'ಕಡಿಮೆ ಅವಧಿ ಹಾಗೂ ಕಡಿಮೆ ವಚ್ಚದಲ್ಲಿ ಕೊರೊನಾ ಪರೀಕ್ಷೆ ನಡೆಸಬೇಕಿದೆ'
ಹಾಸನ, ಮೇ 1: 'ಎಲ್ಲಾ ಜಿಲ್ಲೆಗಳಲ್ಲಿ ಕಡಿಮೆ ಅವಧಿ ಹಾಗೂ ವೆಚ್ಚದಲ್ಲಿ ಕೋವಿಡ್ 19 ಪರೀಕ್ಷೆ ನಡೆಸುವ ಕುರಿತು ಸರ್ಕಾರ ಸೂಕ್ತ ಕ್ರಮವಹಿಸುತ್ತಿದ್ದು ಎಲ್ಲಾ ಆಸ್ಪತ್ರೆಗಳಲ್ಲಿ ಇದನ್ನು ಅಳವಡಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಲಾಗಿದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ಸಭೆ ನಡೆಸಿದ ಸಚಿವರು, ತಪಾಸಣೆ ಹಾಗೂ ಚಿಕಿತ್ಸೆಗೆ ಸುಧಾರಿತ ಕ್ರಮಗಳನ್ನು ಹಂತಹಂತವಾಗಿ ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.
ವಾವ್! ಕ್ವಾರಂಟೈನ್ ಕೇಂದ್ರದಲ್ಲಿ ಸುಮ್ಮನೆ ಕೂರಲಿಲ್ಲ ಈ ಕಾರ್ಮಿಕರು
ಈ ವರಗೆ ಕೊರೋನಾ ಸೋಂಕು ತಡೆ ಹೋರಾಟಕ್ಕೆ ಎಲ್ಲರೂ ಪಕ್ಷಾತೀತವಾಗಿ ಬೆಂಬಲ ನೀಡಿದ್ದು ಮುಂದಿನ ಕೆಲವು ತಿಂಗಳೂ ಇದೇ ರೀತಿಯ ಸಹಕಾರ ನಿರೀಕ್ಷೆ ಮಾಡುವುದಾಗಿ ಅವರು ತಿಳಿಸಿದರು.
ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು
ರಾಜ್ಯದಲ್ಲಿ ಲಾಕ್ಡೌನ್ ವೇಳೆ ಕಟ್ಟುನಿಟ್ಟಿನ ನಿಯಮ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡ ಕಾರಣ ಕೋವಿಡ್-19 ನಿಯಂತ್ರಣದಲ್ಲಿದೆ .ಈ ವರೆಗೆ 576 ಮಂದಿ ಸೋಂಕಿತರಾಗಿದ್ದು ಅದರಲ್ಲಿ 235 ಮಂದಿ ಗುಣಮುಖರಾಗಿದ್ದಾರೆ. ಕೇವಲ 22 ಮಂದಿ ಸಾವನಪ್ಪಿದ್ದಾರೆ ಎಂದು ಅರೋಗ್ಯ ಸಚಿವರು ಹೇಳಿದರು. ಲಾಕ್ಡೌನ್ ಕಾರಣದಿಂದ ರಕ್ತನಿಧಿಯಲ್ಲಿ ರಕ್ತ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು. ಆಸಕ್ತರು ಹೆಲ್ಪಲೈನ್ ಸಂಖ್ಯೆಗೆ ಕರೆ ಮಾಡಿದರೆ ಅವರಿದ್ದ ಜಾಗಕ್ಕೆ ಹೋಗಿ ರಕ್ತ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಶ್ರೀರಾಮುಲು ಅವರು ತಿಳಿಸಿದರು.
