ವೈರಾಗ್ಯ ಮೂರ್ತಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭೀಷೇಕ
ಶ್ರವಣಬೆಳಗೊಳ, ಫೆಬ್ರವರಿ 07: 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಉತ್ಸವ ಇಂದು ಪ್ರಾರಂಭವಾಗಲಿದೆ. ಸತತ 20 ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರು ಚಾಲನೆ ನೀಡಲಿದ್ದಾರೆ.
20 ದಿನಗಳ ಕಾಲ ಗೊಮ್ಮಟ ನಗರಿ ಶ್ರವಣಬೆಳಗೊಳದಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಕಲಾವಿದರು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈಗಾಗಲೇ ನಗರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು, ಫೆಬ್ರವರಿ 17 ರಂದು ವೈರಾಗ್ಯ ಮೂರ್ತಿಗೆ ಮಹಾಮಜ್ಜನ ನಡೆಯಲಿದೆ. ಅಂದು ಮಸ್ತಕಾಭಿಷೇಕದ ವೇಳೆ ಹೈಟೆಕ್ ಅಟ್ಟಣಿಗೆ ಮೇಲೆ 5 ಸಾವಿರ ಮಂದಿ ಒಟ್ಟಿಗೆ ಕೂರುವ ವ್ಯವಸ್ಥೆ ಮಾಡಲಾಗಿದೆ.
ಮಹಾಮಸ್ತಕಾಭಿಷೇಕಕ್ಕಾಗಿ ಶ್ರವಣಬೆಳಗೊಳ ವಿಶೇಷ ರೈಲು
ಮೊದಲ ದಿನ ರಾಷ್ಟ್ರಪತಿಗಳ ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡ, ಸೇರಿದಂತೆ ಹಲವು ರಾಜಕೀಯ ಮುಖಂಡರು ಇರಲಿದ್ದಾರೆ. ಆದರೆ ರೋಹಿಣಿ ಸಿಂಧೂರಿ ವರ್ಗಾವಣೆ ವಿಷಯವಾಗಿ ಬೇಸರಗೊಂಡಿದ್ದ ದೇವೇಗೌಡ ಅವರು ಮುಖ್ಯಂಮತ್ರಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದಿದ್ದ ಕಾರಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ನಾಳೆ (ಫೆ.8) ಬಾಹುಬಲಿ ತಂದೆ ವೃಷಭನಾಥರ ಪಂಚಕಲ್ಯಾಣದ ವಿಧಿಗಳು ಹಾಗೂ ವಿವಿಧ ಆರಾಧನೆಗಳು ಸಂಸ್ಕಾರ ಮಂಟಪದಲ್ಲಿ ನಡೆಯಲಿವೆ. 16ರಂದು ಶೋಭಾಯಾತ್ರೆ ಆಯೋಜಿಸಿದ್ದು, ಅಂದು ಬಾಹುಬಲಿ ಇತಿಹಾಸ, ಪ್ರಾಚೀನ ಕಾಲದ ಜಿನಮಂದಿರಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.
ಭಕ್ತಾಧಿಗಳಿಗೆ ಬಾಹುಬಲಿಯ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿದ್ದ ಬಾಹುಬಲಿ ದರ್ಶನಕ್ಕಾಗಿ 2 ಕಡೆಗಳಿಂದ ವಿಂಧ್ಯಗಿರಿ ಏರಲು ವ್ಯವಸ್ಥೆ ಮಾಡಲಾಗಿದ್ದು, ಜನದಟ್ಟಣೆ ನೋಡಿಕೊಂಡು ಸಾರ್ವಜನಿಕರನ್ನು ಬೆಟ್ಟದ ಮೇಲೆ ಕಳುಹಿಸಲಾಗುವುದು' ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಮಸ್ತಕಾಭಿಷೇಕ ನೋಡಲು ವಿವಿಧ ನಗರಗಳಿಂದ ಆಗಮಿಸುವವರಿಗಾಗಿ 600 ಕ್ಕೂ ಹೆಚ್ಚು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.