ. ಆತ ಅಪರಾಧ ಎಸಗಲು ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಕೌನ್ಸೆಲಿಂಗ್ ನಂತರ ಏನಾಯಿತು ಮತ್ತು ನ್ಯಾಯಾಲಯದೊಳಗೆ ಆಯುಧವನ್ನು ಹೇಗೆ ತಂದರು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಇದೊಂದು ಪೂರ್ವಯೋಜಿತ ಕೊಲೆಯೇ ಎಂಬ ಬಗ್ಗೆಯೂ ತನಿಖೆಯ ವೇಳೆ ವಿವರ ಸಿಗಲಿದೆ" ಎಂದು ಹಾಸನದ ಹಿರಿಯ ಪೊಲೀಸ್ ಅಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.