ಪ್ರಜ್ವಲ್ ರೇವಣ್ಣ ಒತ್ತಾಯ
ಲೋಕ ಸಭಾ ಸದಸ್ಯರಾದ ಪ್ರಜ್ವಲ್ರೇವಣ್ಣ ಮಾತನಾಡಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ಅರಸೀಕೆರೆ, ಚನ್ನರಾಯಪಟ್ಟಣ ಮತ್ತಿತರ ತಾಲ್ಲೂಕುಗಳಿಗೆ ಸಾವಿರಾರು ಮಂದಿ ಬರುವ ನಿರೀಕ್ಷೆ ಇದ್ದು ಇವರೆಲ್ಲರನ್ನು ಸಾಮೂಹಿಕವಾಗಿ ಒಂದೆಡೆ ಕ್ವಾರಂಟೈನ್ನಲ್ಲಿ ಇಡುವುದು ಅಪಾಯ ಅದರ ಬದಲು ಕಡಿಮೆ ವೆಚ್ಚದಲ್ಲಿ ದೊರೆಯುವ ಜಿಯೋ ಟ್ಯಾಗ್ಗಳನ್ನು ಹಾಕಿ ಮನೆಯಲ್ಲಿ ಇರಿಸಿ ನೆಟ್ವರ್ಕ್ ಮೂಲಕವೇ ಚಲನವಲನಗಳ ಬಗ್ಗೆ ನಿಗಾವಹಿಸಬಹುದು ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಜಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಹೆಚ್ಚುವರಿಯಾಗಿ ಎರೆಡೆರೆಡು ವೆಂಟಿಲೇಟರ್ಗಳನ್ನು ಪೂರೈಸಬೇಕು ಎಂದರು.
ವೆಂಟೆಲೇಟರ್ಗಳ ಖರೀದಿಸಿ ಎಂದ ಸಚಿವ
ಸರ್ಕಾರಿ ಕಚೇರಿಗಳು ಹಾಗೂ ವಾಣಿಜ್ಯ ಚಟುವಟಿಕೆ ಪ್ರಾರಂಭವಾಗುವುದರಿಂದ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್ಗಳು ಮತ್ತು ಮಾಸ್ಕ್ಗಳನ್ನು ಪೂರೈಸಬೇಕಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು. ಶಾಸಕರಾದ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಈ ಬಾರಿ ಆರೋಗ್ಯ ಇಲಾಖೆಯ ಕಟ್ಟಡಗಳ ದುರಸ್ಥಿ ಹಾಗೂ ನವೀಕರಣ ವೆಚ್ಚ ಕೈಬಿಟ್ಟು ಆ ಅನುದಾನದಲ್ಲಿ ವೆಂಟೆಲೇಟರ್ಗಳ ಖರೀದಿಗೆ ಬಳಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಉತ್ತಮಗೊಳ್ಳಬೇಕು
ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾ ದೇವರಾಜ್ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ಉತ್ತಮಗೊಳ್ಳಬೇಕು ಕೊರೋನಾ ವಾರಿಯರ್ಸ್ಗೆ ಹೆಚ್ಚಿನ ಸೌಲಭ್ಯ ದೊರೆಯಬೇಕು ಎಂದು ಹೇಳಿದರು. ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ ಅವರು ಮಾತನಾಡಿ ಕೋವಿಡ್-19 ಹೋರಾಟದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ 100-200 ರೂ ಭತ್ಯೆ ನೀಡಬೇಕು ಎಂದರು. ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಮಾತನಾಡಿ ತಾಲ್ಲೂಕುಗಳಿಗೆ ಹೆಚ್ಚಿನ ಪಿ.ಪಿ.ಕಿಟ್ ಗಳನ್ನು ಪೂರೈಸಬೇಕು ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಭವಣೆ ಹೆಚ್ಚುತ್ತಿದ್ದು, ಕನಿಷ್ಠ ಕೆರೆಗಳಿಗಾದರೂ ಹೇಮಾವತಿ ನಾಲೆಯಿಂದಕುಡಿಯುವ ಉದ್ದೇಶಕ್ಕೆ ನೀರು ಹರಿಸಬೇಕು ಎಂದು ಮನವಿ ಮಾಡಿದರು.